ಕೇರಳ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಕೇಂದ್ರದ ಮಾಜಿ ಸಚಿವ, ಉದ್ಯಮಿ ರಾಜೀವ್‌ ಚಂದ್ರಶೇಖರ್‌ ಆಯ್ಕೆ

KannadaprabhaNewsNetwork |  
Published : Mar 25, 2025, 12:46 AM ISTUpdated : Mar 25, 2025, 04:26 AM IST
ರಾಜೀವ್ | Kannada Prabha

ಸಾರಾಂಶ

ಕೇರಳ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಕೇಂದ್ರದ ಮಾಜಿ ಸಚಿವ, ಉದ್ಯಮಿ ರಾಜೀವ್‌ ಚಂದ್ರಶೇಖರ್‌ ಆಯ್ಕೆಯಾಗಿದ್ದು, ಸೋಮವಾರ ಅಧಿಕಾರ ಸ್ವೀಕರಿಸಿದರು. ಕೇರಳದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಅಧಿಕಾರಕ್ಕೆ ತರುವುದೇ ತಮ್ಮ ಗುರಿ ಎಂದು ಇದೇ ವೇಳೆ ಘೋಷಿಸಿದರು.

ತಿರುವನಂತಪುರಂ: ಕೇರಳ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಕೇಂದ್ರದ ಮಾಜಿ ಸಚಿವ, ಉದ್ಯಮಿ ರಾಜೀವ್‌ ಚಂದ್ರಶೇಖರ್‌ ಆಯ್ಕೆಯಾಗಿದ್ದು, ಸೋಮವಾರ ಅಧಿಕಾರ ಸ್ವೀಕರಿಸಿದರು. ಕೇರಳದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಅಧಿಕಾರಕ್ಕೆ ತರುವುದೇ ತಮ್ಮ ಗುರಿ ಎಂದು ಇದೇ ವೇಳೆ ಘೋಷಿಸಿದರು.

ಇದಕ್ಕೂ ಮೊದಲು ತಿರುವನಂತಪುರಂನಲ್ಲಿ ನಡೆದ ಬಿಜೆಪಿ ರಾಜ್ಯ ಸಮಿತಿ ಸಭೆಯಲ್ಲಿ ಪಕ್ಷದ ಕೇಂದ್ರದ ವೀಕ್ಷಕ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಈ ಘೋಷಣೆ ಮಾಡಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀವ್‌ ಚಂದ್ರಶೇಖರ್‌ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚಂದ್ರಶೇಖರ್ ಅವರ ಆಯ್ಕೆ ಘೋಷಣೆ ವೇಳೆ ನಿರ್ಗಮಿತ ಅಧ್ಯಕ್ಷ ಕೆ.ಸುರೇಂದ್ರನ್‌, ರಾಜ್ಯ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಸೇರಿ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರು ಹಾಜರಿದ್ದರು. ಸ್ವತಃ ಸುರೇಂದ್ರನ್‌ ಅವರೇ ಪಕ್ಷದ ಧ್ವಜವನ್ನು ವೇದಿಕೆಯಲ್ಲಿ ರಾಜೀವ್‌ ಚಂದ್ರಶೇಖರ್‌ ಅವರಿಗೆ ಹಸ್ತಾಂತರಿಸಿದರು. 

ಅಧಿಕಾರಕ್ಕೆ ತರುವ ಶಪಥ:

ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ರಾಜೀವ್‌ ಚಂದ್ರಶೇಖರ್‌ ಅವರು, ರಾಜ್ಯದಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಗೆಲ್ಲಿಸುವ ಜವಾಬ್ದಾರಿ ನನಗೆ ವಹಿಸಲಾಗಿದೆ. ಈ ಗುರಿ ಸಾಧನೆಯ ಬಳಿಕವಷ್ಟೇ ನಾನು ವಿರಮಿಸುತ್ತೇನೆ ಎಂದು ಶಪಥ ಮಾಡಿದರು.

ಕೇರಳ ಬಿಜೆಪಿ ರಾಜ್ಯಾಧ್ಯಕ್ಷನ ಜವಾಬ್ದಾರಿ ವಹಿಸಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. ನನಗೆ ಈ ಹೊಣೆಗಾರಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಮತ್ತಿತರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.ಇದೇ ವೇಳೆ ಪಕ್ಷದ ಹಿಂದಿನ ಎಲ್ಲಾ ರಾಜ್ಯಾಧ್ಯಕ್ಷರು ಮತ್ತು ಪಕ್ಷಕ್ಕಾಗಿ ಜೀವವನ್ನೇ ತ್ಯಾಗ ಮಾಡಿದವರಿಗೆ ಇದೇ ವೇಳೆ ಕೃತಜ್ಞತೆ ಅರ್ಪಿಸಿದ ರಾಜೀವ್‌, ಅವರ ಬದ್ಧತೆ ನನ್ನ ಮುಂದಿನ ಪ್ರಯಾಣಕ್ಕೆ ದಾರಿದೀಪವಾಗಲಿದೆ. ಬಿಜೆಪಿ ಯಾವತ್ತಿಗೂ ಕಾರ್ಯಕರ್ತರ ಪಕ್ಷ, ಮುಂದೆಯೂ ಇದೇ ರೀತಿಯೇ ಇರಲಿದೆ ಎಂದರು.

ಸರ್ಕಾರ ವಿರುದ್ಧ ಕಿಡಿ:

ಕೇರಳದಲ್ಲಿ ಅಧಿಕಾರದಲ್ಲಿರುವ ಎಡಪಂಥೀಯ ಸರ್ಕಾರ ವಿರುದ್ಧ ರಾಜೀವ್‌ ಚಂದ್ರಶೇಖರ್‌ ಅವರು ಇದೇ ವೇಳೆ ತೀವ್ರ ಕಿಡಿಕಾರಿದರು.

ರಾಜ್ಯವು ಸಾಲದ ಮೇಲೆ ಎಷ್ಟು ದಿನ ಉಳಿಯಲು ಸಾಧ್ಯ? ರಾಜ್ಯವು ಯಾಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾಲವನ್ನು ಅವಲಂಬಿಸಿದೆ? ವಿದ್ಯಾರ್ಥಿಗಳು ಯಾಕೆ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬೇಕಾಗಿದೆ? ನಮ್ಮಲ್ಲಿ ಹೊಸ ಪ್ರಯತ್ನಗಳ ಕೊರತೆ ಯಾಕಿದೆ ಎಂದು ಸರಣಿ ಪ್ರಶ್ನೆಗಳನ್ನು ಎತ್ತಿದ ಅವರು, ಕೇರಳದ ಅಭಿವೃದ್ಧಿಯು ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದರು. ಬಿಜೆಪಿಯ ಗುರಿ ರಾಜ್ಯವನ್ನು ಬದಲಾವಣೆ ಮಾಡುವುದಾಗಿದೆ. ಹೂಡಿಕೆಗೆ ಆಕರ್ಷಕವಾಗುವಂಥ ಮತ್ತು ಉದ್ಯೋಗಸೃಷ್ಟಿಗೆ ಪೂರಕವಾದ ವಾತಾವರಣವನ್ನು ಕೇರಳದಲ್ಲಿ ಸೃಷ್ಟಿಸುವಂತಾಗಬೇಕು ಎಂದರು.

ಇದೇ ವೇಳೆ, ಇದೇ ವೇಳೆ ರಾಜೀವ್‌ ಚಂದ್ರಶೇಖರ್‌ ಅವರು ಪೂರ್ಣಕಾಲಿಕ ರಾಜಕಾರಣಿ ಅಲ್ಲ ಎಂಬ ಟೀಕೆಗಳನ್ನು ತಳ್ಳಿಹಾಕಿದ ನಿರ್ಗಮಿತ ಅಧ್ಯಕ್ಷ ಕೆ.ಸುರೇಂದ್ರನ್‌ ಅವರು, ಪಕ್ಷದ ರಾಜ್ಯಾಧ್ಯಕ್ಷರಾಗಿ ಅವರು ಯಶಸ್ಸು ಕಾಣಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

2 ದಶಕದ ರಾಜಕಾರಣ:

ರಾಜೀವ್‌ ಚಂದ್ರಶೇಖರ್‌ ಅವರು ಎರಡು ದಶಕಗಳಿಂದ ರಾಜಕಾರಣದಲ್ಲಿದ್ದಾರೆ. ಕೇಂದ್ರ ಎಲೆಕ್ಟ್ರಾನಿಕ್ಸ್‌, ಐಟಿ, ಸ್ಕಿಲ್‌ ಡೆವಲಪ್‌ಮೆಂಟ್‌ ಆ್ಯಂಡ್‌ ಎಂಟರ್‌ಪ್ರಿನ್ಯೂರ್‌ಶಿಪ್‌ ಮತ್ತು ಜಲಶಕ್ತಿ ರಾಜ್ಯ ಸಚಿವರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಕರ್ನಾಟಕದಿಂದ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು, ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಸದ್ಯ ಅವರು ಎನ್‌ಡಿಎ ಕೇರಳ ವಿಭಾಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್‌ನ ಹಿರಿಯ ಮುಖಂಡರ ಶಶಿ ತರೂರ್‌ ವಿರುದ್ಧ ಸ್ಪರ್ಧಿಸಿ ಕೇವಲ 16,077 ಮತಗಳಿಂದ ಸೋತಿದ್ದರು.ಗುಜರಾತ್‌ನ ಅಹಮದಾಬಾದ್‌ನಲ್ಲಿ ಹುಟ್ಟಿದ್ದರೂ ರಾಜೀವ್‌ ಚಂದ್ರಶೇಖರ್‌ ಅವರ ಮೂಲ ಕೇರಳವಾಗಿದೆ. ಅವರ ಪೋಷಕರು ಕೇರಳ ಮೂಲದವರಾಗಿದ್ದು, ಅವರ ತಂದೆ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

ನಾರಾಯಣಗುರುಗಳ ಸ್ಮರಣೆ:

ಈ ನಡುವೆ, ರಾಜೀವ್ ಚಂದ್ರಶೇಖರ್‌ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಮಾಜ ಸುಧಾರಕ, ಕೇರಳದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ್ದ ನಾರಾಯಣಗುರುಗಳ ಹೇಳಿಕೆಯನ್ನು ಸ್ಮರಿಸಿಕೊಂಡಿದ್ದಾರೆ. ''''ವಿದ್ಯೆಯಿಂದ ಪ್ರಬುದ್ಧನಾಗು, ಸಂಘಟನೆಯಿಂದ ಗಟ್ಟಿಯಾಗು, ಕಠಿಣ ಪರಿಶ್ರಮದಿಂದ ಸಂಪನ್ನನಾಗು'''' ಎಂದು ಪೋಸ್ಟ್‌ ಹಾಕಿರುವ ಅವರು, ಇದರ ಜತೆಗೆ ನಾರಾಯಣಗುರುಗಳ ಫೋಟೋವನ್ನೂ ಹಾಕಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ