ಇರಾನ್ ಅಧ್ಯಕ್ಷರ ಎದುರು ಮತ್ತೆ ಮೋದಿ ಶಾಂತಿ ಮಂತ್ರ

KannadaprabhaNewsNetwork |  
Published : Sep 12, 2026, 02:00 AM IST
ಮೋದಿ | Kannada Prabha

ಸಾರಾಂಶ

ಬ್ರಿಕ್ಸ್‌ ಶೃಂಗದಲ್ಲಿ ಭಾಗವಹಿಸಲೆಂದು ಇದೇ ಮೊದಲ ಬಾರಿ ಭಾರತಕ್ಕೆ ಬಂದಿರುವ ಇರಾನ್‌ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯಾನ್‌ ಜತೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಸಭೆ ನಡೆಸಿದ್ದು, ಮಧ್ಯಪ್ರಾಚ್ಯದ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿ ಶಾಂತಿ ಮಂತ್ರ ಪಠಿಸಿದ್ದಾರೆ.

- ಮಧ್ಯಪ್ರಾಚ್ಯದ ಸ್ಥಿತಿಯ ಬಗ್ಗೆ ಚರ್ಚೆ

- ಕಡಲ ಭದ್ರತೆ, ಸುರಕ್ಷತೆ ಪ್ರಸ್ತಾಪ

ನವದೆಹಲಿ: ಬ್ರಿಕ್ಸ್‌ ಶೃಂಗದಲ್ಲಿ ಭಾಗವಹಿಸಲೆಂದು ಇದೇ ಮೊದಲ ಬಾರಿ ಭಾರತಕ್ಕೆ ಬಂದಿರುವ ಇರಾನ್‌ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯಾನ್‌ ಜತೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಸಭೆ ನಡೆಸಿದ್ದು, ಮಧ್ಯಪ್ರಾಚ್ಯದ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿ ಶಾಂತಿ ಮಂತ್ರ ಪಠಿಸಿದ್ದಾರೆ.

ಅಮೆರಿಕದೊಂದಿಗೆ ಯುದ್ಧದಲ್ಲಿ ತೊಡಗಿರುವ ರಾಷ್ಟ್ರದ ಅಧ್ಯಕ್ಷರೊಂದಿಗಿನ ಮಾತುಕತೆ ವೇಳೆ ಮೋದಿ ಅವರು ಕಡಲ ಭದ್ರತೆ, ನಾವಿಕರ ಸುರಕ್ಷತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಅತ್ತ ಈ ಭೇಟಿ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು ಹೇಳಿಕೆ ನೀಡಿದ್ದು, ‘ಭಾರತ ಮತ್ತು ಇರಾನ್ ನಾಗರಿಕತೆಯ ಸಂಬಂಧಗಳನ್ನು ಹೊಂದಿದ್ದು, ಸಾಂಸ್ಕೃತಿಕ ಹಾಗೂ ಜನರ ನಡುವಿನ ಬಾಂಧವ್ಯಗಳಿಂದ ಕೂಡಿದೆ. ಬ್ರಿಕ್ಸ್ ಪಾಲುದಾರರಾಗಿ, ಎರಡೂ ದೇಶಗಳು ಹಂಚಿಕೆಯ ಪ್ರಗತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಶ್ರಮಿಸುತ್ತಿವೆ’ ಎಂದರು.

==

ಸಮುದ್ರ ಸುರಕ್ಷತೆ: ಇರಾನ್‌, ಅಮೆರಿಕಕ್ಕೆ ಮೋದಿ ಆಗ್ರಹ

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಹೋರ್ಮುಜ್‌ ಜಲಸಂಧಿ ಬಂದ್ ಆಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ನೌಕಾಯಾನದ ಸ್ವಾತಂತ್ರ್ಯ ಮತ್ತು ನಾವಿಕರ ಸುರಕ್ಷತೆಯನ್ನು ಪುನಃ ಪ್ರತಿಪಾದಿಸಿದ್ದಾರೆ. ಈ ಮೂಲಕ ಕದನನಿರತ ಅಮೆರಿಕ ಮತ್ತು ಇರಾನ್‌ಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.ಶುಕ್ರವಾರ ಸಂಜೆ ಬ್ರಿಕ್ಸ್‌ ಬಿಸಿನೆಸ್‌ ಫೋರಂನಲ್ಲಿ ಮಾತನಾಡಿದ ಮೋದಿ, ‘ಸಮುದ್ರ ಮಾರ್ಗಗಳು ಮುಕ್ತವಾಗಿದ್ದಾಗ ಮತ್ತು ನಾವಿಕರು ಸುರಕ್ಷಿತವಾಗಿದ್ದಾಗ ಮಾತ್ರ ಜಾಗತಿಕ ವ್ಯಾಪಾರ ಮುನ್ನಡೆಯಲು ಸಾಧ್ಯ. ಅದಕ್ಕಾಗಿಯೇ ಭಾರತವು ನೌಕಾಯಾನ ಸ್ವಾತಂತ್ರ್ಯ ಮತ್ತು ನಾವಿಕರ ಸುರಕ್ಷತೆಯ ದೃಢ ಪ್ರತಿಪಾದಕವಾಗಿದೆ’ ಎಂದು ಹೇಳಿದರು.ಜತೆಗೆ, 10 ವ್ಯಾಪಾರ ಅಡೆತಡೆಗಳನ್ನು ನಿವಾರಿಸುವ ಕುರಿತು ವರದಿಯನ್ನು ಸಿದ್ಧಪಡಿಸಲು ಹಾಗೂ ಪ್ರತಿ ವರ್ಷ 100 ಬ್ರಿಕ್ಸ್ ಸ್ಟಾರ್ಟಪ್‌ಗಳು ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಲು ಬೆಂಬಲ ನೀಡುವಂತೆ ಅವರು ಬ್ರಿಕ್ಸ್ ವಾಣಿಜ್ಯ ಮಂಡಳಿಗೆ ಕರೆ ನೀಡಿದರು.

==

ಏಕಪಕ್ಷೀಯ ತೆರಿಗೆ ಹೇರಿಕೆಗೆ ಬ್ರಿಕ್ಸ್‌ ವಿತ್ತ ಸಚಿವರ ಸಭೆ ಖಂಡನೆ

- ಐಎಂಎಫ್, ವಿಶ್ವಬ್ಯಾಂಕ್‌ನಲ್ಲಿ ಅಭಿವೃದ್ಧಿಶೀಲ ದೇಶಗಳ ಪ್ರಾತಿನಿಧ್ಯಕ್ಕೆ ಬೇಡಿಕೆ

- ಸ್ಥಳೀಯ ಕರೆನ್ಸಿ ಬಳಕೆಗೆ ಬೆಂಬಲ

ಮುಂಬೈ: ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ನಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಬ್ರಿಕ್ಸ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್‌ನ ಗವರ್ನರ್‌ಗಳ ಸಭೆಯಲ್ಲಿ ಆಗ್ರಹಿಸಲಾಗಿದೆ. ಜತೆಗೆ, ಅಮೆರಿಕದ ಏಕಪಕ್ಷೀಯ ಸುಂಕಗಳು ಮತ್ತು ವ್ಯಾಪಾರ ಕ್ರಮಗಳನ್ನೂ ಪರೋಕ್ಷವಾಗಿ ಟೀಕಿಸಲಾಗಿದೆ.

ಸಭೆಯ ಬಳಿಕ ಜಂಟಿ ಹೇಳಿಕೆ ಬಿಡುಗಡೆಯಾಗಿದ್ದು, ಅದರಲ್ಲಿ ವ್ಯಾಪಾರ ಮತ್ತು ಹೂಡಿಕೆಗೆ ಸ್ಥಳೀಯ ಕರೆನ್ಸಿ ಬಳಕೆಯನ್ನು ಬೆಂಬಲಿಸಲಾಗಿದೆ ಹಾಗೂ ಗಡಿಯಾಚೆಗಿನ ಪಾವತಿ ವ್ಯವಸ್ಥೆಗಳ ಕುರಿತಾದ ಕೆಲಸವನ್ನು ಮುಂದುವರಿಸುವ ಬಗ್ಗೆ ಒಪ್ಪಂದವಾಗಿದೆ ಎನ್ನಲಾಗಿದೆ. ಈ ಮೂಲಕ, ಪರೋಕ್ಷವಾಗಿ ಡಾಲರ್‌ ಪ್ರಾಬಲ್ಯಕ್ಕೆ ಸಡ್ಡುಹೊಡೆಯಲು ತೀರ್ಮಾನಿಸಲಾಗಿದೆ.ಇದೇ ವೇಳೆ, ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲೆ ಅಮೆರಿಕ ಹೇರಿರುವ ಹೆಚ್ಚುವರಿ ಸುಂಕ ಮತ್ತು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದ ಕ್ರಮಗಳ ಬಗ್ಗೆಯೂ ಆ ರಾಷ್ಟ್ರದ ಹೆಸರನ್ನೆತ್ತದೆ ಕಳವಳ ವ್ಯಕ್ತಪಡಿಸಲಾಯಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪುಟಿನ್‌ಗೆ ರಷ್ಯನ್‌ ಅನುವಾದಿತ ತಮಿಳು ಕೃತಿ ತಿರುಕ್ಕುರಳ್‌ ನೀಡಿದ ಮೋದಿ
₹14,000 ಕೋಟಿ ಜಪ್ತಾದರೂ ಮಲ್ಯ ಮೇಲಿನ ಕೇಸು ರದ್ದಿಲ್ಲ: ಇ.ಡಿ.