ಲಂಚ ನೀಡಿದ ಆರೋಪ : ಅಮೆರಿಕ ಕೋರ್ಟ್‌ ಬಂಧನ ವಾರಂಟ್‌ ಬೆನ್ನಲ್ಲೇ ಅದಾನಿಗೆ ಸೆಬಿ ಸಂಕಷ್ಟ

KannadaprabhaNewsNetwork |  
Published : Nov 23, 2024, 12:36 AM ISTUpdated : Nov 23, 2024, 04:28 AM IST
ಅದಾನಿ | Kannada Prabha

ಸಾರಾಂಶ

ಸೌರ ವಿದ್ಯುತ್‌ ಖರೀದಿ ಒಪ್ಪಂದ ಕುದುರಿಸುವ ಸಂಬಂಧ ಭಾರತದಲ್ಲಿ 5 ರಾಜ್ಯಗಳ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪಕ್ಕೆ ಸಿಲುಕಿರುವ ಹಾಗೂ ಈ ಬಗ್ಗೆ ಅಮೆರಿಕದಲ್ಲಿ ದೋಷಾರೋಪಕ್ಕೆ ಗುರಿ ಆಗಿ ಬಂಧನ ವಾರಂಟ್‌ ಎದುರಿಸುತ್ತಿರುವ ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ ಅವರಿಗೆ ಈಗ ‘ಸೆಬಿ’ ಸಂಕಷ್ಟ ಎದುರಾಗಿದೆ.

ಮುಂಬೈ/ನವದೆಹಲಿ: ಸೌರ ವಿದ್ಯುತ್‌ ಖರೀದಿ ಒಪ್ಪಂದ ಕುದುರಿಸುವ ಸಂಬಂಧ ಭಾರತದಲ್ಲಿ 5 ರಾಜ್ಯಗಳ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪಕ್ಕೆ ಸಿಲುಕಿರುವ ಹಾಗೂ ಈ ಬಗ್ಗೆ ಅಮೆರಿಕದಲ್ಲಿ ದೋಷಾರೋಪಕ್ಕೆ ಗುರಿ ಆಗಿ ಬಂಧನ ವಾರಂಟ್‌ ಎದುರಿಸುತ್ತಿರುವ ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ ಅವರಿಗೆ ಈಗ ‘ಸೆಬಿ’ ಸಂಕಷ್ಟ ಎದುರಾಗಿದೆ. ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಸೂಚನೆ ಮೇರೆಗೆ, ಅದಾನಿ ಕಂಪನಿಗೆ ಭಾರತದ ಷೇರು ಮಾರುಕಟ್ಟೆಗಳು ಸ್ಪಷ್ಟನೆ ಬಯಸಿ ನೋಟಿಸ್‌ ಜಾರಿ ಮಾಡಿವೆ.

ಷೇರುಪೇಟೆಯಲ್ಲಿ ಲಿಸ್ಟ್‌ ಆಗಿರುವ ಕಂಪನಿಗಳು ತಮ್ಮ ವ್ಯವಹಾರದ ಬಗ್ಗೆ ನಿಯಮಿತವಾಗಿ ಪೇಟೆಗೆ ಮಾಹಿತಿ ನೀಡಬೇಕು ಎಂಬ ನಿಯಮವಿದೆ. ಆದರೆ, ಲಂಚ ಪ್ರಕರಣದ ತನಿಖೆ ಹಾಗೂ ವಿಚಾರಣೆ ಅಮೆರಿಕದಲ್ಲಿ ನಡೆಯುತ್ತಿದೆ ಎಂಬ ಬಗ್ಗೆ ಭಾರತದ ಷೇರುಪೇಟೆಗಳಿಗೆ ಅದಾನಿ ಕಂಪನಿ ಮಾಹಿತಿ ನೀಡಿರಲಿಲ್ಲ. ಇದು ಸೆಬಿಯ ಆಕ್ಷೇಪಕ್ಕೆ ಕಾರಣವಾಗಿದೆ. ಹೀಗಾಗಿ ಸೆಬಿ ಸೂಚನೆ ಮೇರೆಗೆ ಅದಾನಿ ಸಮೂಹಕ್ಕೆ ಅವು ‘ಏಕೆ ಮಾಹಿತಿ ನೀಡಿಲ್ಲ?’ ಎಂದು ಸ್ಪಷ್ಟೀಕರಣ ಕೋರಿ ನೋಟಿಸ್‌ ನೀಡಿವೆ. 

ಇದಕ್ಕೆ ಬರುವ ಉತ್ತರ ಆಧರಿಸಿ ತನಿಖೆ ಆರಂಭಿಸುವ ಬಗ್ಗೆ ನಿರ್ಧರಿಸಲಿವೆ ಎಂದು ಮೂಲಗಳು ಹೇಳಿವೆ.ಇದಲ್ಲದೆ, ‘ಕೀನ್ಯಾ ದೇಶವು ಏಕೆ ನಿಮ್ಮ ಜತೆ ಏರ್‌ಪೋರ್ಟ್‌ ವಿಸ್ತರಣೆ ಹಾಗೂ ವಿದ್ಯುತ್‌ ಒಪ್ಪಂದ ರದ್ದು ಮಾಡಿತು’ ಎಂಬ ಬಗ್ಗೆಯೂ ಸ್ಪಷ್ಟನೆ ಕೇಳಲಾಗಿದೆ ಎಂದು ಅವು ಹೇಳಿವೆ.ಈ ಹಿಂದೆ ಅದಾನಿ ಸಮೂಹವು ಷೇರುಪೇಟೆಯಲ್ಲಿ ಅಕ್ರಮ ಎಸಗಿದೆ ಎಂದು ಅಮೆರಿಕದ ‘ಹಿಂಡನ್‌ಬರ್ಗ್‌’ ಸಂಸ್ಥೆ ಆರೋಪಿಸಿತ್ತು. ಆಗಲೂ ಸೆಬಿ ಅದಾನಿ ವಿರುದ್ಧ ತನಿಖೆ ನಡೆಸಿತ್ತು ಹಾಗೂ ಬಳಿಕ ಕ್ಲೀನ್‌ಚಿಟ್‌ ನೀಡಿತ್ತು.

- ಲಂಚ ಕೇಸ್‌ ವಿಚಾರಣೆ ಬಗ್ಗೆ ಏಕೆ ತಿಳಿಸಲಿಲ್ಲ? ಸ್ಪಷ್ಟನೆ ಕೊಡಿ- ಸೆಬಿ ಸೂಚನೆ ಮೇರೆಗೆ ಅದಾನಿ ಷೇರುಪೇಟೆಗಳ ನೋಟಿಸ್‌

ಸಂಸತ್‌ನಲ್ಲಿ ಪ್ರಸ್ತಾಪ ಮಾಡುತ್ತೇವೆ

ಗೌತಮ್‌ ಅದಾನಿ ಭ್ರಷ್ಟಾಚಾರದ ಬಗ್ಗೆ ನಾವು 5-6 ವರ್ಷದಿಂದ ಹೇಳುತ್ತಿದ್ದರೂ ಪ್ರಧಾನಮಂತ್ರಿ ಮೋದಿ ತುಟಿ ಬಿಚ್ಚಿರಲಿಲ್ಲ. ಇದೀಗ ಅವ್ಯವಹಾರ ವಿದೇಶದಲ್ಲೂ ಸಾಬೀತಾಗಿದ್ದು, ನಮ್ಮ ದೇಶದಲ್ಲೇ ಇರುವ ಅದಾನಿ ಮೇಲೆ ಶೀಘ್ರ ಕ್ರಮ ಕೈಗೊಳ್ಳಬೇಕು. ಈ ವಿಷಯವನ್ನು ಸಂಸತ್‌ ಅಧಿವೇಶನದಲ್ಲೂ ಪ್ರಸ್ತಾಪಿಸುತ್ತೇವೆ.

- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಅದಾನಿಯನ್ನೇಕೆ ಬಂಧಿಸ್ತಿಲ್ಲ?

ಅರೆಸ್ಟ್ ವಾರೆಂಟ್ ಬಂದಿದ್ದರೂ ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು? ತಪ್ಪಿಸಿಕೊಳ್ಳಲು ಬಿಡಬೇಡಿ. ಅದಾನಿಯನ್ನು ಕೂಡಲೇ ಬಂಧಿಸಿ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
ಛತ್ತೀಸ್‌ಗಢ ಮದ್ಯ ಹಗರಣ: ಮಾಜಿ ಸಿಎಂ ಪುತ್ರಗೆ ₹250 ಕೋಟಿ ಲಂಚ