ಕನ್ನಡಪ್ರಭ ವಾರ್ತೆ ಬೆಂಗಳೂರು
ತನಗೆ ಸಂಬಳ ಕೊಡಲಿಲ್ಲ ಎಂದು ಕೋಪಗೊಂಡು ಕುಡಿದ ಅಮಲಿನಲ್ಲಿ ರೆಸ್ಟೋರೆಂಟ್ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆ ರೆಸ್ಟೋರೆಂಟ್ ಮಾಜಿ ಕೆಲಸಗಾರನೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.ಲಿಂಗರಾಜಪುರದ ನಿವಾಸಿ ವೇಲು ಮುರುಗನ್ ಬಂಧಿತನಾಗಿದ್ದು, ಮಹದೇವಪುರದ ಫಸ್ತಾ ಸ್ಟ್ರೀಟ್ ರೆಸ್ಟೋರೆಂಟ್ಗೆ ತನ್ನ ಮೊಬೈಲ್ನಿಂದ ಬುಧವಾರ ರಾತ್ರಿ ಕರೆ ಮಾಡಿ ಬಾಂಬ್ ಸ್ಫೋಟಿಸುವುದಾಗಿ ವೇಲು ಬೆದರಿಸಿದ್ದ. ಈ ಬಗ್ಗೆ ರೆಸ್ಟೋರೆಂಟ್ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಮಹದೇವಪುರ ಠಾಣೆ ಪೊಲೀಸರು, ಮೊಬೈಲ್ ಕರೆ ಮಾಹಿತಿ ಆಧರಿಸಿ ರಾತ್ರಿಯೇ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ.