ಪ್ರಧಾನಿ ಸ್ಥಾನಕ್ಕೆ ರಾಹುಲ್‌ ನನ್ನ ಆಯ್ಕೆ: ಖರ್ಗೆ

KannadaprabhaNewsNetwork |  
Published : Jun 01, 2024, 12:45 AM ISTUpdated : Jun 01, 2024, 05:27 AM IST
ಖರ್ಗೆ | Kannada Prabha

ಸಾರಾಂಶ

‘ಇಂಡಿಯಾ’ ಕೂಟದ ಪ್ರಧಾನಿ ಅಭ್ಯರ್ಥಿ ಯಾರು, ಕೂಟ ಗೆದ್ದರೆ ಯಾರು ಪ್ರಧಾನಿಯಾಗುತ್ತಾರೆ ಎಂಬೆಲ್ಲಾ ಪ್ರಶ್ನೆಗಳಿಗೂ ಚತುರ ಉತ್ತರ ನೀಡುತ್ತಾ ಬಂದಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿಲುವು ಇದೀಗ ದಿಢೀರ್‌ ಬದಲಾಗಿದೆ.

ನವದೆಹಲಿ: ‘ಇಂಡಿಯಾ’ ಕೂಟದ ಪ್ರಧಾನಿ ಅಭ್ಯರ್ಥಿ ಯಾರು, ಕೂಟ ಗೆದ್ದರೆ ಯಾರು ಪ್ರಧಾನಿಯಾಗುತ್ತಾರೆ ಎಂಬೆಲ್ಲಾ ಪ್ರಶ್ನೆಗಳಿಗೂ ಚತುರ ಉತ್ತರ ನೀಡುತ್ತಾ ಬಂದಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿಲುವು ಇದೀಗ ದಿಢೀರ್‌ ಬದಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಿ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಸ್ಥಾನಕ್ಕೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ಆಯ್ಕೆ ಎಂದು ಇದೇ ಮೊದಲ ಬಾರಿಗೆ ಅವರು ಬಹಿರಂಗವಾಗಿ ಸಾರಿದ್ದಾರೆ.

ಚುನಾವಣೆ ಪೂರ್ವದಲ್ಲಿ 2 ಭಾರತ್‌ ಜೋಡೋ ಯಾತ್ರೆ ಮಾಡಿರುವ ರಾಹುಲ್‌ ಗಾಂಧಿ, ಚುನಾವಣೆ ವೇಳೆ ವ್ಯಾಪಕವಾಗಿ ಪ್ರಚಾರ ಮಾಡಿದ್ದಾರೆ. ಮಿತ್ರ ಪಕ್ಷಗಳ ಜತೆ ವೇದಿಕೆ ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ದಾಳಿಗಳನ್ನು ನಡೆಸಿದ್ದಾರೆ. ಹೀಗಾಗಿ ಉನ್ನತ ಹುದ್ದೆಗೆ ಅವರೇ ಜನಪ್ರಿಯ ಆಯ್ಕೆ ಎಂದು ಎನ್‌ಡಿಟೀವಿಗೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಚುನಾವಣೆ ಮುಗಿದ ಬಳಿಕ ಇಂಡಿಯಾ ಕೂಟದ ಪಕ್ಷಗಳೆಲ್ಲವೂ ಸಭೆ ಸೇರಿ ಪ್ರಧಾನಿಯನ್ನು ಆಯ್ಕೆ ಮಾಡುತ್ತವೆ ಎಂದು ಮೊದಲಿನಿಂದಲೂ ಖರ್ಗೆ ಹೇಳಿಕೊಂಡು ಬಂದಿದ್ದರು. ಪ್ರಧಾನಿ ಹುದ್ದೆ ಕುರಿತ ಪ್ರಶ್ನೆಗಳಿಗೆಲ್ಲಾ ಖರ್ಗೆ ಅವರದ್ದು ಇದೇ ಉತ್ತರವಾಗಿತ್ತು. ಆದರೆ ಈಗ ಅವರು ರಾಹುಲ್‌ ಹೆಸರು ಹೇಳಿರುವುದು, ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ಸಿನ ಪರ ಹಕ್ಕು ಮಂಡಿಸುವ ಯತ್ನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಿಯಾಂಕಾ ಸ್ಪರ್ಧಿಸಬೇಕಿತ್ತು:

ಇದೇ ವೇಳೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿದ್ದ ತೆರವಾಗಿದ್ದ ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಬೇಕು ಎಂದು ನಾನು ಪ್ರಯತ್ನಿಸಿದೆ. ಆದರೆ, ಪ್ರಿಯಾಂಕಾ ಒಲವು ತೋರಲಿಲ್ಲ. ಬದಲಿಗೆ ರಾಹುಲ್‌ ಗಾಂಧಿ ಸ್ಪರ್ಧಿಸಿದರು. ಅವರ ಪರ ಪ್ರಿಯಾಂಕಾ ಪ್ರಚಾರ ಮಾಡಿದರು ಎಂದು ಖರ್ಗೆ ತಿಳಿಸಿದ್ದಾರೆ.

ಇಂಡಿಯಾ ಸೇರಲು ಎನ್‌ಡಿಎ ಪಕ್ಷಗಳು ಕ್ಯೂ: ಜೈರಾಂ

ಮತ್ತೊಂದೆಡೆ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ಇಂಡಿಯಾ ಕೂಟ ಸ್ಪಷ್ಟ ಹಾಗೂ ನಿರ್ಣಾಯಕ ಜನಾದೇಶ ಪಡೆಯಲಿದೆ. ಜೂ.4ರ ನಂತರ ಎನ್‌ಡಿಎಯಲ್ಲಿ ಗುರುತಿಸಿಕೊಂಡಿರುವ ಪಕ್ಷಗಳು ಇಂಡಿಯಾ ಸೇರಲು ಕ್ಯೂ ನಿಲ್ಲುತ್ತವೆ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!