ದಾವೋಸ್‌ ಶೃಂಗಸಭೆಗೆ ಸಚಿವ ಜೋಶಿ

Published : Jan 20, 2026, 07:28 AM IST
Prahlad Joshi

ಸಾರಾಂಶ

ಸ್ವಿಜರ್ಲೆಂಡ್‌ನ ಹಿಮಚ್ಛಾದಿತ ನಗರಿ ದಾವೋಸ್‌ನಲ್ಲಿ ಸೋಮವಾರದಿಂದ ಆರಂಭಗೊಂಡ 5 ದಿನಗಳ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಭಾರತ ಸರ್ಕಾರದ ಪ್ರತಿನಿಧಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೇರಿದಂತೆ ಮೂವರು ಸಚಿವರು ಪಾಲ್ಗೊಂಡಿದ್ದಾರೆ.

ದಾವೋಸ್: ಸ್ವಿಜರ್ಲೆಂಡ್‌ನ ಹಿಮಚ್ಛಾದಿತ ನಗರಿ ದಾವೋಸ್‌ನಲ್ಲಿ ಸೋಮವಾರದಿಂದ ಆರಂಭಗೊಂಡ 5 ದಿನಗಳ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಭಾರತ ಸರ್ಕಾರದ ಪ್ರತಿನಿಧಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೇರಿದಂತೆ ಮೂವರು ಸಚಿವರು ಪಾಲ್ಗೊಂಡಿದ್ದಾರೆ. ಇದರೊಂದಿಗೆ ಈ ಸಭೆಯಲ್ಲಿ ಪಾಲ್ಗೊಂಡ ಕರ್ನಾಟಕ ಮೂಲದ ಮೊದಲ ಕೇಂದ್ರ ಸಚಿವ ಎನ್ನುವ ಹೆಗ್ಗಳಿಕೆಗೆ ಜೋಶಿ ಪಾತ್ರರಾಗಿದ್ದಾರೆ.

ಜಾಗತಿಕವಾಗಿ ಅತ್ಯಂತ ಮಹತ್ವದ ಈ ಉದ್ಯಮ ಸಭೆಗೆ ಸಚಿವ ಜೋಶಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಕಳುಹಿಸಿದ್ದಾರೆ. ಸಚಿವ ಜೋಶಿ ಜೊತೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಕೂಡ ದಾವೋಸ್‌ಗೆ ತೆರಳಿದ್ದಾರೆ.

ಹಲವು ಸಭೆಗಳಲ್ಲಿ ಭಾಗಿ:

ಶೃಂಗಸಭೆಯ ಅವಧಿಯಲ್ಲಿ ಸಚಿವ ಜೋಶಿ ಕೆನಡಾದ ಚಾರ್ಲ್ಸ್ ಎಮಂಡ್ ಮತ್ತು ಲಾ ಕೈಸ್ಸೆ ಅವರೊಂದಿಗೆ ಖಾಸಗಿ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಬಳಿಕ ಸ್ಪೇನ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೇ, ಒಮಾನ್‌ನ ಸೈದ್ ಮೊಹಮ್ಮದ್ ಅಹ್ಮದ್ ಅಲ್-ಸಕ್ರಿ ಅವರೊಂದಿಗೆ ಚರ್ಚೆ ನಡೆಸಿದ್ದು, ಭಾರತದ ನವೀಕರಿಸಬಹುದಾದ ಇಂಧನ ವಲಯ ಸೇರಿದಂತೆ ವಿವಿಧ ಉದ್ದಿಮೆಗಳಲ್ಲಿ ಹೂಡಿಕೆಗೆ ಆಕರ್ಷಿಸುವ ಸಲುವಾಗಿ ವಿಶೇಷ ಪ್ರಯತ್ನ ನಡೆಸಿದ್ದಾರೆ.

ಕಳೆದ ಬಾರಿ ನಡೆದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧಿವೇಶನದಲ್ಲಿ ಭಾರತದ ಸೌರ ಸಾಧನೆ ಪ್ರಚುರಪಡಿಸಿ ಯುರೋಪಿಯನ್ ಒಕ್ಕೂಟವನ್ನು ಸೆಳೆದಿದ್ದ ಸಚಿವ ಜೋಶಿ, ಇದೀಗ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಸಹ ಅಂತಾರಾಷ್ಟ್ರೀಯವಾಗಿ ಭಾರತದ ನಾಯಕತ್ವವನ್ನು ಪ್ರತಿಪಾದಿಸುವಲ್ಲಿ ಮುಂದಾಗಿದ್ದಾರೆ.

ಆತ್ಮೀಯ ಸ್ವಾಗತ:

ಭಾನುವಾರ ಸಂಜೆ ದಾವೋಸ್‌ನ ಜ್ಯೂರಿಕ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೋಶಿ ಸೇರಿ ಕೇಂದ್ರದ ಮೂವರು ಸಚಿವರ ತಂಡವನ್ನು ಸ್ವಿಜರ್ಲೆಂಡ್‌ನಲ್ಲಿನ ಭಾರತೀಯ ರಾಯಭಾರಿ ಕುಮಾರ್ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಜೋಶಿ ಅವರೊಂದಿಗೆ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಕುರಿತಂತೆ ಚರ್ಚೆ ನಡೆಸಿದರು. ಈ ವೇಳೆ ನವೀಕರಿಸಬಹುದಾದ ಇಂಧನದಲ್ಲಿ ಭಾರತದ ಮಹತ್ತರ ಹೆಜ್ಜೆ ಕುರಿತು ಅಚ್ಚರಿ ವ್ಯಕ್ತಪಡಿಸಿದರು.

ಭಾರತದಲ್ಲಿನ ಆಹಾರ ವ್ಯವಸ್ಥೆ, ಸಾರ್ವಜನಿಕ ವಿತರಣೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಮ್ಮ ಕ್ರಾಂತಿ, ಆಡಳಿತ ಸುಧಾರಣೆ ಹಾಗೂ ಕಾರ್ಯವೈಖರಿಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಎಂಬುದರ ಸಂಕೇತ ಇದಾಗಿದೆ. ಅಲ್ಲದೇ, ಹೆಚ್ಚಿನ ಹೂಡಿಕೆ ಸೆಳೆಯಲು ಅವಕಾಶವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಇದೇ ವೇಳೆ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ ಮೊದಲ ಸಚಿವ:

ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದಿರುವ ವಿಶ್ವ ಆರ್ಥಿಕ ವೇದಿಕೆ ಸಭೆಗೆ ಭಾರತ ಸರ್ಕಾರದಿಂದ ಪ್ರತಿನಿಧಿಸುತ್ತಿರುವ ಕರ್ನಾಟಕದ ಮೊದಲ ಕೇಂದ್ರ ಸಚಿವ ಎನ್ನುವ ಹೆಗ್ಗಳಿಕೆಗೆ ಪ್ರಲ್ಹಾದ ಜೋಶಿ ಅವರು ಭಾಜನರಾಗಿದ್ದಾರೆ. ಈವರೆಗೆ ಕರ್ನಾಟಕದ ಹಲವು ಮುಖ್ಯಮಂತ್ರಿಗಳು ರಾಜ್ಯವನ್ನು ದಾವೋಸ್‌ನಲ್ಲಿ ಪ್ರತಿನಿಧಿಸಿದ್ದಾರೆ. ಆದರೆ ಈ ಬಾರಿ ಕರ್ನಾಟಕದ ಮೊದಲ ಕೇಂದ್ರ ಸಚಿವರಾಗಿ ಜೋಶಿ ಭಾಗಿಯಾಗುತ್ತಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇನ್ನು 4 ವರ್ಷಗಳಲ್ಲಿ ಭಾರತ ಮೇಲ್ಮಧ್ಯಮ ಆದಾಯ ದೇಶ
ಬಸ್‌ನಲ್ಲಿ ಲೈಂಗಿಕ ಕಿರುಕುಳ ಎಂದು ಮಹಿಳೆ ವಿಡಿಯೋ, ವ್ಯಕ್ತಿ ಆತ್ಮ*ತ್ಯೆ