ನವದೆಹಲಿ: ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣ ಸ್ವೀಕರಿಸಿದ ಸಮಾರಂಭದಲ್ಲಿ ಭಾರತದ ನೆರೆ ರಾಷ್ಟ್ರಗಳ ಒಗ್ಗಟ್ಟು ಮೇಳೈಸಿತು. ಭಾರತದೊಂದಿಗೆ ಸದಾ ಸಂಘರ್ಷ ಕಾರುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು಼ ಅವರೂ ಸೇರಿದಂತೆ ಏಳು ವಿದೇಶಿ ಗಣ್ಯರು ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಚೀನಾಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಒಂದೇ ವೇದಿಕೆಯಲ್ಲಿ ನೆರೆ ರಾಷ್ಟ್ರಗಳ ಸದಸ್ಯರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಭಾರತ ಸರ್ಕಾರದ ‘ಸಾಗರ್’ ಯೋಜನೆಯ ಮೂಲಕ ನೆರೆ ರಾಷ್ಟ್ರಗಳಿಗೆ ಮೊದಲ ಆದ್ಯತೆ ನೀಡುವ ವಿದೇಶಾಂಗ ನೀತಿಗೆ ಬೆಂಬಲಿಸಿದರು.
ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ ನಡೆದ ಸಮಾರಂಭದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಸೀಶೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫೀಫ್, ಮಾರಿಷಸ್ ಪ್ರಧಾನಿ ಪ್ರವೀಂದ್ ಕುಮಾರ್, ಭೂತಾನ್ ಪ್ರಧಾನಿ ತಾಬ್ಗೆ, ನೇಪಾಳ ಪ್ರಧಾನಿ ಪ್ರಚಂಡ, ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ ಜೊತೆಗೆ ಮುಯಿಜು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗಿಯಾದರು.
ಮೊದಲ ಬಾರಿ ಮುಯಿಜು ಭಾರತಕ್ಕೆ: ಮಾಲ್ಡೀವ್ಸ್ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದ ಮರುಕ್ಷಣವೇ ಭಾರತೀಯ ಸೇನೆಯನ್ನು ಹಿಂಪಡೆಯುವಂತೆ ಆದೇಶಿಸಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದ ಮೊಹಮ್ಮದ್ ಮುಯಿಜು಼ ಸಹ ತಾವು ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದಾರೆ.
==
ಸಮಾರಂಭಕ್ಕೆ ಖರ್ಗೆ ಹಾಜರು, ಉಳಿದ ವಿಪಕ್ಷ ನಾಯಕರು ಗೈರು
ನವದೆಹಲಿ : ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗಿಯಾದರು. ಉಳಿದ ಪ್ರತಿಪಕ್ಷ ನಾಯಕರು ಸಮಾರಂಭದಲ್ಲಿ ಕಾಣಲಿಲ್ಲ.
ಖರ್ಗೆ ಹಾಗೂ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಷ್ಟ್ರಪತಿ ಭವನದಿಂದ ಆಹ್ವಾನ ನೀಡಲಾಗಿತ್ತು. ಈ ಪೈಕಿ ಖರ್ಗೆ ಮಾತ್ರ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆಹ್ವಾನ ದೊರೆತಿದ್ದರೂ ಎಡರಂಗದ ನಾಯಕರಾದ ಸೀತಾರಾಮ ಯೆಚೂರಿ, ಡಿ.ರಾಜಾ, ತೃಣಮೂಲ ಕಾಂಗ್ರೆಸ್ಸಿನ ಸಾಗರಿಕಾ ಘೋಷ್ ಅವರು ಸಮಾರಂಭದಲ್ಲಿ ಭಾಗಿಯಾಗಲಿಲ್ಲ.