ಕನ್ನಡಪ್ರಭ ವಾರ್ತೆ ಮಂಡ್ಯ
ಅಯ್ಯಪ್ಪಸ್ವಾಮಿ ದರ್ಶನಕ್ಕೆ ಭಕ್ತರನ್ನು ಕರೆದೊಯ್ದಿದ್ದ ಖಾಸಗಿ ಬಸ್ ಪಲ್ಟಿಯಾಗಿ 33 ಮಂದಿ ಮಾಲಾಧಾರಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೇರಳ ರಾಜ್ಯದ ಏರಿಮಲೈ ಬಳಿ ನಡೆದಿದೆ.ಕೆ.ಆರ್.ಪೇಟೆ ತಾಲೂಕಿನ ಯಾಲದಹಳ್ಳಿಕೊಪ್ಪಲು ಗ್ರಾಮದ 33 ಮಂದಿ ಮಾಲಾಧಾರಿಗಳು ಭೈರವ ಟೂರ್ಸ್ ಮತ್ತು ಟ್ರಾವಲ್ಸ್ ಶಿವಮೊಗ್ಗದ ಖಾಸಗಿ ಬಸ್ (ಕೆಎಂ 20, ಡಿ.4119) ನಲ್ಲಿ ಶಬರಿಮಲೆಗೆ ತೆರಳುತ್ತಿದ್ದರು.
ಕೇರಳದ ಏರಿಮಲೈ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದರೂ ನಂತರ ಸ್ಥಳೀಯ ಆಡಳಿತ ಭಕ್ತರಿಗೆ ಯಾವುದೇ ಸೌಲಭ್ಯ ಕಲ್ಪಿಸದೆ ನಿರ್ಲಕ್ಷ್ಯ ಮಾಡಿದೆ.ಇದರಿಂದ ಗಾಯಾಳುಗಳು ಸೇರಿದಂತೆ ಎಲ್ಲಾ ಭಕ್ತರು ಕೇರಳದ ರಸ್ತೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಸಬರಿ ಮಲೆಗೆ ಹೋಗಲು ಪರ್ಯಾಯ ಬಸ್ ಸೌಲಭ್ಯವಿಲ್ಲದೆ ಮಾಲಾಧಾರಿಗಳು ಕಂಗಾಲಾಗಿದ್ದಾರೆ.
ರಸ್ತೆ ದಾಟುತ್ತಿದ್ದ ವೃದ್ಧನಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ಸಾವುಕನ್ನಡಪ್ರಭ ವಾರ್ತೆ ಮದ್ದೂರು
ಹೆದ್ದಾರಿ ದಾಟುತ್ತಿದ್ದ ವೃದ್ಧನಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಮನ್ಮುಲ್ ಸಮೀಪದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬುಧವಾರ ಜರುಗಿದೆ.ತಾಲೂಕಿನ ಕುದುರೆಗುಂಡಿ ಗ್ರಾಮದ ಬೋರೇಗೌಡ (68) ಮೃತ ವ್ಯಕ್ತಿ. ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೋರೇಗೌಡನ ದೇಹದ ಅಂಗಾಂಗಗಳಿಗೆ ತೀವ್ರವಾಗಿ ಪೆಟ್ಟು ಬಿದ್ದು ರಕ್ತಸ್ರಾವ ಉಂಟಾದ ಪರಿಣಾಮ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾನೆ.
ಮೃತ ಬೋರೇಗೌಡ ಮನ್ಮುಲ್ ಆವರಣದಲ್ಲಿ ಬ್ಯಾಂಕ್ನಲ್ಲಿ ಪಿ.ಎಂ.ಕಿಸಾನ್ ಯೋಜನೆಯ ಹಣ ಡ್ರಾ ಮಾಡಲು ಬೆಂಗಳೂರು ಮೈಸೂರು ಹೆದ್ದಾರಿ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಅಪಘಾತದ ನಂತರ ಕಾರು ಸ್ಥಳದಿಂದ ಪರಾರಿಯಾಗಿದೆ. ಪೊಲೀಸರ ಮಾಹಿತಿ ಆಧಾರದ ಮೇಲೆ ಮಂಡ್ಯ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಸಂಚಾರಿ ಠಾಣೆ ಪೋಲಿಸರು ಸಿಪಿಐ ನವೀನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.