ಕನ್ನಡಪ್ರಭ ವಾರ್ತೆ ಬೆಂಗಳೂರು
ಮಕ್ಕಳನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಮಕ್ಕಳು ಶಿಕ್ಷಕರ ಬಳಿ ಬಂದ ಕ್ಷಣದಿಂದ ಮನೆಗೆ ಹಿಂದಿರುಗುವವರೆಗೆ ಶಿಕ್ಷಕರೇ ಜವಾಬ್ದಾರರು. ಆ ಜವಾಬ್ದಾರಿಯಿಂದ ಶಿಕ್ಷಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನುಡಿದಿದೆ.
ಪ್ರಕರಣದ ಸಂಬಂಧ ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಮದರಸ-ಇ-ಹಾಜರ ನಿಸ್ವಾನ್ ಶಾಲೆಯ ಶಿಕ್ಷಕರಾದ ನಝಿಯಾ ಬಾನು ಮತ್ತು ನಜಿಮಾ ಬಾನು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿತು.ಇದಕ್ಕೂ ಮುನ್ನ ವಿಚಾರಣೆ ನ್ಯಾಯಪೀಠ, ಶಿಕ್ಷಕರು ಮಕ್ಕಳನ್ನು ನೋಡಿಕೊಳ್ಳಬೇಕು. ಪ್ರಕರಣದಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಕೋಪದಿಂದ ನುಡಿಯಿತು. ಇದಕ್ಕೆ ಅರ್ಜಿದಾರರು ಪರ ವಕೀಲರು, ದುರಾದೃಷ್ಟವಶಾತ್ ಈ ಘಟನೆ ನಡೆದಿದೆ ಎಂದು ಸಮಜಾಯಿಷಿ ನೀಡಿದರು.
ಪ್ರಕರಣದಲ್ಲಿ ನಿರ್ಲಕ್ಷ್ಯ ಮತ್ತು ದುಡುಕುತನ ಏನಿಲ್ಲ. ಉದ್ದೇಶಪೂರ್ವಕವಾಗಿ ನಾಲೆ ಸಮೀಪ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪಾತ್ರೆ ತೊಳೆಯುವಂತೆ ಮಕ್ಕಳಿಗೆ ಶಿಕ್ಷಕರು ಏಕೆ ಹೇಳಿದರು? ಯಾವುದೇ ಕಾರಣಕ್ಕೂ ಶಿಕ್ಷಕರ ವಿರುದ್ಧ ಪ್ರಕರಣ ರದ್ದುಪಡಿಸುವುದಿಲ್ಲ. ಬೇಕಿದ್ದರೆ ಆರೋಪಗಳನ್ನು ಕೈ ಬಿಡಲು ಕೋರಿ ವಿಚಾರಣಾ ನ್ಯಾಯಾಲಯದ ಮುಂದೆಯೇ ಅರ್ಜಿ ಸಲ್ಲಿಸಲಿ ಎಂದು ಹೇಳಿ ಅರ್ಜಿ ವಜಾಗೊಳಿಸಿತು.
ಕಳೆದ ವರ್ಷ ನ.1ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಾಲೆಯಲ್ಲಿ ಕಾರ್ಯಕ್ರಮ ನಡೆದಿತ್ತು. ಶ್ರೀರಂಗಪಟ್ಟಣದ ತಾಲೂಕು ಮಂಡ್ಯಕೊಪ್ಪಲು ಬಳಿಯ ರಾಮಸ್ವಾಮಿ ನಾಲೆ ಬಳಿಗೆ ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರು ಮ್ಯಾಟ್, ಪಾತ್ರೆ ಸ್ವಚ್ಛಗೊಳಿಸಲು ಆಟೋದಲ್ಲಿ 13 ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ವಿದ್ಯಾರ್ಥಿಗಳಾದ ಉಮ್ಮೇಹನಿ, ಆಯಿಷಾ, ಆಫ್ರಿನ್ ಮತ್ತು ತಮ್ರಿನ್ ಕಾಲುಜಾರಿ ನೀರಿನಲ್ಲಿ ಬಿದ್ದು ಕೊಚ್ಚಿ ಹೋಗಿ ಸಾವನ್ನಪ್ಪಿದ್ದರು. ಮೃತ ಉಮ್ಮೇಹನಿ ತಂದೆ ಇಸ್ಮಾಯಿಲ್ ಘಟನೆ ಕುರಿತು ದೂರು ನೀಡಿದ್ದರು.