ನವದೆಹಲಿ: ಉಭಯ ದೇಶಗಳ ಸಂಬಂಧ ಹಳಸಿರುವಾಗಲೇ, ಮಾಲ್ಡೀವ್ಸ್ಗೆ ಸನಿಹದಲ್ಲೇ ನೌಕಾನೆಲೆಯೊಂದನ್ನು ಸ್ಥಾಪನೆ ಮಾಡುವ ಮೂಲಕ ದ್ವೀಪರಾಷ್ಟ್ರಕ್ಕೆ ಸಡ್ಡು ಹೊಡೆಯಲು ಭಾರತ ಮಂದಾಗಿದೆ.
ಲಕ್ಷದ್ವೀಪದ ದಕ್ಷಿಣ ಭಾಗದಲ್ಲಿರುವ ಕೊನೆಯ ದ್ವೀಪ ಪ್ರದೇಶ ಮಿನಿಕಾಯ್ನಲ್ಲಿ ‘ಐಎನ್ಎಸ್ ಜಟಾಯು’ ಹೆಸರಿನ ವಾಯುನೆಲೆ ಸ್ಥಾಪನೆ ಮಾಡುವ ಉದ್ದೇಶ ಹೊಂದಿರುವುದಾಗಿ ಭಾರತೀಯ ನೌಕಾಪಡೆ ತಿಳಿಸಿದೆ.
ಮಾಲ್ಡೀವ್ಸ್ನಿಂದ ಉತ್ತರ ದಿಕ್ಕಿಗೆ ಉದ್ದೇಶಿತ ಸ್ಥಳ 130 ಕಿ.ಮೀ. ದೂರದಲ್ಲಿದೆ.ಜಟಾಯು ವಾಯುನೆಲೆಯಿಂದ ಅರಬ್ಬೀ ಸಮುದ್ರದಲ್ಲಿ ಭಾರತದ ಬಲ ಮತ್ತಷ್ಟು ವೃದ್ಧಿಯಾಗಲಿದೆ. ಹಡಗು ಕಳ್ಳರು ಹಾಗೂ ಮಾದಕ ವಸ್ತು ದಂಧೆ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಪುಷ್ಟಿ ಸಿಗಲಿದೆ.
ಜತೆಗೆ ಭಾರತದ ಮುಖ್ಯ ಭೂಮಿ ಹಾಗೂ ಲಕ್ಷದ್ವೀಪ ನಡುವಣ ಸಂಪರ್ಕಕ್ಕೂ ಅನುಕೂಲವಾಗಲಿದೆ. ಭಾರತ ಈಗಾಗಲೇ ಲಕ್ಷದ್ವೀಪದ ಕರವಟ್ಟಿಯಲ್ಲಿ ‘ದ್ವೀಪರಕ್ಷಕ’ ಎಂಬ ನೌಕಾ ನೆಲೆಯನ್ನು ಹೊಂದಿದೆ.
ಕಳೆದ ವರ್ಷ ಮೊಹಮ್ಮದ್ ಮುಯಿಜು ಅವರು ಮಾಲ್ಡೀವ್ಸ್ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಬಳಿಕ ಭಾರತ- ಮಾಲ್ಡೀವ್ಸ್ ನಡುವಣ ಸಂಬಂಧ ಹಳಸಿದೆ.
ಚೀನಾದತ್ತ ಒಲವು ಹೊಂದಿರುವ ಮುಯಿಜು ಅವರು ಅಧ್ಯಕ್ಷರಾದ ಬಳಿಕ ಸಂಪ್ರದಾಯದಂತೆ ಭಾರತಕ್ಕೆ ಬರುವ ಬದಲು ಮೊದಲು ಚೀನಾಕ್ಕೆ ಭೇಟಿ ನೀಡಿದ್ದರು.
ಅಲ್ಲದೆ ಮಾಲ್ಡೀವ್ಸ್ ದೇಶದ ಗಾತ್ರ ಯಾರೊಬ್ಬರಿಗೂ ಹೆದರಿಸುವ ಲೈಸೆನ್ಸ್ ನೀಡುವುದಿಲ್ಲ ಎಂದು ತಿರುಗೇಟು ಕೊಟ್ಟಿದ್ದರು. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದಕ್ಕೆ ಮಾಲ್ಡೀವ್ಸ್ ಸಚಿವರು ತಗಾದೆ ತೆಗೆದಿದ್ದರು.