ಚಾಯ್ಬಾಸ್: 10 ವರ್ಷಗಳಲ್ಲಿ 22 ಶತಕೋಟ್ಯಧೀಶರನ್ನು (ಬಿಲಿಯನೇರ್) ಸೃಷ್ಟಿಸಿದ್ದೇ ಪ್ರಧಾನಿ ನರೇಂದ್ರ ಮೋದಿ ಸಾಧನೆ ಎಂದು ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾವು ಅಧಿಕಾರಕ್ಕೆ ಬಂದಲ್ಲಿ ಕೋಟ್ಯಂತರ ಜನರನ್ನು ಲಖಪತಿಗಳಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಆದಿವಾಸಿಗಳು ಮನೆಕೆಲಸಕ್ಕೆ ಸೀಮಿತವಾಗಿರಬೇಕು ಎಂಬುದು ಬಿಜೆಪಿ ಗುರಿ. ಆದಿವಾಸಿಗಳು ವೈದ್ಯರು, ಎಂಜಿನಿಯರ್ ಮತ್ತು ವಕೀಲರಾಗುವುದು ಅವರಿಗೆ ಬೇಕಿಲ್ಲ. ದೇಶವನ್ನು ಮುನ್ನಡೆಸುವ 90 ಐಎಎಸ್ ಅಧಿಕಾರಿಗಳಲ್ಲಿ ಓರ್ವ ಮಾತ್ರ ಆದಿವಾಸಿ. ಆದರೆ ಅವರನ್ನೂ ದೆಹಲಿಯಲ್ಲಿ ಕಡೆಗಣಿಸಲಾಗಿದೆ’ ಎಂದು ರಾಹುಲ್ ಆರೋಪಿಸಿದರು.
ಜೊತೆಗೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅಗ್ನಿವೀರ ಯೋಜನೆ ರದ್ದು ಮಾಡಲಿದೆ. ಜಿಎಸ್ಟಿ ಕಾಯ್ದೆಗೆ ತಿದ್ದುಪಡಿ ತರಲಿದೆ. ಜೊತೆಗೆ ಆದಿವಾಸಿಗಳಿಗೆ ಪ್ರತ್ಯೇಕ ಸರ್ನಾ ಧಾರ್ಮಿಕ ಸಂಹಿತೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.