ನವದೆಹಲಿ: ಐಸಿಐಸಿಐ ಬ್ಯಾಂಕ್ ಹಾಗೂ ವಿಡಿಯೋಕಾನ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಮಾಜಿ ಸಿಇಒ ಚಂದಾ ಕೋಚಾರ್ರನ್ನು ಸಿಬಿಐ ಬಂಧಿಸಿರುವುದು ಅಕ್ರಮವಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಜೊತೆಗೆ ಸಿಬಿಐ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಕುಟುಕಿದೆ. ಚಂದಾ ಹಾಗೂ ಅವರ ಪತಿ ದೀಪಕ್ರನ್ನು ಬಂಧಿಸಿರುವುದಕ್ಕೆ ಸಿಬಿಐ ಸರಿಯಾಗಿ ಸಮಜಾಯಿಷಿ ನೀಡಿಲ್ಲ.
ಅದಲ್ಲದೇ ತನ್ನಲ್ಲಿನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದೆ. ವಿಚಾರಣೆ ವೇಳೆ ಆರೋಪಿಗಳು ಮೌನವಾಗಿರಬಹುದು. ಇದು ಸಂವಿಧಾನದ 20(3)ನೇ ಪರಿಚ್ಛೇದ ಅಡಿಯಲ್ಲಿ ಅವರ ಹಕ್ಕು.
ಇದನ್ನು ತನಿಖೆಗೆ ಸಹಕರಿಸುತ್ತಿಲ್ಲ ಎಂದು ತನಿಖಾ ಸಂಸ್ಥೆಗಳು ಹೇಳಬಾರದು. ಈ ಪ್ರಕರಣದಲ್ಲಿ ಸಿಬಿಐ ವಿವೇಚನೆಯನ್ನು ಬೀದಿಗೊತ್ತಿದೆ’ ಎಂದು ಕೋರ್ಟ್ ಕಿಡಿಕಾರಿದೆ.