ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸಂಪರ್ಕ ಉಂಟಾಗಿ ಹಾವೇರಿ ಮೂಲದ ಗುತ್ತಿಗೆ ನೌಕರ ಕಂಬದಲ್ಲಿಯೇ ಮೃತಪಟ್ಟಿರುವ ಧಾರಣ ಘಟನೆ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಅಶೋಕ್ ಪುತ್ರ ಬಸವರಾಜ ಎಲ್ಲಿಗಾರ್ ಮೃತಪಟ್ಟ ಗುತ್ತಿಗೆ ನೌಕರ.

ಕನ್ನಡಪ್ರಭ ವಾರ್ತೆ ಮದ್ದೂರು

ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸಂಪರ್ಕ ಉಂಟಾಗಿ ಹಾವೇರಿ ಮೂಲದ ಗುತ್ತಿಗೆ ನೌಕರ ಕಂಬದಲ್ಲಿಯೇ ಮೃತಪಟ್ಟಿರುವ ಧಾರಣ ಘಟನೆ ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಅಶೋಕ್ ಪುತ್ರ ಬಸವರಾಜ ಎಲ್ಲಿಗಾರ್ ಮೃತಪಟ್ಟ ಗುತ್ತಿಗೆ ನೌಕರ. 11 ಕೆ.ವಿ ವಿದ್ಯುತ್ ತಂತಿಗಳಿಗೆ ಕೇಬಲ್ ಅಳವಡಿಸುವ ಗುತ್ತಿಗೆದಾರ ನಾಗಭೂಷಣ್ ಎಂಬುವರ ಬಳಿ ಬಸವರಾಜ ಎಲ್ಲಿಗಾರ್ ಕಳೆದ ಐದಾರು ವರ್ಷಗಳಿಂದ ಗುತ್ತಿಗೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದರು.

ಸೋಮವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕೆರೆಗೋಡು ಮತ್ತು ಕೊಪ್ಪ ಮಾರ್ಗದ ರಸ್ತೆಯಲ್ಲಿ ಅಡ್ಡ ಬಂದಿದ್ದ ವಿದ್ಯುತ್ ತಂತಿಗಳಿಗೆ ಸುರಕ್ಷತಾ ದೃಷ್ಟಿಯಿಂದ ಕೇಬಲ್ ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಇದಕ್ಕಾಗಿ ಕೊಪ್ಪ ವಿದ್ಯುತ್ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ ಬಳಿಕ ಕೇಬಲ್ ಅಳವಳಿಕೆ ಕಾರ್ಯ ನಡೆಯುತ್ತಿತ್ತು.

ಕೇಂದ್ರದ ಸಿಬ್ಬಂದಿ ದಿಢೀರ್ ಆಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಹಿನ್ನೆಲೆಯಲ್ಲಿ ಕಂಬದಲ್ಲಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಬಸವರಾಜ ಎಲ್ಲಿಗಾರ್ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ ಕೊನೆ ಉಸಿರಳೆದಿದ್ದಾರೆ.

ಸುದ್ದಿ ಕೇಳಿದ ತಕ್ಷಣ ಚೆಸ್ಕಾಂ ಸಹಾಯಕ ಎಂಜಿನಿಯರ್ ಶಿವಕುಮಾರ್, ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆಧಾವಿಸಿ ಗ್ರಾಮಸ್ಥರ ನೆರವಿನಿಂದ ಮೃತ ಬಸವರಾಜ ಎಲಿಗಾರ್‌ ಶವವನ್ನು ಕಂಬದಿಂದ ಇಳಿಸಿದ ಬಳಿಕ ಮಂಡ್ಯ ಜಿಲ್ಲಾ ಆಸ್ಪತ್ರೆ ಶವಗಾರಕ್ಕೆ ಮೃತ ದೇಹವನ್ನು ಸಾಗಿಸಲು ಕ್ರಮ ಕೈಗೊಂಡಿದ್ದಾರೆ.

ಸೆಸ್ಕಾಂನ 2ನೇ ಉಪವಿಭಾಗದ ಎಇಇ ಪಿ.ಮೋಹನ್, ನೌಕರರ ಸಂಘದ ಉಪಾಧ್ಯಕ್ಷ ಚನ್ನೇಗೌಡ, ಕಾರ್ಯದರ್ಶಿ ಶ್ರೀಧರ, ಲೈನ್‌ ಮ್ಯಾನ್ ಸಂಘದ ತನು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದರು. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆ ಎಸ್ ಐ ಭೀಮಪ್ಪ ಬಾಣಸಿ ಪ್ರಕರಣ ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪರಿಹಾರಕ್ಕೆ ಆಗ್ರಹ:

ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಗುತ್ತಿಗೆ ನೌಕರ ಬಸವರಾಜ ಎಲಿಗಾರ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಬಲವಾಡಿ ಗ್ರಾಪಂ ಮಾಜಿ ಅಧ್ಯಕ್ಷ ಎ.ಸುರೇಶ ಆಗ್ರಹಿಸಿದ್ದಾರೆ.

ಚೆಸ್ಕಾಂನ ವಿದ್ಯುತ್ ವಿತರಣ ಕೇಂದ್ರದ ಎಂ.ಇ.ಶಿವಕುಮಾರ್, ಸಿಬ್ಬಂದಿ ನಿರ್ಲಕ್ಷದಿಂದಾಗಿ ಬಸವರಾಜು ಸಾವು ಸಂಭವಿಸಿದೆ. ಹೀಗಾಗಿ ಶಿವಕುಮಾರ್ ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರದ ಜೊತೆಗೆ ಕುಟುಂಬಕ್ಕೆ ಉದ್ಯೋಗ ನೀಡುವಂತೆ ಆಬಲವಾಡಿ ಸುರೇಶ್ ಒತ್ತಾಯಿಸಿದ್ದಾರೆ.

ಪರಿಹಾರ ಮತ್ತು ಉದ್ಯೋಗ ನೀಡದಿದ್ದಲ್ಲಿ ಮದ್ದೂರು ಸೆಸ್ಕಾಂ ಉಪ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಸುರೇಶ್ ಎಚ್ಚರಿಸಿದ್ದಾರೆ.