ಪುರಿ : ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಬೆನ್ನಲ್ಲೇ ಈ ದೇಗುಲದ ಸಮೀಪದಲ್ಲಿರುವ ಗುಂಡೀಚಾ ದೇವಸ್ಥಾನದ ಬಳಿ ಭಾನುವಾರ ಕಾಲ್ತುಳಿತ ಸಂಭವಿಸಿದ್ದು, ಮೂವರು ಭಕ್ತರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.ಜಗನ್ನಾಥ ದೇಗುಲದಿಂದ 2- 3 ಕಿ.ಮೀ ದೂರದಲ್ಲಿರುವ ಗುಂಡಿಚಾ ದೇವಸ್ಥಾನದಲ್ಲಿ ರಥಯಾತ್ರೆಯನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ನೆರೆದಿದ್ದ ವೇಳೆಯಲ್ಲಿ ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ದುರಂತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನು 50 ಭಕ್ತರು ಗಾಯಗೊಂಡಿದ್ದು, ಆ ಪೈಕಿ 6 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.ಮುಂಜಾನೆ ದೇವಿಯ ವಿಗ್ರಹಗಳಿಗೆ ಮುಚ್ಚಿದ್ದ ಬಟ್ಟೆ ತೆಗೆಯುವ ಪಹುಡಾ ಆಚರಣೆ ಸಮಯದಲ್ಲಿ ಭಕ್ತರು ದೇವತೆಯನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರಿಂದ ದುರಂತ ನಡೆದಿದೆ ಎನ್ನಲಾಗಿದೆ.
ಗುಂಡೀಚಾ ದೇವಿಯನ್ನು ಜಗನ್ನಾಥ ದೇಗುಲದ ಚಿಕ್ಕಮ್ಮ ಎಂದು ಕರೆಯಲಾಗುತ್ತದೆ. ಮುಖ್ಯ ದೇವಾಲಯದಿಂದ ಸುಮಾರು 2.6 ಕಿ.ಮೀ ದೂರದಲ್ಲಿರುವ ದೇವಸ್ಥಾನವಿದು. ಅಲ್ಲಿ ಪ್ರತಿವರ್ಷ ಜಗನ್ನಾಥ, ಬಲಭದ್ರ, ಸುಭದ್ರಳ ವಿಗ್ರಹಗಳನ್ನು ತೇರಿನಲ್ಲಿ ರಥೋತ್ಸವದ ವೇಳೆ ತರಲಾಗುತ್ತದೆ. ಜು.5ರ ತನಕ ಇಲ್ಲಿಯೇ ರಥವಿರಲಿದೆ. ಇದನ್ನು ಕಣ್ತುಂಬಿಕೊಳ್ಳುವುದು ಭಕ್ತರ ಪಾಲಿಗೆ ಪವಿತ್ರ ಕ್ಷಣ. ಹೀಗಾಗಿ ಗುಂಡೀಚಾ ದೇವಸ್ಥಾನದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ದೇಗುಲದ ಮರದ ದಿಮ್ಮಿಗಳನ್ನು ಹೊತ್ತ ಎರಡು ಟ್ರಕ್ಗಳ ಜನಿನಿಬಿಡ ಪ್ರದೇಶದಲ್ಲಿ ಬರುತ್ತಿದ್ದಂತೆ ದೇವಿಯನ್ನು ನೋಡಲು ಜನ ಮುಗಿಬಿದ್ದಾಗ ಕಾಲ್ತುಳಿತ ಉಂಟಾಗಿದೆ,
ಸಿಎಂ ಕ್ಷಮೆಯಾಚನೆ:
ಘಟನೆಗೆ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಕ್ಷಮೆಯಾಚಿಸಿದ್ದಾರೆ. ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ನಾನು ಮತ್ತು ಸರ್ಕಾರ ಜಗನ್ನಾಥ ಭಕ್ತರ ಕ್ಷಮೆಯಾಚಿಸುತ್ತೇವೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ. ನಿರ್ಲಕ್ಷ್ಯ ಸಹಿಸುವುದಿಲ್ಲ. ಭದ್ರತಾ ಲೋಪ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರ 25 ಲಕ್ಷ ರು. ಪರಿಹಾರ ಘೋಷಿಸಿದೆ.
ಡೀಸಿ, ಎಸ್ಪಿ ಎತ್ತಂಗಡಿ:
ಸರ್ಕಾರ ಭದ್ರತಾ ಲೋಪದ ಕಾರಣಕ್ಕೆ ಜಿಲ್ಲಾಧಿಕಾರಿ ಸಿದ್ದಾರ್ಥ್ ಶಂಕರ್ ಎಸ್ ಸ್ವೈನ್ ಮತ್ತು ಜಿಲ್ಲಾ ವರಿಷ್ಠಾಧಿಕಾರಿ ವಿನೀತ್ ಅಗರ್ವಾಲ್ ಅವರನ್ನು ಎತ್ತಂಗಡಿ ಮಾಡಿದೆ. ಮತ್ತೊಂದೆಡೆ ಡಿಸಿಪಿ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.