ವಯಸ್ಸು ಧೃಡೀಕರಣಕ್ಕೆ ಆಧಾರ್‌ ಸೂಕ್ತ ದಾಖಲೆಯಲ್ಲ: ಸುಪ್ರೀಂ ಕೊರ್ಟ್‌ ಮಹತ್ವದ ತೀರ್ಪು

KannadaprabhaNewsNetwork | Updated : Oct 25 2024, 05:07 AM IST

ಸಾರಾಂಶ

ವ್ಯಕ್ತಿಯ ವಯಸ್ಸನ್ನು ಧೃಡೀಕರಿಸಲು ಆಧಾರ್‌ ಕಾರ್ಡ್‌ ಸೂಕ್ತ ದಾಖಲೆ ಅಲ್ಲ ಎಂದು ಸುಪ್ರೀಂ ಕೊರ್ಟ್‌ ಮಹತ್ವದ ತೀರ್ಪು ನಿಡಿದೆ.

ನವದೆಹಲಿ: ವ್ಯಕ್ತಿಯ ವಯಸ್ಸನ್ನು ಧೃಡೀಕರಿಸಲು ಆಧಾರ್‌ ಕಾರ್ಡ್‌ ಸೂಕ್ತ ದಾಖಲೆ ಅಲ್ಲ ಎಂದು ಸುಪ್ರೀಂ ಕೊರ್ಟ್‌ ಮಹತ್ವದ ತೀರ್ಪು ನಿಡಿದೆ.

ಈ ಮೂಲಕ ರಸ್ತೆ ಅಪಘಾತದ ವೇಳೆ ಮೃತಪಟ್ಟವನಿಗೆ ಪರಿಹಾರ ಒದಗಿಸುವ ಸಲುವಾಗಿ ಅವನ ವಯಸ್ಸು ನಿರ್ಧರಿಸಲು ಆಧಾರ್‌ ಕಾರ್ಡನ್ನು ಆಧಾರವಾಗಿಟ್ಟುಕೊಂಡ ಪಂಜಾಬ್‌ ಹಾಗೂ ಹರ್ಯಾಣದ ಹೈ ಕೊರ್ಟ್‌ ತೀರ್ಪನ್ನು ರದ್ದುಗೊಳಿಸಿದೆ.

‘ಮೃತನ ವಯಸ್ಸನ್ನು ಬಾಲಾಪರಾಧಿ ನ್ಯಾಯ ಕಾಯ್ದೆ, 2015ರ ಸೆಕ್ಷನ್‌ 94ರ ಪ್ರಕಾರ ಆತನ ಶಾಲಾ ವರ್ಗಾವಣೆ ಪ್ರಮಾಣಪತ್ರದಲ್ಲಿ ನಮೂದಿಸಲಾಗಿರುವ ಜನನ ದಿನಾಂಕದ ಅನುಸಾರ ನಿರ್ಧರಿಸಬೇಕು’ ಎಂದು ನ್ಯಾ। ಸಂಜಯ್‌ ಕರೋಲ್‌ ಹಾಗೂ ಉಜ್ಜಲ್‌ ಭುಯಾನ್‌ ಅವರನ್ನೊಳಗೊಂಡ ಪೀಠ ಹೇಳಿದೆ.

ಅಂತೆಯೇ, ‘2018 ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ಜ್ಞಾಪಕ ಪತ್ರವನ್ನು ಉಲ್ಲೇಖಿಸಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೇಳಿರುವಂತೆ, ಆಧಾರ್‌ ಕಾರ್ಡ್‌ ಬಳಸಿ ವ್ಯಕ್ತಿಯ ಗುರುತನ್ನು ಸ್ಥಾಪಿಸಬಹುದೇ ಹೊರತು, ಅದು ಹುಟ್ಟಿದ ದಿನಾಂಕದ ಪುರಾವೆ ಅಲ್ಲ’ ಎಂದು ಪೀಠ ಹೇಳಿದೆ. ಅಲ್ಲದೆ ಹೈಕೋರ್ಟ್‌ ಆದೇಶಕ್ಕೂ ಮುನ್ನ ಮೃತನ ವಯಸ್ಸು ಪತ್ತೆಗೆ ಶಾಲಾ ವರ್ಗಾವಣೆ ಪ್ರಮಾಣಪತ್ರ ಬಳಸಿದ ಮೋಟಾರ್ ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್‌ನ ನಡೆಯನ್ನು ಎತ್ತಿಹಿಡಿದಿದೆ. 

ಆಗಿದ್ದೇನು?:

2015ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಆತನ ಶಾಲಾ ವರ್ಗಾವಣೆ ಪ್ರಮಾಣಪತ್ರದಲ್ಲಿದ್ದ ಜನ್ಮ ದಿನಾಂಕದನ್ವಯ ರೋಹ್‌ತಕ್‌ನ ಮೋಟಾರ್ ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್‌ ಮೃತನ ಪರಿವಾರಕ್ಕೆ 19.35 ಲಕ್ಷ ರು. ಪರಿಹಾರ ನೀಡಿತ್ತು. ಆದರೆ ಆಧಾರ್‌ನಲ್ಲಿದ್ದ ವಯಸ್ಸನ್ನು ಪರಿಗಣಿಸಿದ ಹೈಕೋರ್ಟ್‌, ಪರಿಹಾರವನ್ನು 9.22 ಲಕ್ಷಕ್ಕೆ ಇಳಿಸಿತ್ತು. ಇದರ ವಿರುದ್ಧ ಮೃತನ ಸಂಬಂಧಿಕರು ಸುಪ್ರೀಂ ಮೊರೆ ಹೋಗಿದ್ದರು.

Share this article