ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಗುರುವಾರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಇದರಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರಿದ್ದಾರೆ. ಇದರಿಂದಾಗಿ 59 ವರ್ಷಗಳ ನಂತರ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಂತಾಗಿದೆ.
- 59 ವರ್ಷ ಬಳಿಕ ಮೊದಲ ಬಾರಿ ಕಾಂಗ್ರೆಸ್ಗೆ ಮಂತ್ರಿಗಿರಿಚೆನ್ನೈ: ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಗುರುವಾರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಇದರಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರಿದ್ದಾರೆ. ಇದರಿಂದಾಗಿ 59 ವರ್ಷಗಳ ನಂತರ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಂತಾಗಿದೆ. ಕಾಗ್ರೆಸ್ ಪಕ್ಷದ ಎಸ್. ರಾಜೇಶ್ ಕುಮಾರ್ ಮತ್ತು ಪಿ. ವಿಶ್ವನಾಥನ್, ವಿಜಯ್ ಸ್ನೇಹಿತರಾದ ಟಿವಿಕೆಯ ಶ್ರೀನಾಥ್, ಇಬ್ಬರು ಮಹಿಳೆಯರು ಸೇರಿದಂತೆ 23 ಶಾಸಕರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣ ವಚನ ಬೋಧಿಸಿದರು.
ಈ ಬಗ್ಗೆ ಮಾತನಾಡಿದ ತಮಿಳುನಾಡಿನ ಎಐಸಿಸಿ ಉಸ್ತುವಾರಿ ಗಿರೀಶ್ ಛೋಡಂಕರ್, ‘59 ವರ್ಷಗಳ ಬಳಿಕ ನಮ್ಮ ಪಕ್ಷದ ಶಾಸಕರ ಸಂಪುಟ ಸೇರ್ಪಡೆ ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಒಂದು ತಿರುವು’ ಎಂದರು.
ಸಚಿವರಾದ 23 ಶಾಸಕರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.
ಇಂದು ವಿಸಿಕೆ, ಮುಸ್ಲಿಂ ಲೀಗ್ ಸೇರ್ಪಡೆ?:
ವಿಸಿಕೆ ಹಾಗೂ ಮುಸ್ಲಿಂ ಲೀಗ್ ಇನ್ನೂ ಸಂಪುಟ ಸೇರಿಲ್ಲ. ಆದರೆ ಅವು ಶುಕ್ರವಾರ ಸಚಿವ ಸಂಪುಟ ಸೇರುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. ಎಡರಂಗ ಬಾಹ್ಯ ಬೆಂಬಲ ನೀಡಿದೆ. ಹೀಗಾಗಿ ಅದು ಸಂಪುಟ ಸೇರಲ್ಲ.
==
ತ.ನಾಡು ಪ್ರಮಾಣ ವಚನದಲ್ಲಿ ಕೊನೆಗೆ ನಾಡಗೀತೆ: ಪುನಃ ವಿವಾದ
ಚೆನ್ನೈ: ಗುರುವಾರ ಇಲ್ಲಿನ ಲೋಕಭವನದಲ್ಲಿ ನಡೆದ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ತಮಿಳು ನಾಡಗೀತೆ ‘ತಮಿಳು ತಾಯಿ ವಾಜ್ತು’ವನ್ನು ಕೊನೆಯದಾಗಿ ಹಾಡಿದ್ದು ಪುನಃ ವಿವಾದ ಹುಟ್ಟುಹಾಕಿದೆ.ಇತ್ತೀಚೆಗೆ ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದಾಗಲೂ ಹೀಗೆ ಮಾಡಲಾಗಿತ್ತು. ‘ನಂತರ ಇದಕ್ಕೆ ಅವಕಾಶ ನೀಡಲ್ಲ’ ಎಂದು ವಿಜಯ್ ಪಕ್ಷ ಹೇಳಿತ್ತಾದರೂ, ಅದೇ ಪುನರಾವರ್ತನೆ ಆಗಿದೆ. ಆದರೆ ಪ್ರಮಾಣವಚನ ಸ್ವೀಕಾರ ಸಮಾರಂಭವು ಕೇಂದ್ರ ಸರ್ಕಾರದ ಅಧೀನದ ರಾಜಭವನಕ್ಕೆ ಬರುವ ಕಾರಣ, ಇದರಲ್ಲಿ ವಿಜಯ್ ಸರ್ಕಾರದ ಪಾತ್ರವಿಲ್ಲ.
ಶುಕ್ರವಾರ ಪ್ರಮಾಣ ವಚನ ವೇಳೆ ವಂದೇ ಮಾತರಂ ಮತ್ತು ರಾಷ್ಟ್ರಗೀತೆ ನಂತರ ನಾಡಗೀತೆ ಹಾಡಲಾಯಿತು. ಇದಕ್ಕೆ ಎಡಪಕ್ಷಗಳು ಆಕ್ಷೇಪಿಸಿದ್ದು, ‘ರಾಷ್ಟ್ರಗೀತೆಗೆ ನಮ್ಮ ವಿರೋಧವಿಲ್ಲ. ಆದರೆ ಮೊದಲು ನಾಡಗೀತೆ ಹಾಡಬೇಕು ಎಂದು ಆಗ್ರಹಿಸಿವೆ.
==
ಪ್ರಮಾಣ ವಚನದಲ್ಲಿ ರಾಹುಲ್ ಹೆಸರು ಪ್ರಸ್ತಾಪ: ರಾಜ್ಯಪಾಲ ಆಕ್ಷೇಪ
ಚೆನ್ನೈ: ಗುರುವಾರ ತಮಿಳುನಾಡು ಸಚಿವರಾಗಿ ಪ್ರಮಾಣ ವಚನ ಸ್ವೀಕರಿದ ಕಾಂಗ್ರೆಸ್ ನಾಯಕ ಎಸ್. ರಾಜೇಶ್ ಕುಮಾರ್ ಶಪಥ ಮುಗಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಕಾಂಗ್ರೆಸ್ ನಾಯಕರಾದ ಕಾಮರಾಜ್, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಶ್ಲಾಘಿಸಿದರು. ಆಗ ರಾಜ್ಯಪಾಲರು ಇದಕ್ಕೆ ಬ್ರೇಕ್ ಹಾಕಿ ‘ಅದು ನಿಮ್ಮ ಪ್ರಮಾಣ ವಚನದ ಭಾಗವಲ್ಲ’ ಎಂದು ಹೇಳಿ ಲಿಖಿತ ಪ್ರಮಾಣ ವಚನಕ್ಕೆ ಸೀಮಿತಗೊಳಿಸುವಂತೆ ಸೂಚಿಸಿದರು. ತಕ್ಷಣ, ಒಬ್ಬ ಅಧಿಕಾರಿ ಕುಮಾರ್ ಬಳಿಗೆ ಬಂದು ಅವರ ಮುಂದೆ ಇಡಲಾದ ಲಿಖಿತ ಹೇಳಿಕೆ ತೋರಿಸಿದರು. ನಂತರ, ಅವರು ಪ್ರಮಾಣ ವಚನವನ್ನು ಪೂರ್ಣಗೊಳಿಸಿದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.