- ಜನವರಿ 8 ರಿಂದ 12ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜನೆಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನಲ್ಲಿ ರಾಷ್ಟ್ರಮಟ್ಟದ 4ನೇ ಏಕಲವ್ಯ ಮಾದರಿ ವಸತಿ ಶಾಲೆಗಳ ಕ್ರೀಡಾಕೂಟವನ್ನು ಜನವರಿ 8 ರಿಂದ 12ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಪ. ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ. ಕಲ್ಲೇಶ್ ಹೇಳಿದರು.ಪಡುವಾರಳ್ಳಿಯಲ್ಲಿರುವ ಡಾ. ಬಾಬು ಜಗಜೀವನ್ ರಾಂ ಭವನದಲ್ಲಿ ತಾಲೂಕು ಅಧಿಕಾರಿಗಳು ಕ್ರೈಸ್ ಪ್ರಾಂಶುಪಾಲರು ಹಾಗೂ ವಾರ್ಡನ್ ಗಳು ಭಾಗವಹಿಸಿದ್ದ ಕ್ರೀಡಾಕೂಟದ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ 28 ರಾಜ್ಯಗಳಿಂದ ಸುಮಾರು 6500 ಬುಡಕಟ್ಟು ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ಆಗಮಿಸಲಿದ್ದು, 9 ವಿಭಾಗಗಳಲ್ಲಿ ಕ್ರೀಡೆಗಳು ನಡೆಯಲಿದ್ದು, ಚಾಮುಂಡಿ ವಿಹಾರ ಕ್ರೀಡಾಂಗಣ ಹಾಗೂ ಮೈಸೂರು ವಿಶ್ವ ವಿದ್ಯಾನಿಲಯದ ಓವೆಲ್ ಗ್ರೌಂಡ್ನಲ್ಲಿ ಏಕಕಾಲದಲ್ಲಿ ನಡೆಯಲಿವೆ. ದೇಶದ ಎಲ್ಲ ರಾಜ್ಯಗಳಿಂದ ಬರುವ ಕ್ರೀಡಾ ಪಟುಗಳಿಗೆ ವಸತಿ ವ್ಯವಸ್ಥೆ, ಊಟದ ವ್ಯವಸ್ಥೆ, ಮಾಡಲಾಗುವುದು. ಕ್ರೀಡಾಕೂಟದ ನಂತರ ಸಂಜೆ ಸಾಂಸ್ರ್ಕತಿಕ ಕಾರ್ಯಕ್ರಮಗಳು ನಡೆಯಲಿವೆ. ಜ. 8 ರಂದು ನಡೆಯುವ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಲಿದ್ದು, ಪ. ವರ್ಗಗಳ ಕಲ್ಯಾಣ ಇಲಾಖೆಯ ಕೇಂದ್ರ ಸಚಿವರು, ರಾಜ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ ಎಂದರು. ನಂತರ ಚಾಮುಂಡಿವಿಹಾರ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.ಎನ್ಇಎಸ್ಟಿ ಉಪ ಆಯುಕ್ತರಾದ ಇಂದಿರಾ ಮಧುಗಲ್, ಕಚೇರಿ ಅಧೀಕ್ಷಕ ಪಿಯೂಷ್ ನಾಥ್, ಮೈಸೂರು ಜಿಲ್ಲೆಯ ಪ. ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿ ಎನ್. ಮುನಿರಾಜು, ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಸುದರ್ಶನ್, ಕ್ರೈಸ್ ಸಂಯೋಜಕ ಎಸ್.ಕೆ. ಮಹದೇವ್, ತಾಲೂಕು ಕಲ್ಯಾಣ ಅಧಿಕಾರಿಗಳಾದ ಅರುಣ್ ಪ್ರಭು, ನಾರಾಯಣಸ್ವಾಮಿ, ಕೋಮಲ, ಕ್ರೀಡಾ ತರಬೇತುದಾರರಾದ ರಾಮಸ್ವಾಮಿ, ವಿಶ್ವ, ರವೀಂದ್ರ, ಸುಂದರೇಶ್, ಗಿರೀಶ್, ಲೋಕೇಶ್, ಬಾಲು ಇದ್ದರು.