ಸಾರಾಂಶ
ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯವಾದ ಅಪರಿಚಿತರು ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಸುಮಾರು ರು.19.90 ಲಕ್ಷ ವಂಚಿಸಿದ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯವಾದ ಅಪರಿಚಿತರು ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಸುಮಾರು ರು.19.90 ಲಕ್ಷ ವಂಚಿಸಿದ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಸೆ.29 ರಂದು ಮಲೆಬೆಟ್ಟು ನಿವಾಸಿ ಅಮೃತೇಶ್ ಕುಮಾರ್ ಎಂಬವರಿಗೆ ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯವಾದ ಯಾರೋ ಅಪರಿಚಿತರು ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ನೀಡುವುದಾಗಿ ಮೊಬೈಲ್ ನಲ್ಲಿದ್ದ ಟೆಲಿಗ್ರಾಂ ಅಪ್ಲಿಕೇಶನ್ ಗೆ ಒಂದು ವೆಬ್ ಸೈಟ್ ಲಿಂಕ್ ಕಳುಹಿಸಿದ್ದರು.
ಅದರಲ್ಲಿ ನೊಂದಾಯಿಸಿಕೊಂಡು ಆನ್ ಲೈನ್ ವಸ್ತುಗಳನ್ನು ಉತ್ತೇಜಿಸಿದಲ್ಲಿ ಸಂಬಳದ ರೂಪದಲ್ಲಿ ಖಾತೆಗೆ ಹಣ ಜಮಾ ಮಾಡಲಾಗುವುದೆಂದು ತಿಳಿಸಿದ್ದರು. ಅವರು ವಂಚಕರ ಮಾರ್ಗದರ್ಶನದಂತೆ ಲಿಂಕ್ ಓಪನ್ ಮಾಡಿ ನೊಂದಾಯಿಸಿ ಅವರು ನೀಡಿರುವ ಟಾಸ್ಕ್ ಮುಂದುವರಿಸುತ್ತಾ ಹೋದಂತೆ, ಟಾಸ್ಕ್ ಮುಕ್ತಾಯಗೊಳಿಸಲು ಠೇವಣಿ ರೂಪದಲ್ಲಿ ಹಣ ಸಂದಾಯ ಮಾಡಬೇಕು ಎಂಬ ಸೂಚನೆ ಬಂತು. ವಿಶೇಷ ಬೋನಸ್ ನೀಡುವುದಾಗಿಯೂ ದೊರೆಯುವ ಬೋನಸ್ ಪಡೆಯಲು ಠೇವಣಿ ಹಣವನ್ನು ಮತ್ತೆ ಮತ್ತೆ ಪಾವತಿಸಲು ತಿಳಿಸಿದಂತೆ ಅವರು ವಿವಿಧ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಯ ವಿವಿಧ ಬ್ಯಾಂಕ್ ಖಾತೆಗೆ ಒಟ್ಟು 19,90,442 ರು. ಹಣವನ್ನು ಹಂತ-ಹಂತವಾಗಿ ವರ್ಗಾಯಿಸಿದ್ದಾರೆ.ಇದಾದ ಬಳಿಕ ಈ ಅಪರಿಚಿತ ವ್ಯಕ್ತಿಗಳು ಸಂಪರ್ಕಕ್ಕೆ ಸಿಗದೆ ಜಮಾ ಮಾಡಿದ ಹಣವನ್ನು ವಾಪಾಸ್ ನೀಡದೆ ಮೋಸ ಮಾಡಿ ವಂಚಿಸಿದ್ದು ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.