ಕಳ್ಳತನ ಪ್ರಕರಣ: ೨೯ ಆರೋಪಿಗಳ ಬಂಧನ

KannadaprabhaNewsNetwork |  
Published : Apr 05, 2026, 01:30 AM IST
೪ಕೆಎಂಎನ್‌ಡಿ-೧ಜಿಲ್ಲೆಯ ನಾಲ್ಕು ಪೊಲೀಸ್ ಉಪ ವಿಭಾಗಗಳ ಪೊಲೀಸರು ೨೯ ಕಳ್ಳರನ್ನು ಬಂಧಿಸಿ ಅವರಿಂದ ವಶಪಡಿಸಿಕೊಳ್ಳಲಾದ ಚಿನ್ನಾಭರಣ, ಬೆಳ್ಳಿ, ನಗದು ಜೊತೆ ಪೊಲೀಸ್ ಅಧಿಕಾರಿಗಳು. | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯ ನಾಲ್ಕು ಪೊಲೀಸ್ ಉಪ ವಿಭಾಗಗಳಲ್ಲಿ ನಡೆದಿರುವ ಕಳ್ಳತನ ಪ್ರಕರಣಗಳಲ್ಲಿ ೨೮ ಮಂದಿ ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣ, ಬೆಳ್ಳಿ, ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ೨.೨೦ ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ನಾಲ್ಕು ಪೊಲೀಸ್ ಉಪ ವಿಭಾಗಗಳಲ್ಲಿ ನಡೆದಿರುವ ಕಳ್ಳತನ ಪ್ರಕರಣಗಳಲ್ಲಿ ೨೮ ಮಂದಿ ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣ, ಬೆಳ್ಳಿ, ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ೨.೨೦ ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಮಳವಳ್ಳಿ ಉಪ ವಿಭಾಗಗಳಿಂದ ಒಟ್ಟಾರೆ ೩೯ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ೧.೪೮೪ ಕೆ.ಜಿ. ಚಿನ್ನಾಭರಣ, ೯೫೦ ಗ್ರಾಂ ಬೆಳ್ಳಿ, ೨೬ ದ್ವಿಚಕ್ರ ವಾಹನಗಳು ಹಾಗೂ ೩೦ ಸಾವಿರ ರು. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಕಾರು, ೨೫೧ ಗ್ರಾಂ ತೂಕದ ಚಿನ್ನಾಭರಣ, ೭೯ ಗ್ರಾಂ ತೂಕದ ಚಿನ್ನದ ಗಟ್ಟಿ ಸೇರಿ ಒಟ್ಟು ೩೩೦ ಗ್ರಾಂ ಚಿನ್ನ, ನಗರದ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೯೫೦ ಗ್ರಾಂ ತೂಕದ ಬೆಳ್ಳಿ ಪದಾರ್ಥಗಳು, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದರು.

ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯ ೧.೦೫ ಗ್ರಾಂ ತೂಕದ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ, ಮದ್ದೂರು ಪೊಲೀಸ್ ಠಾಣೆಯ ಪ್ರಕರಣದಲ್ಲಿ ೫೦ ಗ್ರಾಂ ಚಿನ್ನದ ಮಾಂಗಲ್ಯ ಸರ, ೩೨ ಗ್ರಾಂ ಚಿನ್ನದ ಸರ ಸೇರಿದಂತೆ ೮೨ ಗ್ರಾಂ ಚಿನ್ನಾಭರಣ, ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೧೧.೨ ಗ್ರಾಂ ಚಿನ್ನದ ಸರ, ೨ ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು ೪ ಪ್ರಕರಣಗಳಲ್ಲಿ ೧೫೬.೩೬ ಗ್ರಾಂ ತೂಕದ ಚಿನ್ನಾಭರಣ, ೩೦ ಸಾವಿರ ನಗದು, ೨ ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.

ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಾಂಡವಪರ ತಾಲೂಕು ಚಿನಕುರಳಿ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದ ಮಧು ಬಿನ್. ಹೊಂಬಾಳಯ್ಯ ಎಂಬಾತನ್ನು ಬಂಧಿಸಿದ್ದು, ಆತನಿಂದ ೩.೫೦ ಲಕ್ಷ ರು. ಮೌಲ್ಯದ ೧೧ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದರು.

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೨೦೦ ಗ್ರಾಂ ಚಿನ್ನಾಭರಣ ಹಾಗೂ ೬ ಬೈಕ್‌ಗಳನ್ನು ವಶಪಕ್ಕೆ ಪಡೆಯಲಾಗಿದೆ ಎಂದರು. ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ, ಡಿವೈಎಸ್ಪಿ ಚಲುವರಾಜು, ಕೃಷ್ಣಕುಮಾರ್, ಯಶ್ವಂತ್‌ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಗೋಷ್ಠಿಯಲ್ಲಿ ಇದ್ದರು.

ಇದೇ ವೇಳೆ ಚಿನ್ನಾಭರಣ, ದ್ವಿಚಕ್ರ ವಾಹನಗಳನ್ನು ಕಳೆದುಕೊಂಡಿದ್ದ ವಾರಸುದಾರರಿಗೆ ವಸ್ತುಗಳನ್ನು ವಿತರಿಸಲಾಯಿತು. ೧.೦೬ ಕೋಟಿ ರು. ಮೌಲ್ಯದ ವಸ್ತು ವಶ

ನಾಗಮಂಗಲ ಟೌನ್ ಪೊಲೀಸ್ ಠಾಣೆಯ ೨ ಪ್ರಕರಣಗಳಲ್ಲಿ ೭೪೩.೯೧೪ ಗ್ರಾಂ ತೂಕದ ಚಿನ್ನದ ಒಡವೆಗಳು ೨ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ೧.೦೬ ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ. ಶೋಭಾರಾಣಿ ಮಾಹಿತಿ ನೀಡಿದರು.

ಆರೋಪಿಗಳಾದ ಬೆಂಗಳೂರಿನ ಕೆಪಿ. ಅಗ್ರಹಾರ ನಿವಾಸಿ ಡೇವಿಡ್ ಡಿ.ಸಿಲ್ವಾ, ಮಂಡ್ಯದ ಷುಗರ್‌ಟೌನ್ ನಿವಾಸಿ ಹನುಮಂತೇಗೌಡ, ಚಾಮರಾಜನಗರ ಜಿಲ್ಲೆಯ ಕಿರಗಸೂರು ಗ್ರಾಮದ ನವೀನ ಎಸ್.ಎಂ. ಎಂಬ ಮೂವರು ಆರೋಪಿಗಳು ನಾಗಮಂಗಲದ ಪಂಪ್‌ಹೌಸ್ ರಸ್ತೆಯಲ್ಲಿ ವಾಸವಾಗಿರುವ ಜಯಲಕ್ಷ್ಮಿ ಕೋಂ ರಮೇಶ ಎಂಬುವರ ಮನೆಯಲ್ಲಿ ಹಾಡಹಗಲೇ ಕಳ್ಳತನ ಮಾಡಿದ್ದಾರೆ. ಆರೋಪಿಗಳು ೧೬ ಕಡೆಗಳಲ್ಲಿ ಕಳ್ಳತನ ನಡೆಸಿದ್ದು, ಸಿಸಿಟಿವಿ ಕ್ಯಾಮೆರಾಗಳು ಕಂಡುಬಂದಲ್ಲಿ ಮೊದಲ ಕ್ಯಾಮೆರಾದಿಂದ ಮತ್ತೊಂದು ಕ್ಯಾಮೆರಾ ಕಡೆಗೆ ಹೋಗುವಾಗ ಬಟ್ಟೆ ಬದಲಿಸಿಕೊಂಡು ಹೋಗುತ್ತಿದ್ದರು ಎಂದು ಹೇಳಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬರ್ತ್‌ಡೇ ನೆಪದಲ್ಲಿ ರೌಡಿಶೀಟರ್‌ ರೇವ್‌ ಪಾರ್ಟಿ
ಮಗು ಸಾವಿನ ಶಾಕ್‌ನಿಂದ ತಾಯಿಯೂ ಆತ್ಮ*ತ್ಯೆ