;Resize=(412,232))
ಕಿಚ್ಚ ಸುದೀಪ್ ದೇಶವೇ ಮೆಚ್ಚಿದ ನಟ. ಆದರೆ ಅವರ ಪ್ರತಿಭೆಯನ್ನು ಬಳಸಿಕೊಳ್ಳಲು ಕನ್ನಡದ ನಿರ್ದೇಶಕ, ನಿರ್ಮಾಪಕರು ಹಿಂದೆ ಉಳಿಯುತ್ತಿರುವುದು ಸದ್ಯದ ವಿಷಾದನೀಯ ಸಂಗತಿ.
ಅವರ ಹೊಸ ಸಿನಿಮಾವನ್ನು ತೆಲುಗು ನಿರ್ದೇಶಕ ನಿರ್ದೇಶನ ಮಾಡುತ್ತಿದ್ದು, ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ.
ಈ ನಡುವೆ ‘ಬಿಲ್ಲಾ ರಂಗಾ ಬಾಷಾ’ ಕುರಿತು ಯಾವುದೇ ಮಾಹಿತಿ ಲಭಿಸುತ್ತಿಲ್ಲ. ಗಾಂಧಿನಗರದ ಬಾತ್ಮಿದಾರರ ಪ್ರಕಾರ ಆ ಸಿನಿಮಾ ಸದ್ಯಕ್ಕೆ ಟೇಕಾಫ್ ಆಗುವುದು ಖಚಿತವಿಲ್ಲ. ಅದರ ಹೊರತಾಗಿ ಕನ್ನಡದ ನಿರ್ದೇಶಕ, ನಿರ್ಮಾಪಕರು ಯಾರಾದರೂ ಅವರಿಗೆ ಸಿನಿಮಾ ಮಾಡುತ್ತಿದ್ದಾರೆಯೇ ಎಂದು ನೋಡಿದರೆ ಉತ್ತರ ನಿರಾಶೆ.
‘ವಿಕ್ರಾಂತ್ ರೋಣ’ ಆದ ಮೇಲೆ ಅವರ ಯಾವ ಸಿನಿಮಾವನ್ನೂ ಕನ್ನಡದ ನಿರ್ದೇಶಕರು ಮತ್ತು ನಿರ್ಮಾಪಕರು ಮಾಡಿಲ್ಲ. ‘ಮ್ಯಾಕ್ಸ್’ ಮತ್ತು ‘ಮಾರ್ಕ್’ ಎರಡೂ ಸಿನಿಮಾ ತಮಿಳು ನಿರ್ದೇಶಕ, ನಿರ್ಮಾಪಕರುಗಳದು. ‘ಬಿಲ್ಲಾ ರಂಗಾ ಬಾಷಾ’ ತೆಲುಗು ನಿರ್ಮಾಪಕರು ಮಾಡಬೇಕಿತ್ತಾದರೂ ಅವರು ಕೊಂಚ ಹೆಜ್ಜೆ ಹಿಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಸುದೀಪ್ ತೆಲುಗು ನಿರ್ದೇಶಕನ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಕನ್ನಡದ ನಿರ್ಮಾಪಕರು ಈ ಪ್ರತಿಭೆ ಬಳಸಿಕೊಳ್ಳಲು ಏಕೆ ಮುಂದಾಗುತ್ತಿಲ್ಲ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಕಾರ್ತಿಕ್ ಗೌಡ ಸಾರಥ್ಯದ ಕೆಆರ್ಜಿ ಸಂಸ್ಥೆ ಕಿಚ್ಚ ಸುದೀಪ್ ನಟನೆ, ನಿರ್ದೇಶನದ ಸಿನಿಮಾ ಘೋಷಣೆ ಮಾಡಿತ್ತು. ಆದರೆ ಆ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂಬ ಮಾಹಿತಿ ಇಲ್ಲ.
ಕಿಚ್ಚ ಸುದೀಪ್ ಅವರು ಅಭಿಮಾನಿಗಳಿಗೆ ವರ್ಷಕ್ಕೊಂದು ಸಿನಿಮಾ ಕೊಡಬೇಕು ಎಂಬ ನಿರ್ಧಾರ ಮಾಡಿದ್ದರೂ ಕನ್ನಡದ ನಿರ್ಮಾಪಕರು ಯಾಕೆ ಮನಸ್ಸು ಮಾಡುತ್ತಿಲ್ಲ ಎಂಬುದಕ್ಕೆ ಸದ್ಯಕ್ಕಂತೂ ಉತ್ತರ ದೊರೆಯುತ್ತಿಲ್ಲ.