ಲವ್‌ ಜಿಹಾದ್‌ ವಿರುದ್ಧ ಕಠಿಣ ಕಾನೂನು ಜಾರಿ: ಉತ್ತರಪ್ರದೇಶದ ಬಳಿಕ ಈಗ ಮಹಾರಾಷ್ಟ್ರ ಕಾಯ್ದೆ?

KannadaprabhaNewsNetwork |  
Published : Feb 16, 2025, 01:45 AM ISTUpdated : Feb 16, 2025, 04:42 AM IST
ದೇವೇಂದ್ರ ಫಡ್ನವೀಸ್‌ | Kannada Prabha

ಸಾರಾಂಶ

ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಮುಂದಾಗಿರುವ ಬಿಜೆಪಿ ಆಳ್ವಿಕೆಯ ರಾಜ್ಯಗಳು ಇದೀಗ ಲವ್‌ ಜಿಹಾದ್‌ ವಿರುದ್ಧ ಕಠಿಣ ಕಾನೂನು ಜಾರಿಗೂ ಪ್ರಯತ್ನಿಸುತ್ತಿರುವ ಬೆಳವಣಿಗೆ ಕಂಡುಬಂದಿದೆ. 

 ಮುಂಬೈ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಮುಂದಾಗಿರುವ ಬಿಜೆಪಿ ಆಳ್ವಿಕೆಯ ರಾಜ್ಯಗಳು ಇದೀಗ ಲವ್‌ ಜಿಹಾದ್‌ ವಿರುದ್ಧ ಕಠಿಣ ಕಾನೂನು ಜಾರಿಗೂ ಪ್ರಯತ್ನಿಸುತ್ತಿರುವ ಬೆಳವಣಿಗೆ ಕಂಡುಬಂದಿದೆ. ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಲವ್‌ ಜಿಹಾದ್‌, ಬಲವಂತದ ಮತಾಂತರದ ವಿರುದ್ಧ ಕಠಿಣ ಕಾಯ್ದೆ ಅನುಷ್ಠಾನಗೊಳಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಇಟ್ಟಿದೆ.

ಮಹಾರಾಷ್ಟ್ರದಲ್ಲಿ ಲವ್ ಜಿಹಾದ್‌ ಹಾಗೂ ಬಲವಂತದ ಮತಾಂತರ ವಿರುದ್ಧ ಕಾನೂನು ರಚನೆಗೆ ಸಂಬಂಧಿಸಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಲು ದೇವೇಂದ್ರ ಫಡ್ನವೀಸ್‌ ನೇತೃತ್ವದ ಮಹಾಯುತಿ ಒಕ್ಕೂಟದ ಸರ್ಕಾರ ಡಿಜಿಪಿ ನೇತೃತ್ವದ ಸಮಿತಿ ರಚಿಸಿದೆ. ಈ ಮೂಲಕ ಉತ್ತರ ಪ್ರದೇಶ ಸೇರಿದಂತೆ ಲವ್‌ ಜಿಹಾದ್‌ ವಿರುದ್ಧ ಕಾನೂನು ರೂಪಿಸಿರುವ ರಾಜ್ಯಗಳ ಸಾಲಿಗೆ ಸೇರಲು ಮಹಾರಾಷ್ಟ್ರ ಮುಂದಾಗಿದೆ. ಡಿಜಿಪಿ ಅಧ್ಯಕ್ಷ ಆಗಿರುವ ಸಮಿತಿಯಲ್ಲಿ 6 ಮಂದಿ ವಿವಿಧ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿದ್ದಾರೆ.

ಶುಕ್ರವಾರವಷ್ಟೇ ಫಡ್ನವೀಸ್‌ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದರು. ಅದರ ಬೆನ್ನಲ್ಲೇ ಸಮಿತಿ ರಚನೆ ಅಧಿಸೂಚನೆ ಹೊರಬಿದ್ದಿದೆ.

‘ರಾಜ್ಯದಲ್ಲಿ ಬಲವಂತದ ಮತಾಂತರ ಹಾಗೂ ಲವ್‌ ಜಿಹಾದ್‌ಗಳನ್ನು ತಡೆಯಲು ಚುನಾಯಿತ ಪ್ರತಿನಿಧಿಗಳು, ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳವರು ಮನವಿ ಸಲ್ಲಿಸಿದ್ದರು. ಹೀಗಾಗಿ ಇಂಥ ಕೃತ್ಯಗಳನ್ನು ತಡೆಯಲು ಏನು ಮಾಡಬೇಕೆಂದು ಮಾರ್ಗೋಪಾಯ ಸೂಚಿಸಲು ಸಮಿತಿ ರಚಿಸಲಾಗಿದೆ’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಿಪಕ್ಷ ವಿರೋಧ:

ಲವ್‌ ಜಿಹಾದ್‌ ಸಮಿತಿಗೆ ವಿಪಕ್ಷ ಸಮಾಜವಾದಿ ಪಾರ್ಟಿ ಶಾಸಕ ಅಬು ಅಜ್ಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಲವ್‌ ಜಿಹಾದ್‌ ನಿಷೇಧವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ. ಮುಸ್ಲಿಮರು ಹಿಂದೂಗಳಾಗಿ ಹಾಗೂ ಹಿಂದೂಗಳು ಮುಸ್ಲಿಮರಾಗಿ ಮತಾಂತರ ಆಗುವುದು ಸಾಮಾನ್ಯ. ಅಂತರ್‌ ಧರ್ಮೀಯ ಮದುವೆಗೂ ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಅದರಲ್ಲಿ ಹಸ್ತಕ್ಷೇಪ ಸರಿಯಲ್ಲ’ ಎಂದಿದ್ದಾರೆ.

ಯುಪಿಯ ಲವ್‌ ಜಿಹಾದ್‌ ಕಾನೂನಲ್ಲಿ ಏನಿದೆ?

-ಮತಾಂತರದ ಉದ್ದೇಶದಿಂದ ಬೆದರಿಕೆ, ದಾಳಿ, ಮದುವೆ ಅಥವಾ ವಿವಾಹ ಭರವಸೆ, ಸಂಚು, ಅಪ್ರಾಪ್ತರು ಅಥವಾ ಮಹಿಳೆಯರ ಕಳ್ಳಸಾಗಣೆ ಕೃತ್ಯಗಳು ಅಪರಾಧವೆಂದು ಪರಿಗಣನೆ. ಇದಕ್ಕೆ 20 ವರ್ಷ ಸೆರೆವಾಸ ಶಿಕ್ಷೆ

-ಬಲವಂತದ ಮತಾಂತರಕ್ಕೆ ಮೊದಲಿದ್ದ 10 ವರ್ಷ ಜೈಲು, 50 ಸಾವಿರ ದಂಡದ ಬದಲು ಜೀವಾವಧಿ ಶಿಕ್ಷೆ

-ಮತಾಂತರದ ವಿರುದ್ಧ ಸಂತ್ರಸ್ತರು, ಸಂಬಂಧಿಕರನ್ನು ಹೊರತುಪಡಿಸಿಯೂ ಅನ್ಯರು ಪ್ರಕರಣ ದಾಖಲಿಸಬಹುದು

-ಸೆಷನ್‌ ಅಥವಾ ಅದಕ್ಕಿಂತ ಮೇಲಿನ ಕೋರ್ಟ್‌ಗಳಲ್ಲೇ ಮತಾಂತರ ಪ್ರಕರಣ ವಿಚಾರಣೆ

-ಹೊಸ ಕಾನೂನಿನಡಿ ದಾಖಲಾದ ಎಲ್ಲಾ ಪ್ರಕರಣಗಳು ಜಾಮೀನುರಹಿತ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಲಾಂಗೂ ಮುನ್ನ ರಾಷ್ಟ್ರಪತಿ ಹುದ್ದೆಗೆ ವಾಜಪೇಯಿ ಹೆಸರು!
ಮೋದಿ, ಶಾ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ