ನವದೆಹಲಿ: ಸಂಚಾರ ನಿಯಮಗಳನ್ನು ಎಗ್ಗಿಲ್ಲದೆ ಉಲ್ಲಂಘಿಸುವವರ ಪತ್ತೆಗಾಗಿ ದೆಹಲಿ ಪೊಲೀಸರು ವಿನೂತನ ಅಭಿಯಾನ ಆರಂಭಿಸಿದ್ದಾರೆ. ನಿಯಮ ಉಲ್ಲಂಘನೆ ಫೋಟೋಗಳನ್ನು ಸೆರೆ ಹಿಡಿದು, ಮೊಬೈಲ್ ಆ್ಯಪ್ ಮೂಲಕ ಪೊಲೀಸರಿಗೆ ಕಳುಹಿಸಿದರೆ ಮಾಸಿಕ 50 ಸಾವಿರ ರು. ಬಹುಮಾನವನ್ನು ನೀಡುವುದಾಗಿ ಪ್ರಕಟಿಸಿದ್ದಾರೆ.
ದೆಹಲಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಅದಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ. ಈ ಹಿಂದೆ ದೆಹಲಿ ಪೊಲೀಸರು ನಿಯಮ ಉಲ್ಲಂಘನೆ ಮಾಹಿತಿಯನ್ನು ಜನರಿಂದ ಸ್ವೀಕರಿಸಲು ಟ್ರಾಫಿಕ್ ಸೆಂಟಿನೆಲ್ ಎಂಬ ಆ್ಯಪ್ ಬಳಸುತ್ತಿದ್ದರು. ಆ ಆ್ಯಪ್ ಹೆಸರನ್ನು ಟ್ರಾಫಿಕ್ ಪ್ರಹರಿ ಎಂದು ಬದಲಿಸಲು ಉಪರಾಜ್ಯಪಾಲರು ಸೂಚನೆ ನೀಡಿದ್ದರು. ಅದರಂತೆ ಸೆ.1ರಿಂದ ಬಹುಮಾನ ನೀಡುವ ಅಭಿಯಾನ ಆರಂಭವಾಗಿದೆ.
ನಾಗರಿಕರು ಟ್ರಾಫಿಕ್ ಪ್ರಹರಿ ಎಂಬ ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಫೋಟೋ ಸಮೇತ ನಿಖರ ಮಾಹಿತಿ ನೀಡಬೇಕಾಗುತ್ತದೆ. ಹೆಚ್ಚು ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ.