;Resize=(412,232))
ನವದೆಹಲಿ: ದೆಹಲಿಯಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ವೇಳೆ ತಮ್ಮನ್ನು ಆಫ್ಲೈನ್ ಮತ್ತು ಆನ್ಲೈನ್ನಲ್ಲಿ ಕೀಳು ಭಾಷೆಯಲ್ಲಿ ಟೀಕಿಸಿದ ಯುವಸಮೂಹವನ್ನು ಕ್ಷಮಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮತ್ತೊಮ್ಮೆ ಯುವ ಸಮೂಹವನ್ನು ಹಾಯ್ ಫ್ರೆಂಡ್ಸ್ ಎನ್ನುತ್ತಲೇ ಶುಕ್ರವಾರ ತಡರಾತ್ರಿ ಇನ್ಸ್ಟಾಗ್ರಾಂನಲ್ಲಿ ಈ ಕುರಿತ ವಿಡಿಯೋವೊಂದನ್ನು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.ಈ ರೀಲ್ಸ್ನಲ್ಲಿ ‘ಜಂತರ್ ಮಂತರ್ನಲ್ಲಿ ಆಗಿದ್ದನ್ನು ವಿಶ್ವವೇ ನೋಡಿದೆ. ಕೆಲ ಮಕ್ಕಳು ಕೆಟ್ಟ ಮಾತುಗಳನ್ನಾಡಿದರು. ಸಭ್ಯ ಸಮಾಜಕ್ಕೆ ಶೋಭೆ ತರದಂತಹ ಪದಗಳನ್ನು ಬಳಸಿದರು. ನನಗಷ್ಟೇ ಅಲ್ಲ, ನನ್ನ ತಾಯಿಯನ್ನೂ ನಿಂದಿಸಿದರು.
ಬಾಲ್ಯದಲ್ಲಿ ತಪ್ಪುಗಳಾಗುತ್ತವೆ. ಅವನ್ನು ಸುಧಾರಿಸಿಕೊಳ್ಳಲೂ ಅವಕಾಶ ಇರುತ್ತದೆ. ಸಮಾಜದಲ್ಲಿರುವ ಆಕ್ರೋಶ ನನಗರ್ಥವಾಗುತ್ತದೆ. ನಮ್ಮ ಪುತ್ರಿಯರು ಇಂಥ ಭಾಷೆ ಬಳಸಿದ್ದು ಸಾಂಸ್ಕೃತಿಕ ಆಘಾತವಾಗಿತ್ತು. ಆದರೆ ಈ ಮಕ್ಕಳನ್ನು ಅಪ್ಪಿ ಸರಿದಾರಿ ತೋರಿಸುವ ಸಮಯ ಇದಾಗಿದೆ. ಅವರನ್ನು ಕೋರ್ಟಿಗೆ ಅಲೆದಾಡಿಸಿ, ಶಿಕ್ಷಿಸುವುದರಿಂದ ಪರಿಸ್ಥಿತಿ ಬದಲಾಗದು.
ನಾನು ಅವರೆಲ್ಲರನ್ನು ಕ್ಷಮಿಸುತ್ತೇನೆ’ ಎಂದರು. ಮುಂದುವರಿದು, ‘ಕೆಲವೊಮ್ಮೆ ನಾಲಗೆ ನಮ್ಮ ಹಲ್ಲಿನಡಿ ಬಂದುಬಿಡುತ್ತದೆ. ರಕ್ತ ಬರುತ್ತದೆ. ಹಾಗೆಂದು ಹಲ್ಲು ಮುರಿದುಕೊಳ್ಳುವುದಿಲ್ಲ. ಯಾಕೆಂದರೆ ಹಲ್ಲು ಮತ್ತು ನಾಲಗೆ ನಮ್ಮದೆ. ಅಂತೆಯೇ ಈ ಮಕ್ಕಳು ಕೂಡ ನಮ್ಮವರು. ಎಲ್ಲರೂ ತಪ್ಪುಗಳಿಂದ ಪಾಠ ಕಲಿತು ಒಟ್ಟಾಗಿ ದೇಶ ಕಟ್ಟೋಣ’ ಎಂದು ಕರೆ ನೀಡಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಭಾರೀ ಟೀಕೆಗಳು ಕೇಳಿಬರುತ್ತಿರುವ ಹಾಗೂ ವಿದ್ಯಾರ್ಥಿಗಳನ್ನು ಶಿಕ್ಷಿಸಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿರುವ ಹೊತ್ತಿನಲ್ಲೇ ಈ ವಿಡಿಯೋ ಮಾಡಿರುವುದು ಮಹತ್ವ ಪಡೆದುಕೊಂಡಿದೆ.