ತಮ್ಮ ವಿರುದ್ಧ ಸುವೇಂದು ಗೆಲುವು ಪ್ರಶ್ನಿಸಿ ದೀದಿ ಹೈಕೋರ್ಟ್‌ಗೆ

KannadaprabhaNewsNetwork |  
Published : Jun 17, 2026, 02:00 AM IST
ಮಮತಾ | Kannada Prabha

ಸಾರಾಂಶ

ತಾವು ಪರಾಭವಗೊಂಡ ಭವಾನಿಪುರ ಕ್ಷೇತ್ರ ಫಲಿತಾಂಶ ಪ್ರಶ್ನಿಸಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಕೋಲ್ಕತಾ ಹೈಕೋರ್ಟ್‌ಗೆ ಮಂಗಳವಾರ ಮೇಲ್ಮನವಿ ಸಲ್ಲಿಸಿದ್ದಾರೆ.

ಕೋಲ್ಕತಾ: ತಾವು ಪರಾಭವಗೊಂಡ ಭವಾನಿಪುರ ಕ್ಷೇತ್ರ ಫಲಿತಾಂಶ ಪ್ರಶ್ನಿಸಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಕೋಲ್ಕತಾ ಹೈಕೋರ್ಟ್‌ಗೆ ಮಂಗಳವಾರ ಮೇಲ್ಮನವಿ ಸಲ್ಲಿಸಿದ್ದಾರೆ.

ಕಳೆದ ಪ.ಬಂಗಾಳ ವಿಧಾನಸಭೆ ಚುನಾವಣೆ ವೇಳೆ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ 15,105 ಮತಗಳ ಅಂತರದಲ್ಲಿ ಮಮತಾರನ್ನು ಮಣಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಖುದ್ದು ಮಮತಾ ಕೋಲ್ಕತಾ ಹೈಕೋರ್ಟ್‌ ನೋಂದಣಾ ಕಚೇರಿಗೆ ತೆರಳಿದ್ದರು ಎಂದು ಟಿಎಂಸಿ ಮೂಲಗಳು ತಿಳಿಸಿವೆ.

ಮತಗಳ ಎಣಿಕೆ ಮೇ 4ರಂದು ನಡೆದಿತ್ತು. ಹಲವು ಸುತ್ತುಗಳಲ್ಲಿ ಮಮತಾ ಮುಂದಿದ್ದರು. ಬಳಿಕ ಕೊನೆಯ ಹಂತದವರೆಗೂ ದೀದಿ-ಅಧಿಕಾರಿ ನಡುವೆ ತುರುಸಿನ ಫೈಟ್ ನಡೆದು ಕೊನೆಗೆ ಅಧಿಕಾರಿ ಗೆದ್ದಿದ್ದರು.

==

ಸತತ 3ನೇ ದಿನ ಟಿಎಂಸಿ ನಂ.2 ನಾಯಕ ಅಭಿಷೇಕ್‌ ಬ್ಯಾನರ್ಜಿ ವಿಚಾರಣೆ

ಕೋಲ್ಕತಾ: ಕಳೆದೆರಡು ದಿನ ಪ್ರತ್ಯೇಕ 2 ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳೆದುರು ವಿಚಾರಣೆಗೆ ಹಾಜರಾಗಿದ್ದ ಟಿಎಂಸಿ ನಂ.2 ನಾಯಕ, ಸಂಸದ ಅಭಿಷೇಕ್‌ ಬ್ಯಾನರ್ಜಿ ಮಂಗಳವಾರ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ವಿಚಾರಣೆ ಎದುರಿಸಿದರು.ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಬಗ್ಗೆ ಚುನಾವಣಾ ರ್‍ಯಾಲಿ ವೇಳೆ ಅಭಿಷೇಕ್‌ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಪ್ರಕರಣ ಕಳೆದ ತಿಂಗಳು ದಾಖಲಾಗಿತ್ತು. ಅದರ ವಿಚಾರಣೆ ವೇಳೆ, ಆ ಹೇಳಿಕೆಯ ವಿಡಿಯೋವನ್ನು ಅಭಿಷೇಕ್‌ಗೆ ಸಿಐಡಿ ಅಧಿಕಾರಿಗಳು ತೋರಿಸಿದ್ದಾರೆ ಹಾಗೂ ಅದರ ಹಿಂದಿನ ಉದ್ದೇಶವೇನೆಂದು ವಿಚಾರಿಸಿದ್ದಾರೆ. ಈ ವೇಳೆ, ವಿಚಾರಣಾ ಪ್ರಕ್ರಿಯೆಯ ಪೂರ್ಣ ವಿಡಿಯೋವನ್ನೂ ಮಾಡಿಕೊಳ್ಳಲಾಗುತ್ತಿದೆ.

ಸೋಮವಾರ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಇ.ಡಿ. ಹಾಗೂ ಭಾನುವಾರ ಸಂಸದರ ನಕಲಿ ಕೇಸ್‌ಗೆ ಸಂಬಂಧಿಸಿದಂತೆ ಸಿಐಡಿ ಇವರ ವಿಚಾರಣೆ ನಡೆಸಿತ್ತು.

==

ಉಭಯ ಬಣಗಳ ವಾದ ಆಲಿಸಿ ಟಿಎಂಸಿ ರೆಬೆಲ್ಸ್‌ ಬಗ್ಗೆ ಬಿರ್ಲಾ ನಿರ್ಧಾರ

ನವದೆಹಲಿ: ಟಿಎಂಸಿಯಿಂದ ಬಂಡಾಯವೆದ್ದು, ಎನ್‌ಸಿಪಿಐ ಪಕ್ಷದೊಡನೆ ವಿಲೀನರಾಗಲು ಮುಂದಾಗಿರುವ ಬಂಡಾಯ ಗುಂಪಿಗೆ ಮಾನ್ಯತೆ ನೀಡಬೇಕೆ, ಬೇಡವೇ ಎಂಬ ಬಗ್ಗೆ ಎರಡೂ ಬಣಗಳ ವಾದ ಆಲಿಸಿ ತೀರ್ಮಾನಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರ್ಧರಿಸಿದ್ದಾರೆ.ಈ ಬಗ್ಗೆ ಸೋಮವಾರವೇ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಅವರಿಗೆ ಮಧ್ಯಾಹ್ನ 2 ಗಂಟೆಗೆ ಇ-ಮೇಲ್‌ ಮಾಡಿ, 4 ಗಂಟೆಗೆ ಭೇಟಿಯಾಗಲು ಬಿರ್ಲಾ ಹೇಳಿದ್ದರು. ಆದರೆ ಅಭಿಷೇಕ್‌ ಕೋಲ್ಕತಾದಲ್ಲಿ ಪ್ರಕರಣವೊಂದರ ಇ.ಡಿ. ವಿಚಾರಣೆಗೆ ಹಾಜರಾಗಿದ್ದ ಕಾರಣ ಬರಲು ಆಗಲಿಲ್ಲ. ಹೀಗಾಗಿ, ಸ್ಪೀಕರ್ ಭೇಟಿಗೆ ಟಿಎಂಸಿ ಹೊಸ ದಿನಾಂಕ ಕೇಳಿದೆ.

ಬಂಡಾಯ ಸಂಸದರ ಸಂಖ್ಯೆ 22ಕ್ಕೇರಿಕೆ- ಕಾಕೋಲಿ:ಈ ನಡುವೆ, ಬಂಡಾಯ ಸಂಸದರ ನಾಯಕಿ ಕಾಕೋಲಿ ಘೋಷ್‌ ದಸ್ತಿದಾರ್ ಮಾತನಾಡಿ, ‘ನಮ್ಮ ಬಲ 20ರಿಂದ 22ಕ್ಕೇರುವ ಸಾಧ್ಯತೆ ಇದೆ. ನಾವು ವಿಲೀನಗೊಳ್ಳಲು ಎನ್‌ಸಿಪಿಐ ಪಕ್ಷದಲ್ಲಿ ಒಮ್ಮತ ವ್ಯಕ್ತವಾಗಿದೆ’ ಎಂದಿದ್ದಾರೆ.

ಈ ನಡುವೆ ಎನ್‌ಸಿಪಿಐ ನೂತನ ಅಧ್ಯಕ್ಷರಾಗಿ ಜ್ಯೋತಿಪ್ರಕಾಶ್ ಚಟರ್ಜಿ ನೇಮಕವಾಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಂದು ಮೋದಿ-ಟ್ರಂಪ್‌ ದ್ವಿಪಕ್ಷೀಯ ಸಭೆ
ಪ್ರಿಸ್ಕ್ರಿಪ್ಷನ್‌ ಇಲ್ಲದೆ ಕೆಮ್ಮಿನ ಸಿರಪ್‌ ಮಾರಾಟ ನಿಷಿದ್ಧ