ನವದೆಹಲಿ: ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್ಬರ್ಗ್ ಸಂಸ್ಥೆ ಮಾಡಿದ್ದ ಅವ್ಯವಹಾರ ಆರೋಪದ ಕುರಿತ ತನಿಖೆಯನ್ನು ಸೆಬಿಯಿಂದ ಎಸ್ಟಿಐಗೆ ಅಥವಾ ಸಿಬಿಐಗೆ ವರ್ಗಾಯಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅಲ್ಲದೆ ಅದಾನಿ ಸಮೂಹದ ವಿರುದ್ಧದ ತನಿಖೆ ನಡೆಸಲು ‘ಸೆಬಿ’ಯೇ ಸಮರ್ಥವಾಗಿದೆ. 24 ಪ್ರಕರಣಗಳ ಪೈಕಿ ಬಾಕಿ ಇರುವ 2 ಪ್ರಕರಣಗಳ ತನಿಖೆಯನ್ನು ಇನ್ನು 3 ತಿಂಗಳಲ್ಲಿ ಸೆಬಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ. ಇದರೊಂದಿಗೆ ಗಂಭೀರ ಆರೋಪ ಎದುರಿಸುತ್ತಿರುವ ಅದಾನಿ ಸಮೂಹಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ.
ಕೋರ್ಟ್ ಹೇಳಿದ್ದೇನು?:
ಅದಾನಿ ಷೇರುಪೇಟೆ ಹಾಗೂ ಉದ್ಯಮದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಅಮೆರಿಕದ ಹಿಂಡನ್ಬರ್ಗ್ ಸಂಸ್ಥೆ ಆರೋಪಿಸಿತ್ತು. ಈ ಬಗ್ಗೆ ಷೇರುಪೇಟೆ ನಿಯಂತ್ರಣ ಪ್ರಾಧಿಕಾರವಾದ ‘ಸೆಬಿ’ ತನಿಖೆ ನಡೆಸುತ್ತಿದೆ. ಆದರೆ ಸೆಬಿ ಬದಲು ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಅಥವಾ ಸಿಬಿಐ ತನಿಖೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ಗೆ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಸೇರಿ ಅನೇಕರು ಜನರು ಅರ್ಜಿಗಳನ್ನು ಸಲ್ಲಿಸಿದ್ದರು.ಈ ಬಗ್ಗೆ ಆದೇಶ ಪ್ರಕಟಿಸಿದ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ ನೇತೃತ್ವದ ತ್ರಿಸದಸ್ಯ ಪೀಠ, ‘ಸೆಬಿಗೆ ಇರುವ ನೀತಿ ಅಧಿಕಾರ ವ್ಯಾಪ್ತಿಯಲ್ಲಿ ತಾನು ಮೂಗು ತೂರಿಸುವುದು ಸರಿಯಲ್ಲ. ಪ್ರಕರಣದ ಅಂಶಗಳು ತನಿಖೆಯನ್ನು ಸೆಬಿಯಿಂದ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸುವ ಅವಶ್ಯಕತೆಯನ್ನು ಪ್ರತಿಪಾದಿಸುತ್ತಿಲ್ಲ’ ಎಂದು ಹೇಳಿತು.
ಜೊತೆಗೆ ಪ್ರಕರಣದ ತನಿಖೆಯಲ್ಲಿ ಸೆಬಿ ನಿರ್ಲಕ್ಷ್ಯ ತೋರಿದೆ ಎಂಬುದಕ್ಕೆ ಅರ್ಜಿದಾರರು ಸಲ್ಲಿಸಿದ್ದ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ (ಒಸಿಸಿಆರ್ಪಿ)ಯನ್ನು ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು. ಆರೋಪಗಳ ಸಾಚಾತನವನ್ನು ಒರೆಗೆ ಹಚ್ಚದೇ ಮೂರನೇ ಸಂಘಟನೆಯೊಂದು ಸಿದ್ಧಪಡಿಸಿದ ವರದಿಯನ್ನು ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷ್ಯ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.‘ಹೀಗಾಗಿ ಪ್ರಕರಣದಲ್ಲಿ ಲಭ್ಯವಿರುವ ಅಂಶಗಳನ್ನು ಪರಿಗಣಿಸಿದಾಗ ತನಿಖೆಯನ್ನು ಸೆಬಿಯಿಂದ ಎಸ್ಐಟಿಗೆ ಅಥವಾ ಸಿಬಿಐಗೆ ವರ್ಗಾಯಿಸುವ ಅವಶ್ಯಕತೆ ಕಂಡುಬರುತ್ತಿಲ್ಲ. ಅರ್ಹ ಸಂಸ್ಥೆಯೊಂದು ಸೂಕ್ತ ರೀತಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವಾಗ ಅದನ್ನು ಎಸ್ಐಟಿಗೆ ವರ್ಗಾಯಿಸುವ ಅಧಿಕಾರವನ್ನು ನ್ಯಾಯಾಲಯ ಹೊಂದಿಲ್ಲ’ ಎಂದಿತು.ಜೊತೆಗೆ ಪ್ರಕರಣದ ತನಿಖೆ ನ್ಯಾಯಾಲಯ ನೇಮಿಸಿರುವ ಸಮಿತಿಯ ಕೆಲ ಸದಸ್ಯರು ಹಿತಾಸಕ್ತಿಯ ವೈರುದ್ಧ್ಯ ಹೊಂದಿದ್ದಾರೆ ಎಂಬ ಕೆಲ ಅರ್ಜಿದಾರರ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು.
ಅದಾನಿ ಸಮೂಹದ ವಿರುದ್ಧ ಎಸ್ಐಟಿ ಅಥವಾ ಸಿಬಿಐ ತನಿಖೆ ಆಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಅದಾನಿ ಕಂಪನಿಯ ಷೇರುಗಳು ಸರಾಸರಿ ಶೇ.10ರಷ್ಟು ಏರಿಕೆಯಾಗಿವೆ.
ಸತ್ಯಮೇವ ಜಯತೆ
- ಗೌತಮ್ ಅದಾನಿ, ಉದ್ಯಮಿ