ರಸ್ತೆ ಬದಿ ನಿಲುಗಡೆ ಮಾಡಿದ್ದ ಖಾಸಗಿ ಬಸ್‌ಗೆ ಕ್ಯಾಬ್‌ ಡಿಕ್ಕಿ : ಇಂಡಿಗೋ ಉದ್ಯೋಗಿ ಬಲಿ

KannadaprabhaNewsNetwork |  
Published : Apr 09, 2025, 02:04 AM ISTUpdated : Apr 09, 2025, 04:29 AM IST
Airport road accident | Kannada Prabha

ಸಾರಾಂಶ

ರಸ್ತೆ ಬದಿ ನಿಲುಗಡೆ ಮಾಡಿದ್ದ ಖಾಸಗಿ ಬಸ್‌ಗೆ ಹಿಂದಿನಿಂದ ವೇಗವಾಗಿ ಬಂದ ಕ್ಯಾಬ್‌ ಡಿಕ್ಕಿ ಹೊಡೆದು ಖಾಸಗಿ ಏರ್‌ಲೈನ್‌ ಸಂಸ್ಥೆಯ ಮಹಿಳಾ ಉದ್ಯೋಗಿ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ರಸ್ತೆ ಬದಿ ನಿಲುಗಡೆ ಮಾಡಿದ್ದ ಖಾಸಗಿ ಬಸ್‌ಗೆ ಹಿಂದಿನಿಂದ ವೇಗವಾಗಿ ಬಂದ ಕ್ಯಾಬ್‌ ಡಿಕ್ಕಿ ಹೊಡೆದು ಖಾಸಗಿ ಏರ್‌ಲೈನ್‌ ಸಂಸ್ಥೆಯ ಮಹಿಳಾ ಉದ್ಯೋಗಿ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಮಿಳುನಾಡಿನ ಮಧುರೈ ಮೂಲದ ಸ್ನೇಹಾ ಕುಮಾರಿ (24) ಮೃತ ದುರ್ದೈವಿ. ಈಕೆಯ ಸಹೋದ್ಯೋಗಿ ಕೌಸರ್‌ ಖಾನಂ(21) ಮತ್ತು ಕ್ಯಾಬ್‌ ಚಾಲಕ ವಿನಯ್‌(28) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಇಬ್ಬರೂ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಸ್ನೇಹಾ ಕುಮಾರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಂಡಿಗೋ ಏರ್‌ಲೈನ್ಸ್‌ ಕಸ್ಟಮರ್‌ ಕೇರ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಮುಂಜಾನೆ ಸುಮಾರು 4.30ಕ್ಕೆ ತಮ್ಮ ಸಹದ್ಯೋಗಿ ಕೌಸರ್‌ ಖಾನಂ ಅವರೊಂದಿಗೆ ಕ್ಯಾಬ್‌ನಲ್ಲಿ ಬಾಗಲೂರು ಕ್ರಾಸ್‌ ಕಡೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಪ್ರಯಾಣಿಸುತ್ತಿದ್ದರು.

ರಸ್ತೆ ಬದಿ ನಿಂತಿದ್ದ ಬಸ್‌ಗೆ ಡಿಕ್ಕಿ:ಏರ್‌ಪೋರ್ಟ್‌ ರಸ್ತೆಯ ಐಟಿಸಿ ಫ್ಯಾಕ್ಟರಿ ಸಮೀಪದ ಸರ್ವಿಸ್‌ ರಸ್ತೆಯಲ್ಲಿ ತೆರಳುವಾಗ ರಸ್ತೆ ಬದಿ ನಿಲುಗಡೆ ಮಾಡಿದ್ದ ಖಾಸಗಿ ಬಸ್‌ಗೆ ಹಿಂದಿನಿಂದ ಕ್ಯಾಬ್‌ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ನೇಹಾ ಕುಮಾರಿ, ಕೌಸರ್‌ ಖಾನಂ ಹಾಗೂ ಕ್ಯಾಬ್‌ ಚಾಲಕ ವಿನಯ್‌ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಮೂವರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತಲೆ ಹಾಗೂ ಕೈಗೆ ಗಂಭೀರ ಗಾಯವಾಗಿ ಚಿಕಿತ್ಸೆ ಫಲಿಸದೆ ಮುಂಜಾನೆ 7.30ಕ್ಕೆ ಸ್ನೇಹಾ ಕುಮಾರಿ ಮೃತಪಟ್ಟಿದ್ದಾರೆ. ಇನ್ನು ಗಾಯಗೊಂಡಿದ್ದ ಕೌಸರ್‌ ಖಾನಂ ಮತ್ತು ಕ್ಯಾಬ್‌ ಚಾಲಕ ವಿನಯ್‌ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅತಿವೇಗ-ನಿರ್ಲಕ್ಷ್ಯದ ಚಾಲನೆ:

ಅಪಘಾತಕ್ಕೆ ಕ್ಯಾಬ್‌ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕ್ಯಾಬ್‌ ಚಾಲಕ ಮಧ್ಯ ಸೇವಿಸಿರುವ ಬಗ್ಗೆ ಸದ್ಯಕ್ಕೆ ಖಚಿತವಾಗಿಲ್ಲ. ಆತನ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆಯಲ್ಲಿ ಕ್ಯಾಬ್‌ ಚಾಲಕ ಮತ್ತು ಖಾಸಗಿ ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ