ಎನ್‌ಡಿಎ ಅವಧಿಯಲ್ಲಿ ರೈಲು ಅಪಘಾತ ಭಾರೀ ಇಳಿಕೆ

KannadaprabhaNewsNetwork |  
Published : Jun 19, 2024, 01:08 AM IST
ರೈಲು ದುರಂತ | Kannada Prabha

ಸಾರಾಂಶ

ಯುಪಿಎ ಅವಧಿಯಲ್ಲಿ ವರ್ಷಕ್ಕೆ 171, ಎನ್‌ಡಿಎ ಅವಧಿಯಲ್ಲಿ ವರ್ಷಕ್ಕೆ 68 ರೈಲು ಅಪಘಾತಗಳಾಗಿವೆ. ಬಂಗಾಳ ಅಪಘಾತಕ್ಕೆ ವಿಪಕ್ಷಗಳ ಟೀಕೆ ಬೆನ್ನಲ್ಲೇ ಅಂಕಿ ಅಂಶ ಬೆಳಕಿಗೆ ಬಂದಿದೆ.

ನವದೆಹಲಿ: 10 ಜನರನ್ನು ಬಲಿಪಡೆದ ಸೋಮವಾರದ ಕಾಂಚನಜುಂಗಾ ರೈಲು ಅಪಘಾತಕ್ಕೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಹೊಣೆ ಎಂದು ವಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ, ಯುಪಿಎ ಮತ್ತು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ನಡೆದ ರೈಲು ಅಪಘಾತಗಳ ಕುರಿತಾದ ಅಂಕಿ ಅಂಶಗಳು ಬಿಡುಗಡೆಯಾಗಿವೆ. ಅದರನ್ವಯ ಯುಪಿಎ ಅವಧಿಗೆ ಹೋಲಿಸಿದರೆ ಎನ್‌ಡಿಎ ಅವಧಿಯಲ್ಲಿ ರೈಲು ಅಪಘಾತ ಭಾರೀ ಇಳಿಕೆಯಾಗಿರುವುದು ಕಂಡುಬಂದಿದೆ.ಅಂಕಿ ಅಂಶಗಳ ಅನ್ವಯ ಯುಪಿಎ ಅಧಿಕಾರದಲ್ಲಿದ್ದ 2004-14ರ ಅವಧಿಯಲ್ಲಿ ವರ್ಷಕ್ಕೆ 171 ಅಪಘಾತ ನಡೆದಿದ್ದರೆ, ಎನ್‌ಡಿಎ ಆಡಳಿತದ ನಡೆಸಿದ 2014-24ರ ಅವಧಿಯಲ್ಲಿ ವರ್ಷಕ್ಕೆ ಕೇವಲ 68 ಅಪಘಾತ ದಾಖಲಾಗಿವೆ ಎಂದು ಸರ್ಕಾರದ ಮೂಲಗಳು ಅಂಕಿ-ಅಂಶ ಬಿಡುಗಡೆ ಮಾಡಿವೆ.ಅತಿ ವಿಸ್ತಾರವಾದ ರೈಲು ಜಾಲ ಹೊಂದಿರುವ ದೇಶಗಳ ಪೈಕಿ ಅಮೆರಿಕ, ರಷ್ಯಾ ಮತ್ತು ಚೀನಾ ನಂತರದ ಸ್ಥಾನದಲ್ಲಿರುವ ಭಾರತ, ಅಪಘಾತ ತಡೆಯುವ ನಿಟ್ಟಿನಲ್ಲಿ ಕಳೆದ ಕೆಲ ವರ್ಷಗಳಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ವ್ಯವಸ್ಥೆಯ ಆಧುನೀಕರಣ ಮತ್ತು ಕಾರ್ಯನಿರ್ವಹಣಾ ಕ್ಷಮತೆ ಮತ್ತು ಭದ್ರತೆ ಹೆಚ್ಚಿಸುವ ಅಂಶಗಳು ಕೂಡಾ ಸೇರಿವೆ.ಅಂಕಿ ಅಂಶಗಳು ಏನು ಹೇಳಿವೆ.

2000-01ರಲ್ಲಿ 473, 2001-02ರಲ್ಲಿ 415, 2002-03ರಲ್ಲಿ 351, 2003-04ರಲ್ಲಿ 325, 2004-05 ಮತ್ತು 2005-06ರಲ್ಲಿ 234, 2006-07ರಲ್ಲಿ 195. 2007-08ರಲ್ಲಿ 194, 2008-09ರಲ್ಲಿ 177, 2009-10ರಲ್ಲಿ 165, 2010-11ರಲ್ಲಿ 141, 2011-12ರಲ್ಲಿ 131, 2012-13ರಲ್ಲಿ 132,, 2013-14ರಲ್ಲಿ 118 ಅಪಘಾತ ನಡೆದಿದ್ದವು.ಇನ್ನು ಎನ್‌ಡಿಎ ಅಧಿಕಾರ ನಡೆಸಿದ 2014-15ರಲ್ಲಿ 135, 2015-16ರಲ್ಲಿ 107, 2016-17ರಲ್ಲಿ 104, 2017-18ರಲ್ಲಿ73, 2018-19ರಲ್ಲಿ 59, 2019-20ರಲ್ಲಿ 55, 2020-21ರಲ್ಲಿ 22, 2021-22ರಲ್ಲಿ 35, 2022-23ರಲ್ಲಿ 48 ಮತ್ತು 2023-24ರಲ್ಲಿ 40 ಅಪಘಾತ ಸಂಭವಿಸಿದ್ದವು.ಸುರಕ್ಷತೆಗೆ ಕ್ರಮ:

ಇನ್ನು 2004-14ರಲ್ಲಿ ಭದ್ರತೆ ಕುರಿತಾದ ಯೋಜನೆಗಳಿಗೆ 70273 ಕೋಟಿ ವೆಚ್ಚ ಮಾಡಿದ್ದರೆ 2014-24ರಲ್ಲಿ ಅದು 1.78 ಲಕ್ಷ ಕೋಟಿ ರು. ತಲುಪಿದೆ. ಹಳಿ ನವೀಕರಣ ವೆಚ್ಚವನ್ನು 47018 ಕೋಟಿ ರು.ಗಳಿಂದ 1.09 ಲಕ್ಷ ಕೋಟಿ ರು.ಗೆ ಹೆಚ್ಚಿಸಲಾಗಿದೆ.

ವೆಲ್ಡ್‌ ವೈಫಲ್ಯ 3699ರಿಂದ 481ಕ್ಕೆ ಇಳಿಸಲಾಗಿದೆ. ಅಂದರೆ ಶೇ.87ರಷ್ಟು ಇಳಿದಿದೆ.

ಲೆವೆಲ್‌ ಕ್ರಾಸಿಂಗ್‌ ನಿರ್ಮೂಲನೆಗೆ ಮಾಡುವ ಎಚ್ಚವನ್ನು 5726 ಕೋಟಿ ರು.ಗಳಿಂದ 36699 ಕೋಟಿ ರು.ಗೆ ಹೆಚ್ಚಿಸಲಾಗಿದೆ. ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ ಅನ್ನು ಸಂಪೂರ್ಣ ಶೂನ್ಯಕ್ಕೆ ತರಲಾಗಿದೆ. ಮೇಲುಸೇತುವೆಗೆ ಅನುದಾನ 4148 ಕೋಟಿ ರು.ಗಳಿಂದ 11945 ಕೋಟಿ ರು.ಗೆ ಹೆಚ್ಚಿಸಲಾಗಿದೆ.

ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ (ಸ್ಟೇಷನ್ಸ್‌) 837ರಿಂದ 2964ಕ್ಕೆ ಹೆಚ್ಚಳಗೊಂಡಿದೆ. ಎಲ್‌ಎಚ್‌ಬಿ ಕೋಚ್‌ಗಳ ನಿರ್ಮಾಣ 2337ರಿಂದ 36933ಕ್ಕೆ ಮುಟ್ಟಿಸಲಾಗಿದೆ.

ಬೋಗಿಗಳಲ್ಲಿ ಬೆಂಕಿ ಮತ್ತು ಹೊಗೆ ಪತ್ತೆ ವ್ಯವಸ್ಥೆಯನ್ನು ಶೂನ್ಯದಿಂದ 19271ಕ್ಕೆ ಮುಟ್ಟಿಸಲಾಗಿದೆ. ನಾನ್ ಎಸಿ ಕೋಚ್‌ಗಳಲ್ಲಿ ಶೂನ್ಯವಿದ್ದ ಫೈರ್‌ ಎಕ್ಸ್‌ಟಿಂಗ್ವಿಷರ್‌ ಪ್ರಮಾಣವನ್ನು ಶೂನ್ಯದಿಂದ 66840ಕ್ಕೆ ತಲುಪಿಸಲಾಗಿದೆ ಎಂದ ಅಂಕಿ ಅಂಶಗಳು ಹೇಳಿವೆ.

ರೈಲು ದುರಂತ: ಕೇಂದ್ರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

ಬಂಗಾಳದಲ್ಲಿ 10 ಜನರನ್ನು ಬಲಿಪಡೆದ ಕಾಂಚನಜುಂಗಾ ರೈಲು ದುರಂತದಲ್ಲಿ ಮಡಿದವರಿಗಾಗಿ ಹಾಗೂ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್‌ ಮಂಗಳವಾರ ದೆಹಲಿಯಲ್ಲಿ ಮೇಣದಬತ್ತಿ ಹೊತ್ತಿಸಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಅವರು, ‘ಕಳೆದ 10 ವರ್ಷಗಳಲ್ಲಿ 1,117 ರೈಲು ಅಪಘಾತಗಳು ಸಂಭವಿಸಿದೆ. ಇದರಿಂದಾಗಿ ಹಲವು ಜನರು ಅಸುನೀಗಿದ್ದಾರೆ’ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ರೈಲ್ವೆಯಲ್ಲಿ 1.52 ಲಕ್ಷ ಸುರಕ್ಷತಾ ಸಂಬಂಧಿ ಹುದ್ದೆ ಖಾಲಿ

ನವದೆಹಲಿ: ರೈಲ್ವೆಯಲ್ಲಿ ಲೋಕೋ ಪೈಲೆಟ್‌, ಗೇಟ್‌ ಮೆನ್‌, ಪಾಯಿಂಟ್‌ಮೆನ್‌ ಸೇರಿ 1.52 ಲಕ್ಷ ಸುರಕ್ಷತಾ ಸಂಬಂಧಿ ಹುದ್ದೆಗಳು ಖಾಲಿ ಇವೆ ಎಂದು ರೈಲ್ವೆ ಇಲಾಖೆ ಹೇಳಿದೆ. ಬಂಗಾಳ ರೈಲು ದುರಂತದ ಮರುದಿನವೇ ಈ ವಿಷಯ ಬಹಿರಂಗವಾಗಿದೆ.ಮಧ್ಯಪ್ರದೇಶದ ಚಂದ್ರಶೇಖರ್‌ ಗೌರ್‌ ಎಂಬುವರು ಸಲ್ಲಿಸದ್ದ ಆರ್‌ಟಿಐನಲ್ಲಿ ಈ ಮಾಹಿತಿ ಲಭಿಸಿದೆ. ‘ರೈಲ್ವೆ ಇಲಾಖೆಯಲ್ಲಿ 10 ಲಕ್ಷ ಮಂಜೂರಾದ ಸುರಕ್ಷತಾ ಹುದ್ದೆಗಳ ಪೈಕಿ 8.48 ಲಕ್ಷ ಭರ್ತಿಯಾಗಿವೆ. 1.52 ಲಕ್ಷ ಇನ್ನು ಖಾಲಿ ಉಳಿದಿವೆ. ಲೋಕೋಪೈಲೆಟ್‌ (ರೈಲು ಚಾಲಕ) ಹುದ್ದೆಗಳು 70,093 ಮಂಜೂರಾಗಿದ್ದು, ಇದರಲ್ಲಿ 14,429 ಇನ್ನು ಖಾಲಿ ಇವೆ. 4,337 ಸಹಾಯಕ ಚಾಲಕ ಹುದ್ದೆಗಳು ಖಾಲಿ ಇವೆ. ಇದರೊಂದಿಗೆ ಸಿಗ್ನಲ್‌ ಆಪರೇಟರ್‌, ಸ್ಟೇಷನ್‌ ಮಾಸ್ಟರ್‌, ಹಳಿ ನಿರ್ವಾಹಕ, ಟ್ರೈನ್‌ ಕಂಟ್ರೋಲರ್‌ ಸೇರಿದಂತೆ ಹಲವು ಹುದ್ದೆಗಳು ಭರ್ತಿಯಾಗದೇ ಉಳಿದಿದೆ’ ಎಂದು ರೈಲ್ವೆ ಇಲಾಖೆ ಹೇಳಿದೆ.

ರೈಲ್ವೆ ಸಚಿವ ವೈಷ್ಣವ್‌ ರಾಜೀನಾಮೆಗೆ ಖರ್ಗೆ ಆಗ್ರಹಬಿಜೆಪಿ ಸರ್ಕಾರ ರೈಲ್ವೆ ಇಲಾಖೆಯ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ನಾಶ ಮಾಡಿರುವುದಾಗಿ ಕಾಂಗ್ರೆಸ್‌ ಆರೋಪಿಸಿದ್ದು, ಸೋಮವಾರ ಸಂಭವಿಸಿದ ಕಾಂಚನಜುಂಗಾ ರೈಲು ದುರಂತದ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ರಾಜೀನಾಮೆ ನೀಡಬೇಕೆಂದು ಅಗ್ರಹಿಸಿದೆ.ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್‌ ಮಾಡಿ, ‘ರೈಲ್ವೆ ಇಲಾಖೆಯ ದತ್ತಾಂಶದಿಂದ ತಪ್ಪಿಸಿಕೊಳ್ಳುವ ಸಲುವಾಗಿ 2017ರಲ್ಲಿ ಪ್ರತ್ಯೇಕ ರೈಲ್ವೆ ಬಜೆಟ್‌ಗೆ ಬಿಜೆಪಿ ತಿಲಾಂಜಲಿ ಹಾಡಿದೆ. ಅಲ್ಲಿಂದ ಇಲ್ಲಿಯವರೆಗೆ ರೈಲ್ವೆ ದುರಂತದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ಎನ್‌ಸಿಆರ್‌ಬಿ ವರದಿ ತಿಳಿಸಿದೆ. ಒಡಿಶಾ ದುರಂತದ ಬಳಿಕವೂ ಕವಚ್‌ ವ್ಯವಸ್ಥೆ ದೇಶಾದ್ಯಂತ ಏಕೆ ಅಳವಡಿಸಿಲ್ಲ’ ಎಂದು ಪ್ರಶ್ನಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌ ಮಾತನಾಡಿ, ‘ರೈಲ್ವೆ ಸಚಿವರು ರೀಲ್ಸ್‌ನಲ್ಲಿ ತಮ್ಮ ಮುಖ ಸ್ಪಷ್ಟವಾಗಿ ಕಾಣಲೆಂದು ಹೆಲ್ಮೆಟ್‌ ಇಲ್ಲದೆ ಬೈಕ್‌ನಲ್ಲಿ ಅಪಘಾತ ಸ್ಥಳ ತಲುಪಿದ್ದಾರೆ’ ಎಂದು ಆರೋಪಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ