ಕಪ್‌ತುಳಿತ : 2ನೇ ಬಾರಿಯೂ ದಯಾನಂದ್‌ ವಿಚಾರಣೆಗೆ ಗೈರು

Sujatha NRPublished : Jun 21, 2025 11:27 AM

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದ ಕುರಿತು ನಡೆಯುತ್ತಿರುವ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಎರಡನೇ ಬಾರಿಯು ಗೈರು ಹಾಜರಾಗಿದ್ದಾರೆ.

  ಬೆಂಗಳೂರು :  ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದ ಕುರಿತು ನಡೆಯುತ್ತಿರುವ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಎರಡನೇ ಬಾರಿಯು ಗೈರು ಹಾಜರಾಗಿದ್ದಾರೆ.

ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ದಯಾನಂದ್‌ಗೆ ವಿಚಾರಣಾಧಿಕಾರಿ ಜಿ.ಜಗದೀಶ್ ಅವರು ನೋಟಿಸ್ ನೀಡಿದ್ದರು. ಆದರೆ, ಅವರು ವಿಚಾರಣೆಗೆ ಬಂದಿರಲಿಲ್ಲ. ಈ ಹಿಂದೆಯೂ ನೀಡಿದ್ದ ವಿಚಾರಣೆಗೆ ಹಾಜರಾಗಿಲ್ಲ. ಗೈರು ಹಾಜರಿಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ.

ಉಳಿದಂತೆ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಕಬ್ಬನ್‌ಪಾರ್ಕ್ ಉಪ ವಿಭಾಗದ ಎಸಿಪಿ ಬಾಲಕೃಷ್ಣ, ಕಬ್ಬನ್‌ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಗಿರೀಶ್ ಮತ್ತು ಸಬ್ ಇನ್ಸ್‌ಪೆಕ್ಟರ್‌ ಸೇರಿ ಸಂಬಂಧಿಸಿದ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.

ವಿಜಯೋತ್ಸವ ಆಚರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಕೆ, ಪ್ರಕ್ರಿಯೆಗಳು, ಭದ್ರತೆ, ಮೇಲ್ವಿಚಾರಣೆ, ಲಭ್ಯವಿದ್ದ ಪೊಲೀಸ್ ಸಿಬ್ಬಂದಿ, ಸಿದ್ಧತೆಗಳು, ಕೆಎಸ್‌ಸಿಎ ಪದಾಧಿಕಾರಿಗಳು ಹಾಗೂ ಈವೆಂಟ್ ಮ್ಯಾನೇಜ್ಮೆಂಟ್ ಕೈಗೊಂಡಿದ್ದ ಪೂರ್ವ ಸಿದ್ಧತೆಗಳ ಕುರಿತು ವಿಚಾರಣಾಧಿಕಾರಿಯವರು ಈಗಾಗಲೇ ಹೇಳಿಕೆ ದಾಖಲಿಸಿದ್ದಾರೆ.

ಗಾಯಾಳುಗಳು, ಸಾರ್ವಜನಿಕರು, ಪ್ರತ್ಯಕ್ಷದರ್ಶಿಗಳು ಹಾಗೂ ಮೃತರ ಕುಟುಂಬದ ಸದಸ್ಯರಿಂದಲೂ ಹೇಳಿಕೆ ಪಡೆದಿರುವ ಜಿಲ್ಲಾಧಿಕಾರಿಗೆ 15 ದಿನಗಳಲ್ಲಿ ವರದಿ ಸಲ್ಲಿಸಲು ಗಡುವು ನೀಡಲಾಗಿದೆ. ಮುಂದಿನ ವಾರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Read more Articles on