- ಗ್ರಾಹಕರು ಹಣ ಪಾವತಿಸಿದ ಬಳಿಕ ಬಿಲ್ಲೇ ಡಿಲೀಟ್ । ವಂಚನೆಯಲ್ಲಿ ಕರ್ನಾಟಕ ನಂ.1!ಟಾಪ್- ಬಿಲ್ ವಿದ್ಯೆ!- ಹೈದರಾಬಾದ್ ಬಿರಿಯಾನಿ ಹೋಟೆಲ್ ಬಗ್ಗೆ ಶಂಕೆಯಿಂದ ತನಿಖೆ ನಡೆಸಿದಾಗ ಮೆಗಾ ಅಕ್ರಮ ಪತ್ತೆವಂಚನೆ ಹೇಗೆ?
- ಗ್ರಾಹಕರಿಗೆ ಬಿಲ್ ನೀಡಲು ರೆಸ್ಟೋರೆಂಟ್ಗಳು ಸಾಫ್ಟ್ವೇರ್ ಬಳಸುತ್ತವೆ. ದೇಶದ 1 ಲಕ್ಷ ರೆಸ್ಟೋರೆಂಟ್ಗಳಲ್ಲಿ ಒಂದೇ ಸಾಫ್ಟ್ವೇರ್ ಬಳಕೆಯಾಗುತ್ತಿದೆ- ಗ್ರಾಹಕರು ನಗದು, ಕಾರ್ಡ್, ಯುಪಿಐ ಮೂಲಕ ಹಣ ಪಾವತಿಸಿದಾಗ ಸಿಬ್ಬಂದಿ ಹಣ ದೋಚಬಾರದು ಎಂದು ಈ ಸಾಫ್ಟ್ವೇರ್ ಎಲ್ಲವನ್ನೂ ದಾಖಲು ಮಾಡಿಕೊಳ್ಳುತ್ತದೆ
- ಲೆಕ್ಕ ಸಿಕ್ಕ ಬಳಿಕ ಮಾಲೀಕರು ಕರಾಮತ್ತು ತೋರುತ್ತಾರೆ. ನಗದು ಮೂಲಕ ಸ್ವೀಕರಿಸಲಾದ ಬಿಲ್ಗಳನ್ನು ಈ ಸಾಫ್ಟ್ವೇರ್ ಬಳಸಿ ಡಿಲೀಟ್ ಮಾಡುತ್ತಾರೆ- ಇದಲ್ಲದೆ ಒಂದಷ್ಟು ದಿನ ಅಥವಾ ಒಂದಿಡೀ ತಿಂಗಳ ಬಿಲ್ಗಳನ್ನೇ ಅಳಿಸಿ ತಮಗೆ ಕಡಿಮೆ ಆದಾಯ ಬಂದಿದೆ ಎಂದು ತೋರಿಸಿಕೊಳ್ಳುತ್ತಾರೆ
--
ಎಐ ಬಳಸಿ ವಂಚನೆ ಪತ್ತೆ
ಅಕ್ರಮ ಬಯಲಿಗೆಳೆಯಲು 1.77 ಲಕ್ಷ ರೆಸ್ಟೋರೆಂಟ್ಗಳ 60 ಟೆರಾಬೈಟ್ನಷ್ಟು ದತ್ತಾಂಶ ಹೊಂದಿರುವ ಬಿಲ್ಗಳನ್ನು ತೆರಿಗೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈ ಕಾರ್ಯಕ್ಕೆ ಅವರು ಬಳಸಿದ್ದು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು. ಹೀಗಾಗಿ ತನಿಖೆ ಸುಲಭವಾಗಿದೆ.--
ಎಲ್ಲಿ ಎಷ್ಟು ವಂಚನೆ?ಕರ್ನಾಟಕ2000 ಕೋಟಿ ರು.ತೆಲಂಗಾಣ1500 ಕೋಟಿ ರು.ತಮಿಳುನಾಡು1200 ಕೋಟಿ ರು.--
ಹೈದರಾಬಾದ್: ಬಿಲ್ಲಿಂಗ್ ಸಾಫ್ಟ್ವೇರ್ ಬಳಸಿಕೊಂಡು ದೇಶಾದ್ಯಂತ ಇರುವ ರೆಸ್ಟೋರೆಂಟ್ಗಳು ಭರ್ಜರಿ 70000 ಕೋಟಿ ರು. ತೆರಿಗೆ ವಂಚನೆ ನಡೆಸಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ವಂಚನೆಯ ಪ್ರಮಾಣ ಮತ್ತು ವಿಧಾನ ಕಂಡು ಸ್ವತಃ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ದಂಗಾಗಿದ್ದಾರೆ.ಸ್ಥಳೀಯ ಬಿರಿಯಾನಿ ರೆಸ್ಟೋರೆಂಟ್ಗಳ ಲೆಕ್ಕಪತ್ರದ ಸಾಮಾನ್ಯ ತನಿಖೆಗಿಳಿದ ತೆರಿಗೆ ಇಲಾಖೆ ಅಧಿಕಾರಿಗಳಿಗೆ, ದೇಶಾದ್ಯಂತ ಇರುವ ರೆಸ್ಟೋರೆಂಟ್ಗಳು ಗೋಲ್ಮಾಲ್ ಎಸಗಿರುವ ವಿಷಯ ಬೆಳಕಿಗೆ ಬಂದಿದೆ. ಹೀಗೆ ತೆರಿಗೆ ವಂಚನೆಯಲ್ಲಿ ಕರ್ನಾಟಕದ ರೆಸ್ಟೋರೆಂಟ್ಗಳು ದೇಶದಲ್ಲೇ ಮೊದಲ ಸ್ಥಾನದಲ್ಲಿವೆ.
2019- 26ನೇ ಸಾಲಿನವರೆಗಿನ 1.77 ಲಕ್ಷ ರೆಸ್ಟೋರೆಂಟ್ಗಳ ಬಿಲ್ಗಳನ್ನು ಎಐ ತಂತ್ರಜ್ಞಾನ ಬಳಸಿ ಪರಿಶೀಲಿಸಿದಾಗ ಈ ಗೋಲ್ಮಾಲ್ ನಡೆದಿರುವುದು ಕಂಡುಬಂದಿದೆ. ಈ ರೆಸ್ಟೋರೆಂಟ್ಗಳ 2.43 ಲಕ್ಷ ಕೋಟಿ ರು. ಮೊತ್ತದ ಬಿಲ್ಗಳನ್ನು ಪರಿಶೀಲಿಸಿದ ವೇಳೆ 13317 ಕೋಟಿ ರು. ಮೌಲ್ಯದ ಬಿಲ್ಗಳನ್ನು ಅಳಿಸಿಹಾಕಿರುವುದು ಕಂಡುಬಂದಿದೆ.ವಂಚನೆ ಹೇಗೆ?:
ರೆಸ್ಟೋರೆಂಟ್ ಮಾಲೀಕರು ನಾನಾ ರೀತಿಯಲ್ಲಿ ತೆರಿಗೆ ವಂಚನೆ ನಡೆಸಿರುವುದು ಕಂಡುಬಂದಿದೆ. ಕೆಲವೊಂದು ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಗೆ ಬಿಲ್ ನೀಡಿದ ಬಳಿಕ ಅದು ಸಾಫ್ಟ್ವೇರ್ನ ದಾಖಲಾತಿಗಳಿಂದ ತಂತಾನೆ ಅಳಿಸಿಹೋಗುತ್ತಿತ್ತು. ಇನ್ನು ಕೆಲವು ಪ್ರಕರಣಗಳಲ್ಲಿ ಮಾಲೀಕರೇ ಉದ್ದೇಶಪೂರ್ವಕವಾಗಿ ಕೆಲ ಬಿಲ್ಗಳನ್ನು ರದ್ದುಪಡಿಸಿದ್ದು ಕಂಡುಬಂದಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ಒಂದಿಡೀ ದಿನ, ವಾರದ ಬಿಲ್ಗಳನ್ನೇ ಅಳಿಸಿಹಾಕಿದ್ದು ಕಂಡುಬಂದಿದೆ. ಮತ್ತೊಂದಿಷ್ಟು ಪ್ರಕರಣಗಳಲ್ಲಿ ಬಿಲ್ಗಳಲ್ಲಿ ಯಾವುದೇ ವ್ಯತ್ಯಾಸ ಮಾಡದೇ, ಆದಾಯ ತೆರಿಗೆ ಇಲಾಖೆಗೆ ದಾಖಲೆ ಸಲ್ಲಿಸುವಾಗ ಕಡಿಮೆ ಆದಾಯ ತೋರಿಸಿ ವಂಚನೆ ಎಸಗಲಾಗಿದೆ.ಸ್ವತಃ ಪರಿಶೀಲನೆ:
ಗೋಲ್ಮಾಲ್ ಖಚಿತಪಡಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಹೈದ್ರಾಬಾದ್ನ 40ಕ್ಕೂ ಹೆಚ್ಚು ರೆಸ್ಟೋರೆಂಟ್ಗೆ ಭೇಟಿ ನೀಡಿ ಆಹಾರ ಖರೀದಿ ಮಾಡಿದ್ದಾರೆ. ಆದರೆ ದಾಖಲೆ ಪರಿಶೀಲನೆ ವೇಳೆ ಅವರಿಗೆ ನೀಡಿದ ಬಿಲ್ಗೂ, ರೆಸ್ಟೋರೆಂಟ್ಗಳಲ್ಲಿ ದಾಖಲಾದ ದಾಖಲೆಗಳಿಗೂ ವ್ಯತ್ಯಾಸ ಕಂಡುಬಂದಿದೆ.ಕರ್ನಾಟಕ ನಂ.1:
ಬಿಲ್ಗಳನ್ನು ಅಳಿಸಿ ಹಾಕಿದ ಪ್ರಕರಣದಲ್ಲಿ ಕರ್ನಾಟಕದ ರೆಸ್ಟೋರೆಂಟ್ಗಳು ಮೊದಲ ಸ್ಥಾನದಲ್ಲಿವೆ. ರಾಜ್ಯದಲ್ಲಿ ಅಂದಾಜು 2000 ಕೋಟಿ ರು. ಮೊತ್ತದ ಬಿಲ್ಗಳನ್ನು ಅಳಿಸಿಹಾಕಲಾಗಿದೆ. ಉಳಿದಂತೆ ತೆಲಂಗಾಣ (1500 ಕೋಟಿ ರು.), ತಮಿಳುನಾಡು (1200 ಕೋಟಿ ರು.) ನಂತರದ ಸ್ಥಾನಗಳಲ್ಲಿವೆ.