ತಿರುಪತಿ : ಪವಿತ್ರ ತಿರುಪತಿ ತಿರುಮಲ ದೇಗುಲದ ಆಡಳಿತದ ಮಂಡಳಿ ಟಿಟಿಡಿ, ಹಿಂದು ದೇವಾಲಯಗಳಿಗೆ ಧ್ವನಿವರ್ಧಕಗಳು, ದೇವರ ಪೂಜೆಗೆ ಬಳಸುವ ಛತ್ರಿಗಳು, ಧಾರ್ಮಿಕ ಬಟ್ಟೆಗಳು ಹಾಗೂ ದೇವರ ಮೂರ್ತಿಯನ್ನು ಸಬ್ಸಿಡಿ ದರದಲ್ಲಿ ನೀಡುವುದಾಗಿ ಘೋಷಿಸಿದೆ.
‘ಸನಾತನ ಹಿಂದು ಧರ್ಮ ಪ್ರಚಾರ ಮಾಡುವ ನಮ್ಮ ಬದ್ಧತೆಯ ಭಾಗವಾಗಿ ಹಿಂದು ದೇವಾಲಯಗಳಿಗೆ ಮೈಕ್ಸೆಟ್ಗಳು, ಛತ್ರಿಗಳು, ಶೇಷವಸ್ತ್ರ (ಧಾರ್ಮಿಕ ಬಟ್ಟೆಗಳು) ಪಂಚಲೋಹ ವಿಗ್ರಹಗಳನ್ನು ಸಬ್ಸಿಡಿ ಬೆಲೆಯಲ್ಲಿ ನೀಡಲಿದ್ದೇವೆ’ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.ಇದರ ಪ್ರಕಾರ, 5 ಅಡಿ ಎತ್ತರದವರೆಗಿನ ವೆಂಕಟೇಶ್ವರ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಕಲ್ಲಿನ ವಿಗ್ರಹಗಳು ದೇವಾಲಯಗಳಿಗೆ ಉಚಿತವಾಗಿರಲಿವೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಎಸ್ಸಿ, ಎಸ್ಟಿ ಫಲಾನುಭವಿಗಳಿಗೂ ದೇವರ ವಿಗ್ರಹ ಉಚಿತವಾಗಿ ಸಿಗಲಿದೆ. ಉಳಿದಂತೆ ಇತರೆ ವಿಗ್ರಹವನ್ನು ಶೇ.75ರಷ್ಟು ಸಬ್ಸಿಡಿಗೆ ನೀಡಲಾಗುತ್ತದೆ.
ಆದರೆ ಮಠ, ಟ್ರಸ್ಟ್, ಆಶ್ರಮಗಳಿಗೆ ಶೇ.50ರಷ್ಟು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಜಿದಾರರಿಗೆ ವಿಗ್ರಹ ಹೊರತಾಗಿ ಉಳಿದ ವಸ್ತುಗಳು ಶೇ.90 ಸಬ್ಸಿಡಿ ಲಭಿಸಲಿದೆ.
ಈ ಸೌಲಭ್ಯ ಪಡೆಯಲು ದೇವಾಲಯಗಳು ಸ್ಥಳೀಯ ತಹಶೀಲ್ದಾರ್, ಸಹಾಯಕ ಆಯುಕ್ತರು ಅಥವಾ ದತ್ತಿ ಇಲಾಖೆಯ ಮೂಲಕ ಶಿಫಾರಸು ಪತ್ರಗಳನ್ನು ಸಲ್ಲಿಸಬೇಕು ಎಂದು ಟಿಟಿಡಿ ಹೇಳಿದೆ.