ಸ್ವಾವಲಂಬನೆ, ಇಂಧನ ಸುರಕ್ಷತೆಯತ್ತ ಹೆಜ್ಜೆ: ಸಿಂಗ್
1.14 ಲಕ್ಷ ಬುಕಿಂಗ್ ಪೈಕಿ 1.26 ಲಕ್ಷ ಸಿಲಿಂಡರ್ ಸಪ್ಲೈ
60 ದಿನಕ್ಕಾಗುವಷ್ಟು ತೈಲ, ನೈಸರ್ಗಿಕ ಅನಿಲ ಇದೆ45 ದಿನಕ್ಕೆ ಬೇಕಾದಷ್ಟು ಎಲ್ಪಿಜಿ ಸಂಗ್ರಹವಿದೆ
ವಿದೇಶಿ ವಿನಿಮಯ ಉಳಿಸುವ ಭಾಗವಾಗಿ ಪ್ರಧಾನಿ ಮೋದಿ ಕರೆಯ ಬೆನ್ನಲ್ಲೇ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸೋಮವಾರ ಹಿರಿಯ ಸಚಿವರ ಸಭೆ ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ ಸಚಿವ ಸಿಂಗ್, ‘ಇಂಧನ ಪೂರೈಕೆ ಸರಪಳಿಯಲ್ಲಿ ಕೊರತೆ ಅಥವಾ ಅಡಚಣೆ ಆಗದಂತೆ ನೋಡಿಕೊಳ್ಳಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದ್ದರಿಂದ ಜನ ಭಯಭೀತರಾಗುವ ಆವಶ್ಯಕತೆಯಿಲ್ಲ. ಜಾಗತಿಕ ಸವಾಲು ಎದುರಿಸಲು ದೇಶಕ್ಕೆ ಸಹಾಯ ಮಾಡುವಂತೆ ಪ್ರಧಾನಿ ಮೋದಿಯವರು ಮಾಡಿರುವ ಮನವಿಯು ಸ್ವಾವಲಂಬನೆ ಮತ್ತು ಇಂಧನ ಸುರಕ್ಷತೆಯನ್ನು ಖಾತರಿಪಡಿಸುವತ್ತ ಮಹತ್ವದ ಹೆಜ್ಜೆಯಾಗಿದೆ’ ಎಂದು ಹೇಳಿದರು.
ಅತ್ತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಮಾತನಾಡಿ, ‘ಸರ್ಕಾರವು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ಇಂಧನ ಕೊರೆತೆ ಉಂಟಾಗಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಿದ್ದರೂ, ಗ್ರಾಹಕರಿಗೆ ಅನನುಕೂಲ ಆಗದಂತೆ ಸರ್ಕಾರ ಪ್ರಯತ್ನಿಸಿದೆ. ಸಂಸ್ಕರಣಾಗಾರಗಳು ಅತ್ಯುತ್ತಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು ಅಥವಾ ಎಲ್ಪಿಜಿ ಮಳಿಗೆಗಳಲ್ಲಿ ಸಂಗ್ರಹ ಬರಿದಾಗಿಲ್ಲ.’ ಎಂದು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಅಂಕಿಅಂಶಗಳನ್ನು ನೀಡುತ್ತಾ, ‘ಕಳೆದ 3 ದಿನಗಳಲ್ಲಿ, 1.14 ಲಕ್ಷ ಬುಕಿಂಗ್ ಮಾಡಲಾಗಿದೆ. ಆದರೆ ಇದೇ ಅವಧಿಯಲ್ಲಿ 1.26 ಲಕ್ಷ ಎಲ್ಪಿಜಿ ಸಿಲಿಂಡರ್ಗಳನ್ನು ಮನೆಗಳಿಗೆ ತಲುಪಿಸಲಾಗಿದೆ. ವಾಣಿಜ್ಯ ಎಲ್ಪಿಜಿ ಮಾರಾಟವು 17,000 ಟನ್ಗಿಂತ ಹೆಚ್ಚಾಗಿದೆ. ಆಟೋ ಎಲ್ಪಿಜಿ ಮಾರಾಟವೂ 762 ಟನ್ಗಳನ್ನು ಮೀರಿದೆ’ ಎಂದರು.