- ಹಿರಿಯ ವಿದ್ವಾಸ ಟಿ.ವಿ. ವೆಂಕಟಾಚಲ ಶಾಸ್ತ್ರಿ ಅಭಿಮತ
- ವಿವಿಧ ಕ್ಷೇತ್ರದ ಸಾಧಕರಿಗೆ ಹೊಯ್ಸಳ ಪ್ರಶಸ್ತಿ ಪ್ರದಾನ-ಕನ್ನಡಪ್ರಭ ವಾರ್ತೆ ಮೈಸೂರುಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಳ ಮೌಲ್ಯ ಕಡಿಮೆ ಆಗುತ್ತಿದೆ. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಪಮಾನಕಾರ ಎಂದು ಹಿರಿಯ ವಿದ್ವಾಂಸ ನಾಡೋಜ ಟಿ.ವಿ. ವೆಂಕಟಾಚಲ ಶಾಸ್ತ್ರಿ ತಿಳಿಸಿದರು.
ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ ಗಾನ ಭಾರತೀ ವೀಣಾ ಶೇಷಣ್ಣ ಭವನದಲ್ಲಿ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗವು ಭಾನುವಾರ ಆಯೋಜಿಸಿದ್ದ ಹೊಯ್ಸಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಕ್ಷೇತ್ರದಲ್ಲಿ ಸೇವೆಯನ್ನು ಪರಿಗಣಿಸಿ ಸನ್ಮಾನಿಸಬೇಕು. ಮನ್ನಣೆಯ ಪ್ರಮಾಣ ಒಂದು ಮಟ್ಟದಲ್ಲಿ ಇದ್ದರೆ ಸಹ್ಯವಾಗಿ ಇರುತ್ತದೆ. ಅದು ಮಿತಿ ಮೀರಿದರೆ ಆತ್ಮವನ್ನೇ ತಿನ್ನಲಿದೆ ಎಂದರು.ಅನೇಕ ಸಾಹಿತಿಗಳು, ವಿದ್ವಾಂಸರು, ವಿವಿಧ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿ ಇಂದಿಗೂ ಯಾವುದೇ ಪ್ರಶಸ್ತಿ, ಗೌರವ, ಸನ್ಮಾನಕ್ಕೆ ಒಳಗೊಳ್ಳದಿರುವವರು ಇದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕವಯತ್ರಿ ಡಾ. ಲತಾ ರಾಜಶೇಖರ್ ಮಾತನಾಡಿ, ಕನ್ನಡ ಭಾಷೆ ಚಿನ್ನದ ಭಾಷೆ ನಿಜ. ಆದರೆ, ಚಿನ್ನಕ್ಕಿಂತ ಅನ್ನದ ಭಾಷೆಯಾಗಬೇಕು. ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡುವಂತಹ, ಕನ್ನಡದ ಅನಿವಾರ್ಯವನ್ನು ಸೃಷ್ಟಿಸುವ ಅಗತ್ಯವಿದೆ. ಇದು ಸರ್ಕಾರದ ಮಟ್ಟದಿಂದಲೇ ಆಗಬೇಕು. ಎಲ್ಲಾ ಕಡತಗಳು, ಆಡಳಿತ ವ್ಯವಹಾರಗಳನ್ನು ಕನ್ನಡದಲ್ಲಿ ವ್ಯವಹರಿಸುವ ಕೆಲಸವಾಗಬೇಕು ಎಂದರು.ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ಇಂಗ್ಲಿಷ್ ಮಯವಾಗಿದ್ದ ವೈದ್ಯಕೀಯ ಕ್ಷೇತ್ರವನ್ನು ಕನ್ನಡೀಕರಣಗೊಳಿಸುವ ಕೆಲಸಗಳು ನಡೆಯುತ್ತಿವೆ. ಈಚೆಗೆ 2 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಕ್ಷೇತ್ರದ ಪುಸ್ತಕಗಳು ಹೊರ ಬಂದಿವೆ. ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದಿಂದ 50 ಸಾವಿರ ವೈದ್ಯಕೀಯ ಪದಗಳನ್ನು ಕನ್ನಡಕ್ಕೀರಣ ಮಾಡಲಾಗಿದೆ ಎಂದು ಹೇಳಿದರು.
ಮೈಸೂರು ವಿವಿಯಿಂದಲೂ ವೈದ್ಯಕೀಯ ಕ್ಷೇತ್ರದ ಕನ್ನಡದ ದೊಡ್ಡ ಗ್ರಂಥವನ್ನು ಹೊರ ತರಲಿದೆ. ಇಂಗ್ಲಿಷ್ ಮಯ ಆಗಿದ್ದದಂತಹ ವೈದ್ಯಕೀಯ ಸಂಘವನ್ನು ಕನ್ನಡ ಮಯ ಮಾಡುವ ಕೆಲಸಗಳು ನಿರಂತರ ನಡೆಯುತ್ತಿವೆ ಎಂದು ಅವರು ತಿಳಿಸಿದರು.ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರದ ಸಾಧಕರಾದ ಡಾ.ಡಿ.ಕೆ. ರಾಜೇಂದ್ರ (ಜನಪದ ಮತ್ತು ಸಾಹಿತ್ಯ ಕ್ಷೇತ್ರ), ಜಿ. ಸತ್ಯನಾರಾಯಣ (ಪತ್ರಿಕೋದ್ಯಮ), ಮೈಸೂರು ಕುಮಾರ್ (ಅಧ್ಯಾತ್ಮ ಮತ್ತು ಜ್ಯೋತಿಷ್ಯ), ಆರ್. ರಘು (ಶಿಕ್ಷಣ), ಡಾ.ಜಿ.ಸಿ. ಪ್ರಹ್ಲಾದ ರಾವ್ (ವೈದ್ಯಕೀಯ), ಶಿವಬಸಪ್ಪ ಹೊರೆಯಾಲ (ಆಡಳಿತ ಮತ್ತು ರಂಗಭೂಮಿ), ಸಂತೋಷ್ ಕುಮಾರ ಮೆಹಂದಳೆ (ಸಾಹಿತ್ಯ), ಪ್ರಶಾಂತ್ (ಛಾಯಾಚಿತ್ರಗ್ರಹಣ), ಕುವೆಂಪು ಪ್ರಕಾಶ್ (ಸಂಘಟನೆ ಮತ್ತು ಗಾಯನ), ಡಾ. ಅಹಲ್ಯ (ವೈದ್ಯಕೀಯ), ಪ್ರೊ. ಲಕ್ಷ್ಮೀದೇವಿ ನಾರಾಯಣ್ (ಶಿಕ್ಷಣ), ಜೆ.ವಿ. ಗಾಯತ್ರಿ (ಪತ್ರಾಗಾರ), ಡಾ.ಎಂ.ಎಸ್. ವಿಜಯಾಹರನ್ (ಸಾಹಿತ್ಯ), ಶಾರದಾ ಶಿವಲಿಂಗಸ್ವಾಮಿ (ರೋಟರಿ ಸೇವೆ), ಪ್ರತಿಭಾ ಪೆರೇರಾ (ಸಮಾಜಸೇವೆ), ವಿದುಷಿ ಅನಿತಾ (ಭರತನಾಟ್ಯ) ಅವರಿಗೆ ಹೊಯ್ಸಳ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಶಾಶ್ವತಿ ಸೇವಾ ಸಮಿತಿಯ ಭಾನುಪ್ರಕಾಶ್ ಶರ್ಮ, ಹಿರಿಯ ವಿದ್ವಂಸ ಡಾ.ಎನ್.ಎಸ್. ತಾರಾನಾಥ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಸಮಾಜ ಸೇವಕ ಕೆ. ರಘುರಾಂ, ಸವಿಗನ್ನಡ ಪತ್ರಿಕೆಯ ರಂಗನಾಥ್ ಮೈಸೂರು ಮೊದಲಾದವರು ಇದ್ದರು.