ಸಂಸತ್ತಿನ ಲಾಗಿನ್‌, ಪಾಸ್‌ವರ್ಡ್‌ ಕೊಟ್ಟಿದ್ದ ಸಂಸದೆ: ಉದ್ಯಮಿ

KannadaprabhaNewsNetwork |  
Published : Oct 21, 2023, 12:30 AM IST
ಮಹುವಾ | Kannada Prabha

ಸಾರಾಂಶ

ಮೋದಿಯ ಕಟು ಟೀಕಾಕಾರೆ, ತೃಣಮೂಲ ಕಾಂಗ್ರೆಸ್ ಎಂಪಿ ಮಹುವಾ ಮೊಯಿತ್ರಾ ವಿರುದ್ಧ ಸ್ಫೋಟಕ ಆರೋಪ. ಭಾರಿ ಸಂಚಲನ. ವಿಚಾರಣೆಗೆ ಶೀಘ್ರ ಮೊಯಿತ್ರಾಗೆ ಬುಲಾವ್‌: ಸಂಸದೀಯ ಸಮಿತಿ. ಪ್ರಧಾನಿ ಕಚೇರಿ ಒತ್ತಡದಿಂದ ಆರೋಪ: ಮಹುವಾ ಕಿಡಿಉದ್ಯಮಿ ಹೇಳಿದ್ದೇನು? ರಾಷ್ಟ್ರಮಟ್ಟದಲ್ಲಿ ಬೇಗ ಹೆಸರು ಮಾಡಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಬಯಸಿದ್ದರು.ಪ್ರಧಾನಿ ಮೋದಿ ಮೇಲೆ ಆಕ್ರಮಣ ಮಾಡಿದರೆ ಖ್ಯಾತಿ ಪಡೆಯಬಹುದು ಎಂಬ ಸಲಹೆ ಪಡೆದಿದ್ದರು. ಸಂಸತ್ತಿನಲ್ಲಿ ತಮಗೆ ನೀಡಿರುವ ಇ-ಮೇಲ್‌ ಐಡಿಯನ್ನು ಮಹುವಾ ನನ್ನೊಂದಿಗೆ ಹಂಚಿಕೆಕೊಂಡಿದ್ದರು. ಹಲವು ಪ್ರಶ್ನೆಗಳನ್ನು ರೂಪಿಸಿ ಸಂಸತ್ತಿನಲ್ಲಿ ಆ ಪ್ರಶ್ನೆಗಳನ್ನು ಕೇಳುವಂತೆ ಅವರನ್ನು ನಾನು ಕೋರುತ್ತಿದ್ದೆ. ನಂತರ ಅವರು ನನಗೆ ಸಂಸತ್ತಿನ ಲಾಗಿನ್‌, ಪಾಸ್‌ವರ್ಡ್‌ ಅನ್ನೇ ನೀಡಿದರು. ನಾನೇ ನೇರ ಪ್ರಶ್ನೆ ಕೇಳುತ್ತಿದ್ದ.ದುಬಾರಿ ವಸ್ತುಗಳ ಖರೀದಿ, ಪ್ರಯಾಣ ವೆಚ್ಚ, ಮನೆ ನವೀಕರಣಕ್ಕೆ ನೆರವು ಸೇರಿ ಹಲವು ಸಹಾಯ ಪಡೆದಿದ್ದರು.

ಯಾರು ಈ ಮೊಯಿತ್ರಾ? ಅಮೆರಿಕದಲ್ಲಿ ವ್ಯಾಸಂಗ ಮುಗಿಸಿ, ಅಲ್ಲೇ ಹೂಡಿಕೆ ಬ್ಯಾಂಕರ್ ಆಗಿದ್ದವರು. 2009ರಲ್ಲಿ ಉದ್ಯೋಗ ತೊರೆದು ಯುವ ಕಾಂಗ್ರೆಸ್‌ ಸೇರಿದರು. 2010ರಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಜಿಗಿದರು. 2016ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಆಯ್ಕೆಯಾದರು. -- ಯಾರು ಈ ದರ್ಶನ್‌? ಶತಕೋಟ್ಯಧೀಶ ರಿಯಲ್‌ ಎಸ್ಟೇಟ್‌ ಉದ್ಯಮಿ ನಿರಂಜನ್‌ ಹೀರಾನಂದಾನಿ ಅವರ ಪುತ್ರ. ಬೆಂಗಳೂರು, ಮುಂಬೈ, ಹೈದರಾಬಾದ್‌, ಚೆನ್ನೈನಲ್ಲೂ ಇವರ ಕಂಪನಿಯ ಯೋಜನೆಗಳು ಇವೆ. ಮಹುವಾ ಮೊಯಿತ್ರಾ ಮೂಲಕ ಸಂಸತ್ತಿನಲ್ಲಿ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ. --- ಏನಿದು ಪ್ರಶ್ನೆಗಾಗಿ ಲಂಚ ಹಗರಣ? ಅದಾನಿ ಗುಂಪು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಲು ಉದ್ಯಮಿ ದರ್ಶನ್ ಹೀರಾನಂದಾನಿ ಪರವಾಗಿ ಮಹುವಾ ಮೊಯಿತ್ರಾ ಸಂಸತ್ತಿನಲ್ಲಿ ‘ಪ್ರಶ್ನೆ ಕೇಳಲು ಲಂಚ ತೆಗೆದುಕೊಂಡರು’ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಕಳೆದ ವಾರ ಆರೋಪಿಸಿದ್ದರು. ಆದರೆ ಮೊಯಿತ್ರಾ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಯಾವುದೇ ತನಿಖೆಗೆ ಸಿದ್ಧ ಎಂದು ಹೇಳಿದ್ದಾರೆ. -- ನವದೆಹಲಿ: ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಳಿಬಂದಿರುವ ಪ್ರಶ್ನೆಗಾಗಿ ಲಂಚ ಕೇಳಿದ ಆರೋಪದ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಉದ್ಯಮ ಸಮೂಹವನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾ ಅವರ ಸಂಸತ್ತಿನ ಲಾಗಿನ್ ಐಡಿಯನ್ನು ಬಳಸಿಕೊಂಡಿದ್ದೆ. ಸ್ವತಃ ಮಹುವಾ ಅವರೇ ಲಾಗಿನ್‌ ಐಡಿಯ ಪಾಸ್‌ವರ್ಡ್‌ ನೀಡಿದ್ದರು ಎಂದು ಉದ್ಯಮಿ ದರ್ಶನ್‌ ಹೀರಾನಂದಾನಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೆ, ‘ದುಬಾರಿ ಬೆಲೆಯ ಐಷಾರಾಮಿ ವಸ್ತುಗಳು ಮತ್ತು ರಜಾದಿನದ ಮೋಜಿಗಾಗಿ ಮಹುವಾ ನನ್ನ ಬಳಿ ಸಾಕಷ್ಟು ಬೇಡಿಕೆ ಇಟ್ಟಿದ್ದರು. ಅವುಗಳಿಗಾಗಿ ನಾನು ಅವರಿಗೆ ಹಣ ನೀಡಿದ್ದೆ. ಅದಾನಿ ಕಂಪನಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರೊಂದಿಗೆ ಮಹುವಾ ಸಂವಹನ ನಡೆಸಿದ್ದರು’ ಎಂದಿದ್ದಾರೆ. ಈ ಸಂಬಂಧ ಮಹುವಾ ವಿರುದ್ಧ ವಿಚಾರಣೆ ನಡೆಸುತ್ತಿರುವ ಸಂಸತ್ತಿನ ನೈತಿಕ ಸಮಿತಿಗೆ ಹೀರಾನಂದಾನಿ ಅಫಿಡವಿಟ್‌ ಸಲ್ಲಿಸಿದ್ದಾರೆ. ಈ ಅಫಿಡವಿಟ್‌ ದೆಹಲಿ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಆದರೆ ಅಫಿಡವಿಟ್‌ನಲ್ಲಿನ ಅಂಶಗಳ ಸಾಚಾತನವನ್ನು ಮಹುವಾ ಪ್ರಶ್ನಿಸಿದ್ದು, ಪ್ರಧಾನಿ ಕಚೇರಿ ಒತ್ತಡದಿಂದ ಹೀರಾನಂದಾನಿ ಅಫಿಡವಿಟ್‌ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಅಫಿಡವಿಟ್‌ ಅನ್ನು ಸ್ವೀಕರಿಸಲಾಗಿದೆ ಎಂದಿರುವ ಸಂಸತ್ತಿನ ನೈತಿಕ ಸಮಿತಿ ಅಧ್ಯಕ್ಷ ವಿನೋದ್‌ ಸೋನ್‌ಕರ್‌, ‘ಅಗತ್ಯ ಬಿದ್ದರೆ ಮಹುವಾ ಅವರನ್ನು ಸ್ಥಾಯಿ ಸಮಿತಿ ವಿಚಾರಣೆಗೆ ಕರೆಯಲಿದೆ’ ಎಂದಿದ್ದಾರೆ. ಹೀರಾನಂದಾನಿ ಅಫಿಡವಿಟ್‌ನಲ್ಲೇನಿದೆ?: - ಮಹುವಾ ಮೊಯಿತ್ರಾ ಅವರು ರಾಷ್ಟ್ರಮಟ್ಟದಲ್ಲಿ ಬೇಗ ಹೆಸರು ಮಾಡಲು ಬಯಸಿದ್ದರು. ಪ್ರಧಾನಿ ಮೋದಿಯವರನ್ನು ವೈಯಕ್ತಿಕವಾಗಿ ಆಕ್ರಮಣ ಮಾಡುವುದರ ಮೂಲಕ ವಾಮಮಾರ್ಗದಲ್ಲಿ ಖ್ಯಾತಿ ಪಡೆಯಬಹುದು ಎಂದು ಆಕೆಯ ಸ್ನೇಹಿತರು ಮತ್ತು ಮಾರ್ಗದರ್ಶಕರು ಅವರಿಗೆ ಸಲಹೆ ನೀಡಿದ್ದರು. - ಮೋದಿ ಹಾಗೂ ಗೌತಮ್‌ ಅದಾನಿ ಸಮಕಾಲೀನರು. ಗುಜರಾತ್‌ ರಾಜ್ಯಕ್ಕೆ ಸೇರಿದವರು ಎಂದು ಗಮನಿಸಿದ ಮಹುವಾ, ಮೋದಿ ತಮ್ಮ ಸುಲಭ ಟಾರ್ಗೆಟ್‌ ಎಂದು ಭಾವಿಸಿದ್ದರು. ಅದಾನಿ ಗುಂಪನ್ನು ಗುರಿಯಾಗಿಸಿಕೊಂಡು ಸರ್ಕಾರವನ್ನು ಮುಜುಗರಕ್ಕೀಡು ಮಾಡುವ ಅಂಶಗಳನ್ನು ಹೊಂದಿರುವ ಕೆಲವು ಪ್ರಶ್ನೆಗಳನ್ನು ಅವರು ರಚಿಸಿದರು. - ಅವರು ಸಂಸತ್ತಿನ ಸದಸ್ಯರಾಗಿ ತಮ್ಮ ಇ-ಮೇಲ್ ಐಡಿಯನ್ನು ನನ್ನೊಂದಿಗೆ ಹಂಚಿಕೊಂಡರು. ಆಗ ನಾನು ಅವರಿಗೆ ಹಲವು ಪ್ರಶ್ನೆಗಳನ್ನು ರೂಪಿಸಿ ಸಂಸತ್ತಿನಲ್ಲಿ ಕೇಳುವಂತೆ ಕೋರುತ್ತಿದ್ದೆ. ನಂತರ ಅವರು ನನಗೆ ತಮ್ಮ ಸಂಸತ್ತಿನ ಲಾಗಿನ್ ಮತ್ತು ಪಾಸ್‌ವರ್ಡ್ ಅನ್ನು ಒದಗಿಸಿದರು. ಇದರಿಂದ ನಾನು ನೇರವಾಗಿ ಪ್ರಶ್ನೆಗಳನ್ನು ಪೋಸ್ಟ್ ಮಾಡಲು ಅವಕಾಶ ಕಲ್ಪಿಸಿದರು. - ಮೋದಿ- ಅದಾನಿ ವಿರುದ್ಧದ ಉದ್ದೇಶಿತ ದಾಳಿಯಲ್ಲಿ ಆಕೆಗೆ ಸಹಾಯ ಮಾಡುತ್ತಿದ್ದ ಇತರರೂ ಇದ್ದರು. ಅದಾನಿ ಕಂಪನಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಅವರು ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರೊಂದಿಗೆ ಸಂವಾದ ನಡೆಸಿದ್ದರು. - ಅವರು ಫೈನಾನ್ಷಿಯಲ್ ಟೈಮ್ಸ್, ನ್ಯೂಯಾರ್ಕ್ ಟೈಮ್ಸ್, ಬಿಬಿಸಿ ಮತ್ತು ಹಲವಾರು ಭಾರತೀಯ ಮಾಧ್ಯಮಗಳ ಅಂತಾರಾಷ್ಟ್ರೀಯ ಪತ್ರಕರ್ತರೊಂದಿಗೆ ಆಗಾಗ್ಗೆ ಸಂವಾದ ನಡೆಸುತ್ತಿದ್ದರು. - ಅದಾನಿ ಸಮೂಹದ ಮಾಜಿ ಉದ್ಯೋಗಿಗಳು ಎಂದು ಹೇಳಿಕೊಳ್ಳುತ್ತಿರುವ ಕೆಲವರಿಂದ ಸೇರಿದಂತೆ ಹಲವು ಮೂಲಗಳಿಂದ ಆಕೆ ದೃಢೀಕೃತವಲ್ಲದ ವಿವರಗಳನ್ನು ಪಡೆದಿದ್ದರು. ಕೆಲವು ಮಾಹಿತಿಯನ್ನು ನನ್ನೊಂದಿಗೆ ಹಂಚಿಕೊಂಡರು. ಅದರ ಆಧಾರದ ಮೇಲೆ ನಾನು ಅವರ ಸಂಸದೀಯ ಲಾಗಿನ್ ಅನ್ನು ಬಳಸಿಕೊಂಡು ಪ್ರಶ್ನೆಗಳನ್ನು ಪೋಸ್ಟ್ ಮಾಡುವುದನ್ನು ಮುಂದುವರಿಸಿದೆ. - ಆಕೆಯ ಮೂಲಕ ನನಗೆ ವಿರೋಧ ಪಕ್ಷದ ಆಡಳಿತವಿರುವ ಇತರ ರಾಜ್ಯಗಳಲ್ಲಿ ಬೆಂಬಲ ಸಿಗುತ್ತದೆ ಎಂದು ನಾನು ಭಾವಿಸಿದೆ. ಏಕೆಂದರೆ ಅವರು ರಾಹುಲ್‌ ಗಾಂಧಿ, ಶಶಿ ತರೂರ್ ಮತ್ತು ಪಿನಾಕಿ ಮಿಶ್ರಾ ಅವರಂತಹ ವಿರೋಧ ಪಕ್ಷದ ಇತರ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. - ಮಹುವಾ ನನ್ನಲ್ಲಿ ಪದೇ ಪದೇ ಬೇಡಿಕೆ ಇರಿಸಿ ನನ್ನಿಂದ ಹಲವಾರು ಅನುಕೂಲಗಳನ್ನು ಕೇಳುತ್ತಿದ್ದರು. ದುಬಾರಿ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು, ದೆಹಲಿಯಲ್ಲಿ ಅಧಿಕೃತವಾಗಿ ಮಂಜೂರು ಮಾಡಿದ ಬಂಗಲೆಯ ನವೀಕರಣಕ್ಕೆ ಸಹಾಯ ಮಾಡುವುದು, ಪ್ರಯಾಣ ವೆಚ್ಚಗಳು, ರಜಾದಿನಗಳ ಖರ್ಚುವೆಚ್ಚ ನೋಡಿಕೊಳ್ಳುವುದು- ಆಕೆಯ ಬೇಡಿಕೆ ಪಟ್ಟಿಯಲ್ಲಿ ಇತ್ತು. - ಅನೇಕ ಬಾರಿ, ಮಹುವಾ ನನ್ನಿಂದ ಅನಗತ್ಯ ಲಾಭವನ್ನು ಪಡೆಯುತ್ತಿದ್ದಾರೆ ಮತ್ತು ನನಗೆ ಇಷ್ಟವಿಲ್ಲದ ಕೆಲಸಗಳನ್ನು ನನ್ನಿಂದ ಮಾಡಿಸುತ್ತಿದ್ದಾರೆ ಎಂದು ನನಗೆ ಅನಿಸಿತು. ಆದರೆ ಮೇಲೆ ತಿಳಿಸಿದ ಕಾರಣಗಳಿಂದ ನನಗೆ ಆಕೆಯ ಮಾತು ಕೇಳದೆ ಬೇರೆ ಆಯ್ಕೆ ಇರಲಿಲ್ಲ. ---

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ