ಢಾಕಾ: ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ, ಸ್ವತಂತ್ರ ಬಾಂಗ್ಲಾದ ಮೊದಲ ಪ್ರಧಾನಿಯಾಗಿದ್ದ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ವಿರುದ್ಧದ ದ್ವೇಷ ಸಾಧನೆ ಮುಂದುವರಿಸಿದೆ. ಅವರಿಗೆ ನೀಲಾಗಿದ್ದ ‘ರಾಷ್ಟ್ರಪಿತ’ ಬಿರುದು ಕೈಬಿಡಲು ನಿರ್ಧಾರ ತೆಗೆದುಕೊಂಡಿದೆ.
ಈ ಸಂಬಂಧ ಕಾನೂನು ತಿದ್ದುಪಡಿ ತಂದಿರುವ ಮಧ್ಯಂತರ ಸರ್ಕಾರ, ಸ್ವಾತಂತ್ರ್ಯ ಹೋರಾಟಗಾರರ ವ್ಯಾಖ್ಯಾನವನ್ನೇ ಬದಲಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಸ್ವಾತಂತ್ರ್ಯ ಹೋರಾಟಗಾರರ ಸಮಿತಿ ಕಾಯ್ದೆಗೆ ತಿದ್ದುಪಡಿ ತಂದಿರುವ ಅದು, ಶೇಖ್ ಮುಜಿಬುರ್ ರೆಹಮಾನ್ ಮಾತ್ರವಲ್ಲದೆ, ಅವರ ಇತರೆ 400 ಮಂದಿ ಸಹಯೋಗಿಗಳಿಗೂ ನೀಡಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಗೌರವವನ್ನು ರದ್ದು ಮಾಡಿದೆ. ಅವರನ್ನು ಸ್ವಾತಂತ್ರ್ಯ ಹೋರಾಟದ ಸಹಯೋಗಿಗಳು ಎಂದು ಕರೆಯಲಾಗಿದೆ.
ಇತ್ತೀಚೆಗಷ್ಟೇ ಬಾಂಗ್ಲಾದ ನೋಟುಗಳಲ್ಲಿ ಮುಜಿಬುರ್ ರೆಹಮಾನ್ ಅವರ ಚಿತ್ರಗಳನ್ನು ತೆಗೆದುಹಾಕಿದ್ದ ಯೂನುಸ್ ಸರ್ಕಾರ, ಈ ಮೂಲಕ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ತಂದೆ ಆಗಿದ್ದ ಅವರ ಅಧ್ಯಾಯವನ್ನೇ ತೆಗೆದು ಹಾಕಲು ಪ್ರಯತ್ನಿಸುತ್ತಿದೆ.
ಪರಸ್ಪರ ಸಹಯೋಗದಿಂದ ಉಗ್ರ ನಿಗ್ರಹ ಸಾಧ್ಯ: ಭುಟ್ಟೊ
ಇಸ್ಲಾಮಾಬಾದ್: ಒಂದು ಕಡೆ ಉಗ್ರವಾದವನ್ನು ಸೇನೆಯ ನೆರಳಲ್ಲಿ ಪೋಷಿಸುತ್ತಿರುವ ಪಾಕಿಸ್ತಾನ, ವಿಪರ್ಯಾಸವೆಂಬಂತೆ ಉಗ್ರನಿಗ್ರಹದ ಬಗ್ಗೆ ಮಾತನಾಡತೊಡಗಿದೆ. ‘ಪಾಕ್ ಹಾಗೂ ಭಾರತದ ಗುಪ್ತಚರ ಸಂಸ್ಥೆಗಳ (ಐಎಸ್ಐ ಮತ್ತು ರಾ) ಪರಸ್ಪರ ಸಹಯೋಗದಿಂದ ಉಗ್ರವಾದ ಕಡಿಮೆ ಮಾಡಬಹುದಿತ್ತು’ ಎಂದು ಪಿಪಿಪಿ ಪಕ್ಷದ ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ದಾರಿ ಹೇಳಿದ್ದಾರೆ.ಭಾರತದೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಬೆಂಬಲ ಯಾಚಿಸುವ ಸಲುವಾಗಿ ವಿದೇಶಗಳಿಗೆ ತೆರಳಲಿರುವ ನಿಯೋಗಗಳಲ್ಲಿ ಒಂದರ ನೇತೃತ್ವ ವಹಿಸಿರುವ ಭುಟ್ಟೊ, ವಿಶ್ವಸಂಸ್ಥೆಯ ಮುಖ್ತಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಐಎಸ್ಐ ಮತ್ತು ರಾ (ಭಾರತದ ಗುಪ್ತಚರ ಸಂಸ್ಥೆ) ಒಟ್ಟಾಗಿ ಕೆಲಸ ಮಾಡಿದರೆ, ಎರಡೂ ದೇಶಗಳಲ್ಲಿ ಉಗ್ರವಾದವನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಒಂದು ವೇದಿಕೆ ಬೇಕು. ಭಾರತಕ್ಕೆ ಸಹಕರಿಸಲು ನಾವು ಸಿದ್ಧ. ಕೋಟ್ಯಂತರ ಜನರ ವಿಧಿಯನ್ನು ಮತ್ತು ಯುದ್ಧವನ್ನು ನಿರ್ಧರಿಸುವ ಹಕ್ಕನ್ನು ಉಗ್ರರಿಗೆ ಕೊಡಲಾಗದು. ರಾಜತಾಂತ್ರಿಕತೆ ಮತ್ತು ಮಾತುಕತೆಯಿಂದ ಮಾತ್ರ ಶಾಂತಿ ಸಾಧ್ಯ’ ಎಂದು ಭುಟ್ಟೋ ಹೇಳಿದರು.
ಇದೇ ವೇಳೆ, ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ರಾಜ್ಯ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರಿಂದಾಗು ಕದನವಿರಾಮ ಸಾಧ್ಯವಾಯಿತು ಎಂದೂ ಅವರು ನುಡಿದರು.
ಕಾಶ್ಮೀರ ಸಮಸ್ಯೆಯನ್ನೂ ಪ್ರಸ್ತಾಪಿಸಿದ ಭುಟ್ಟೊ, ‘ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಎತ್ತಲು ಮತ್ತು ವಿಶ್ವದ ಗಮನವನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅನೇಕ ಅಡ್ಡಿ ಉಂಟಾಗುತ್ತಿವೆ’ ಎಂದು ಹಲುಬಿದರು
ಕ।ಖುರೇಷಿ ಹೆಸರು ಪ್ರಸ್ತಾಪ ಮಾಡಿ -
ಭುಟ್ಟೊ ಬಾಯಿಗೆ ಪತ್ರಕರ್ತ ಬೀಗ
‘ಭಾರತದಲ್ಲಿ ಮುಸ್ಲಿಮರನ್ನು ಕ್ರೂರಿಗಳಂತೆ ಬಿಂಬಿಸಲು ಪಹಲ್ಗಾಂ ದಾಳಿಯನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ’ ಎಂಬ ಬಿಲಾವಲ್ ಭುಟ್ಟೊ ಆರೋಪ ಮಾಡಿದ್ದಕ್ಕೆ ಪ್ರತಿಯಾಗಿ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಈಜಿಪ್ಟ್ ಮೂಲದ ಪತ್ರಕರ್ತ ಅಹ್ಮದ್ ಫಾತಿ ಅವರು ಕ। ಸೋಫಿಯಾ ಖುರೇಷಿ ಅವರ ಹೆಸರನ್ನು ಪ್ರಸ್ತಾಪಿಸಿ ತಿರುಗೇಟು ನೀಡಿದರು.
‘ಭುಟ್ಟೋ ಅವರೇ, ನೀವು ಹೀಗೆ ಹೇಳುತ್ತಿದ್ದೀರಲ್ಲ. ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂದೂರದ ಬಗ್ಗೆ ಮಾಹಿತಿ ನೀಡಿದ್ದ ಆ ಮಹಿಳಾ ಸೇನಾಧಿಕಾರಿ (ಕ। ಸೋಫಿಯಾ ಖುರೇಷಿ) ಯಾರು?’ ಎಂದು ಕೇಳಿದರು. ಆಗ ಭುಟ್ಟೊ ಬಾಯಿ ಮುಚ್ಚಿಕೊಂಡರು.
ಗಾಂಧಿ ಕುಟುಂಬದಿಂದ ಭಾರತದ ಹಿತ ಶರಣು: ಬಿಜೆಪಿ
ನವದೆಹಲಿ: ಪಾಕ್ ಜೊತೆಗಿನ ಸಂಘರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಶರಣಾದರು ಎಂದಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಗರು ಕಿಡಿ ಕಾರಿದ್ದು, ‘ಗಾಂಧಿ ಕುಟುಂಬವು ಭಾರತದ ಹಿತವನ್ನು ಶರಣಾಗತಿ ಮಾಡಿದೆ’ ಎಂದು ಪಕ್ಷಾಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.
ಬುಧವಾರ ಮಾತನಾಡಿದ ಅವರು, ‘ರಾಹುಲ್ ಮಾತಿಗೆ ಇಡೀ ದೇಶವೇ ನಗುತ್ತಿದೆ. ಅವರ ಹೇಳಿಕೆ ದೇಶದ್ರೋಹಕ್ಕೆ ಸಮ’ ಎಂದು ಕಿಡಿಕಾರಿದರು.ಈ ನಡುವೆ, ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ‘ಭಾರತ ಸೋತಿರುವುದನ್ನು ಉಗ್ರರೇ ಒಪ್ಪಿಕೊಳ್ಳುತ್ತಿಲ್ಲ. ಆದರೆ ರಾಹುಲ್ ಈ ರೀತಿ ಹೇಳುತ್ತಿರುವುದು ಅವರ ಅನಾರೋಗ್ಯಕರ ಮತ್ತು ಅಪಾಯಕಾರಿ ಮನಸ್ಥಿತಿ ತೋರಿಸುತ್ತದೆ’ ಎಂದು ಹರಿಹಾಯ್ದರು.
‘ಒಂದು ಕಡೆ ಕಾಂಗ್ರೆಸ್ ಸಂಸದರು ಸೇರಿದಂತೆ ಬೇರೆ ಬೇರೆ ಪಕ್ಷದ ಸಂಸದರನ್ನೊಳಗೊಂಡ ಸರ್ವಪಕ್ಷ ನಿಯೋಗ ವಿದೇಶಗಳಿಗೆ ತೆರಳಿ ಒಗ್ಗಟ್ಟು ಪ್ರದರ್ಶಿಸುತ್ತಿದೆ. ಆದರೆ ಮತ್ತೊಂದೆಡೆ ಸ್ವಯಂ ಘೋಷಿತ, ಸ್ವಘೋಷಿತ, ಸರ್ವೋಚ್ಚ ನಾಯಕ ರಾಹುಲ್ ಗಾಂಧಿ, ಅತ್ಯಂತ ಅಗ್ಗದ, ಕೀಳು ಮಟ್ಟದ ಹೇಳಿಕೆಗಳನ್ನು ನೀಡುವ ಮೂಲಕ, ಲೋಕಸಭೆ ವಿಪಕ್ಷ ನಾಯಕರಾದ ನಂತರವೂ ತಮಗೆ ಆ ಹುದ್ದೆಗೆ ಅಗತ್ಯವಿರುವ ಗಂಭೀರತೆ ಮತ್ತು ಪ್ರಬುದ್ಧತೆಯ ಕೊರತೆಯಿದೆ ಎಂದು ಜಗತ್ತಿಗೆ ಹೇಳುತ್ತಿದ್ದಾರೆ’ ಎಂದರು.ಮುಂದುವರೆದಂತೆ ಆಪರೇಷನ್ ಸಿಂದೂರವನ್ನು ಶರಣಾಗತಿ ಎಂದಿರುವ ರಾಹುಲ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ‘ಸಶಸ್ತ್ರ ಸೇನಾಪಡೆಗಳ ಶೌರ್ಯ ಮತ್ತು ಸೇನಾ ಅಧಿಕಾರಿಗಳು ಆಪರೇಷನ್ ಸಿಂದೂರ ಬಗ್ಗೆ ನೀಡಿದ ಸಂಕ್ಷಿಪ್ತ ವಿವರಣೆಯನ್ನು ಶರಣಾಗತಿಗೆ ಹೋಲಿಸಿದ ಅವರ ಮನಸ್ಥಿತಿ ಎಷ್ಟು ಅನಾರೋಗ್ಯಕರ, ಅಪಾಯಕಾರಿಯಾಗಿದೆ ಎಂಬುದನ್ನು ತೋರಿಸುತ್ತದೆ. ಅವರ ಹೇಳಿಕೆ ಭಾರತ ವಿರೋಧಿಗಳ ಹೇಳಿಕೆಯನ್ನೂ ಮೀರಿಸಿದ್ದು, ಇಲ್ಲಿಯವರೆಗೆ ಕಾಂಗ್ರೆಸ್ ನಾಯಕರು ಪಾಕಿಸ್ತಾನ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರು, ಅವರ ಹೇಳಿಕೆಗಳನ್ನು ಅಲ್ಲಿನ ಸಂಸತ್ತಿನಲ್ಲಿ ಉಲ್ಲೇಖಿಸಲಾಗುತ್ತಿತ್ತು. ರಾಹುಲ್ ಗಾಂಧಿ ಹೇಳಿಕೆಗಳು ಪಾಕಿಸ್ತಾನದಲ್ಲಿ ದಾಖಲೆಯಾಗಿದೆ. ಪಾಕ್ ಸೇನೆ, ಉಗ್ರರು ಹೇಳದ ವಿಚಾರವನ್ನು ಅವರು ಹೇಳುತ್ತಾರೆ. ಮಸೂದ್ ಅಜರ್, ಹಫೀಜ್ ಸಯೀದ್ ಕೂಡ ಭಾರತ ಶರಣಾಯಿತು ಎಂದು ಹೇಳಿಲ್ಲ. ಅವರು ಈ ಜನರಿಗಿಂತ ಒಂದು ಹೆಜ್ಜೆ ಮುಂದೆ ಹೋಗಲು ಬಯಸುತ್ತಾರೆಯೇ?’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ವಾಕ್ ಸ್ವಾತಂತ್ರ್ಯ ಉಲ್ಲಂಘನೆ: ರಾಹುಲ್ಗೆ ಹೈಕೋರ್ಟ್ ತರಾಟೆ
ನವದೆಹಲಿ: ವಾಕ್ ಸ್ವಾತಂತ್ರ್ಯ ಇದೆ ಎಂದು ಸೇನೆಯ ಬಗ್ಗೆ ಮನಬಂದಂತೆ ಮಾತನಾಡುವುದಲ್ಲ ಎಂದು ಅಲಹಾಬಾದ್ ಹೈಕೋರ್ಟ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಚಾಟಿ ಬೀಸಿದೆ.2022ರಲ್ಲಿ ಭಾರತ ಜೋಡೋ ಯಾತ್ರಾ ವೇಳೆ ರಾಹುಲ್ ಸೇನೆಯ ಅವಹೇಳನ ಮಾಡಿದ್ದಾರೆ ಎಂದು ದೂರು ಸಲ್ಲಿಕೆ ಆಗಿತ್ತು. ಇದನ್ನು ಪ್ರಶ್ನಸಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ‘ನಿಸ್ಸಂದೇಹವಾಗಿ, ಭಾರತದ ಸಂವಿಧಾನದ 19(1)(ಎ) ವಿಧಿಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಈ ಸ್ವಾತಂತ್ರ್ಯವು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಮತ್ತು ಯಾವುದೇ ವ್ಯಕ್ತಿಗೆ ಅಥವಾ ಭಾರತೀಯ ಸೇನೆಗೆ ಮಾನಹಾನಿಕರವಾದ ಹೇಳಿಕೆಗಳನ್ನು ನೀಡುವ ಸ್ವಾತಂತ್ರ್ಯವನ್ನು ಇದು ಒಳಗೊಂಡಿಲ್ಲ’ ಎಂದಿತು.