ಮುಂಬೈ: ‘6 ವರ್ಷ ಯೆರವಾಡ ಜೈಲಿನಲ್ಲಿದ್ದರೂ ನನಗೆ ಮರಾಠಿ ಕಲಿಯಲು ಆಗಲಿಲ್ಲ’ ಎಂಬ ನಟ ಸಂಜಯ್ ದತ್ ಹೇಳಿಕೆ ಇದೀಗ ಮಹಾರಾಷ್ಟ್ರದಲ್ಲಿ ತೀವ್ರ ವಿವಾದ ಹುಟ್ಟುಹಾಕಿದೆ.
‘ದಹೀ ಹಂಡಿ’ ಕಾರ್ಯಕ್ರಮದಲ್ಲಿ ದತ್ ಪಾಲ್ಗೊಂಡಾಗ ಈ ಪ್ರಸಂಗ ನಡೆದಿದೆ. ಸಬೆಯಲ್ಲಿ ಶಿವಸೇನೆ ಶಿಂಧೆ ಬಣಕ್ಕೆ ಸೇರಿದ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಿಕ್ ಅವರು ದತ್ ಅವರಿಗೆ ಮರಾಠಿಯಲ್ಲಿ ಮಾತನಾಡುವಂತೆ ಮನವಿ ಮಾಡಿದರು. ಆಗ ದತ್ ಅವರು ‘ಯೆರವಾಡ ಜೈಲಿನಲ್ಲಿ 6 ವರ್ಷ ಕಳೆದರೂ (ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ) ನನಗೆ ಮರಾಠಿ ಕಲಿಯಲು ಸಾಧ್ಯವಾಗಲಿಲ್ಲ’ ಎಂದು ಜೋಕ್ ಮಾಡಿದರು. ದತ್ ಉತ್ತರ ಕೇಳಿ ಪಕ್ಕದಲ್ಲಿದ್ದ ಸರ್ನಾಯಿಕ್ ಕೂಡ ನಕ್ಕರು. ಇದಕ್ಕೆ ಇದೀಗ ಮಹಾಠಿ ಭಾಷಾ ಹೋರಾಟಗಾರರು, ರಾಜಕಾರಣಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರು ಸರ್ನಾಯಿಕ್ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು,‘ನಟರೊಬ್ಬರು ಮರಾಠಿ ಬರಲ್ಲ ಅಂದ್ರೆ, ಸಚಿವರು ನಗ್ತಾರೆ. ಆದರೆ, ಆಟೋರಿಕ್ಷಾ ಚಾಲಕರಂಥ ಜನಸಾಮಾನ್ಯರಿಗೆ ಮರಾಠಿ ಗೊತ್ತಿಲ್ಲದಿದ್ರೆ ಹಲ್ಲೆ, ಬೆದರಿಕೆ ಹಾಕಲಾಗುತ್ತದೆ. ಇದೆಂಥ ನ್ಯಾಯ?’ ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಅವರು, ಪೃಥ್ವಿರಾಜ್ ಚೌಹಾಣ್ ಪ್ರಯತ್ನದಿಂದಾಗಿ ಈಗ ಮರಾಠಿಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಜನ ಮಹಾರಾಷ್ಟ್ರಕ್ಕೆ ಕೆಲಸಕ್ಕೆಂದು ಬರುತ್ತಾರೆ. ಆದರೆ ಬಿಜೆಪಿ ಹಾಗೂ ಶಿಂದೆ ಬಣದ ಶಿವಸೇನೆ ಭಾಷೆ ವಿಚಾರದಲ್ಲಿ ರಾಜಕೀಯ ಮಾಡುತ್ತದೆ ಎಂದು ಆರೋಪಿಸಿದ್ದಾರೆ.