ನವದೆಹಲಿ: ಜೂ.21ಕ್ಕೆ ನೀಟ್‌ ಪರೀಕ್ಷೆ ಹಿನ್ನೆಲೆ ಕೇಂದ್ರ ಸರ್ಕಾರ 22 ರ ತನಕ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ ಹೇರಿದ ಬೆನ್ನಲ್ಲೇ ಸರ್ಕಾರದ ನಿರ್ಧಾರ ಕಾನೂನು ಬಾಹಿರ ಎಂದು ಆರೋಪಿಸಿ ಪ್ರಶ್ನಿಸಿ ಮೆಸೇಜಿಂಗ್‌ ಆ್ಯಪ್ ಟೆಲಿಗ್ರಾಂ ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ. ನಿಷೇಧದಿಂದಾಗಿ 15 ಕೋಟಿ ಜನರು ಸೇವೆಯಿಂದ ವಂಚಿತರಾಗಿದ್ದಾರೆ ಎಂದು ಟೆಲಿಗಾಂ ಪರ ವಕೀಲರು ವಾದಿಸಿದರು. ಬಳಿಕ ಕೋರ್ಟ್‌ ನಿಷೇಧದ ಕುರಿತು ಉತ್ತರ ಕೋರಿ ಕೇಂದ್ರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ಬಲವಾಗಿ ಸಮರ್ಥಿಸಿಕೊಂಡ ಸಾಲಿಸಿಟರ್ ಜನರಲ್‌

ಈ ನಡುವೆ ಟೆಲಿಗ್ರಾಂ ಮೇಲೆ ಹೇರಿದ ನಿಷೇಧವನ್ನು ಬಲವಾಗಿ ಸಮರ್ಥಿಸಿಕೊಂಡ ಸಾಲಿಸಿಟರ್ ಜನರಲ್‌, ಟೆಲಿಗ್ರಾಂ ಬಳಸಿಕೊಂಡು ನೀಟ್‌ ಪರೀಕ್ಷೆ ವೇಳೆ ನಡೆಸಿದ ಅಕ್ರಮ ಕುರಿತು ತಾವು ಬಲವಾದ ಸಾಕ್ಷ್ಯ ಹೊಂದಿದ್ದು, ಒಂದು ವೇಳೆ ಗುರುವಾರಕ್ಕೆ ವಿಚಾರಣೆ ನಿಗದಿಪಡಿಸಿದರೆ ಅಂದೇ ಮಾಹಿತಿ ಬಹಿರಂಗಪಡಿಸುವುದಾಗಿ ಹೇಳಿದರು. ಈ ವೇಳೆ ಕೋರ್ಟ್‌ ಜೂ.18ರ ಗುರುವಾರಕ್ಕೆ ವಿಚಾರಣೆ ಮುಂದೂಡಿತು.

ಟೆಲಿಗ್ರಾಮ್‌ ನಿಷೇಧಕ್ಕೆ ರಿಲಯನ್ಸ್, ವಾಟ್ಸಾಪ್‌ ಕಾರಣ: ಆ್ಯಪ್‌ ಸ್ಥಾಪಕ

ನವದೆಹಲಿ: ಭಾರತದಲ್ಲಿ ಟೆಲಿಗ್ರಾಮ್‌ ನಿಷೇಧ ಮತ್ತು ನೆರೆಹೊರೆಯ ದೇಶಗಳಲ್ಲಿ ಟೆಲಿಗ್ರಾಂ ಲಭ್ಯತೆಗೆ ಅಡ್ಡಿಪಡಿಸುವಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ವಾಟ್ಸಾಪ್‌ ಕೈವಾಡವಿರಬಹುದು ಎಂದು ಟೆಲಿಗ್ರಾಂ ಸಂಸ್ಥಾಪಕ ಪಾವೆಲ್‌ ಡುರೋವ್‌ ಗಂಭೀರ ಆರೋಪ ಮಾಡಿದ್ದಾರೆ. ನೀಟ್‌ ಪರೀಕ್ಷೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತದಲ್ಲಿ ಜೂ.22ರವರೆಗೆ ಟೆಲಿಗ್ರಾಂ ಮೇಲೆ ನಿಷೇಧ ಹೇರಿದ ಬೆನ್ನಲ್ಲೇ ಅವರು ಈ ಆರೋಪ ಮಾಡಿದ್ದಾರೆ.


 ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ‘ಭಾರತೀಯ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್‌, ಬಾರ್ಡರ್‌ ಗೇಟ್‌ವೇ ಪ್ರೋಟೋಕಾಲ್‌ ಎಂಬ ಹೈಜಾಕಿಂಗ್‌ ಮೂಲಕ ಯುಎಇ ಸೇರಿದಂತೆ ಭಾರತದ ಹೊರಗಿನ ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಮ್‌ ಪ್ರವೇಶಿಸಲು ತೊಂದರೆ ಮಾಡಿದೆ. ರಿಲಯನ್ಸ್‌. ಭಾಗಶಃ ವಾಟ್ಸಾಪ್‌ನ ಮಾತೃ ಕಂಪನಿ ಮೆಟಾದ ಒಡೆತನದಲ್ಲಿದೆ. ಹೀಗಾಗಿ ಭಾರತದಲ್ಲಿ ಟೆಲಿಗ್ರಾಮ್‌ ನಿಷೇಧಿಸುವ ಲಾಬಿ ಹಿಂದೆ ರಿಲಯನ್ಸ್‌/ ವಾಟ್ಸಾಪ್ ಕೈವಾಡವಿದ್ದರೆ ಆಶ್ಚರ್ಯವಿಲ್ಲ’ ಎಂದಿದ್ದಾರೆ. ಆದರೆ ಬಿಜಿಪಿ ಸೇವೆ ನೀಡುತ್ತಿರುವುದು ರಿಲಯನ್ಸ್ ಇಂಡಸ್ಟ್ರೀಸ್‌ನ ಭಾಗವಾದ ಜಿಯೋ ಅಲ್ಲ ಬದಲಾಗಿ ಅವರ ಸೋದರ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುನಿಕೇಷನ್‌.