ಜಬಲ್ಪುರ: ವರದಕ್ಷಿಣೆ ಆರೋಪದ ಮೇಲೆ ಕಳೆದ ವಾರ ಪತಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ನೋಯ್ಡಾ ಮಹಿಳೆ ತ್ವಿಶಾ ಶರ್ಮಾಳ ಪತಿ ಸಮರ್ಥ್ ಸಿಂಗ್ ಮಧ್ಯಪ್ರದೇಶದ ಜಬಲ್ಪುರ ಕೋರ್ಟ್ ಎದುರು ಶುಕ್ರವಾರ ಶರಣಾಗಿದ್ದಾನೆ.
ಸಿಂಗ್ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ಗೆ ಗುರುವಾರ ಅರ್ಜಿ ಸಲ್ಲಿಸಿದ್ದ. ಆದರೆ ಶುಕ್ರವಾರ ಬೆಳಿಗ್ಗೆ ಅರ್ಜಿಯನ್ನು ಹಿಂಪಡೆದಿದ್ದ. ಹೀಗಾಗಿ ಆತನಿಗೆ ಶರಣಾಗತಿಯನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಅದರ ಬೆನ್ನಲ್ಲೇ ಹೈಕೋರ್ಟ್ ಎದುರು ಶರಣಾಗಿದ್ದಾನೆ. ನಂತರ ಪೊಲೀಸರು ಆತನನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ತ್ವಿಶಾ ಶರ್ಮಾ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲು ಮಧ್ಯಪ್ರದೇಶ ಸರ್ಕಾರ ಶುಕ್ರವಾರ ಪ್ರಸ್ತಾವನೆ ಸಲ್ಲಿಸಿದೆ. ಗೃಹ ಇಲಾಖೆಯ ಕಾರ್ಯದರ್ಶಿ ಕೃಷ್ಣವೇಣಿ ದೇಸಾವಟು ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ.
ತ್ವಿಶಾ ಶರ್ಮಾಳ 2ನೇ ಮರಣೋತ್ತರ ಪರೀಕ್ಷೆಗೆ ಅನುಮತಿ ಕೋರಿ ಕುಟುಂಬಸ್ಥರು ಅಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.