ತಿರುವನಂತಪುರ: ಶಿಕ್ಷಣ ಕ್ಷೇತ್ರಕ್ಕೆ ಸೇರದ ಉದ್ಯಮಿಗಳನ್ನೂ ಕುಲಪತಿಗಳನ್ನಾಗಿ ನೇಮಿಸುವ ಅಧಿಕಾರ ನೀಡುವ ಯುಜಿಸಿಯ ನಿಯಂತ್ರಣ ನಿಯಮಾವಳಿ ವಿರುದ್ಧ ದಕ್ಷಿಣದ ರಾಜ್ಯಗಳು ಮತ್ತೊಮ್ಮೆ ಒಗ್ಗಟ್ಟಿನ ಬಲಪ್ರದರ್ಶನ ನಡೆಸಿದವು. ಬೆಂಗಳೂರಿನ ಬಳಿಕ ಇದೀಗ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕರ್ನಾಟಕ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಸೇರಿ ಅನೇಕರು ಈ ಕರಡು ನಿಯಮಾವಳಿ ತೀವ್ರ ಅಸಮಾಧಾನ ಹೊರಹಾಕಿದರು.
ಯುಜಿಸಿಯ ಹೊಸ ಕರಡು ನಿಯಮಗಳಲ್ಲಿ ವಿಶ್ವವಿದ್ಯಾಲಯಗಳಿಗೆ ವಿಸಿಗಳು ಮತ್ತು ಸಹ ಪ್ರಾಧ್ಯಾಪಕರ ನೇಮಕದಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಮಿತಿಮೀರಿದ ಕ್ರಮ ಎಂದು ಕಿಡಿಕಾರಿದರು.
ಹೊಸ ಕರಡು ನಿಯಮದಲ್ಲಿ ವಿಸಿಗಳನ್ನು ನೇಮಿಸುವ ಅಧಿಕಾರ ರಾಜ್ಯಪಾಲರಿಗೆ ನೀಡಲಾಗಿದೆ. ರಾಜ್ಯಪಾಲರು ಕೇಂದ್ರದಿಂದ ನಿಯೋಜಿಸಲ್ಪಡುತ್ತಾರೆ. ಹೀಗಾಗಿ ಕುಲಪತಿಗಳ ನೇಮಕದಲ್ಲಿ ರಾಜಕೀಯ ಪ್ರವೇಶಿಸುವ ಸಾಧ್ಯತೆ ಇದೆ. ಇದು ದೇಶದ ಉನ್ನತ ಶಿಕ್ಷಣಕ್ಕೆ ಹಾನಿಕಾರಕ ಎಂದರು.ರಾಜ್ಯಪಾಲರ ಮಿತಿಮೀರಿದ ಅಧಿಕಾರ ಪ್ರಯೋಗಕ್ಕೆ ಈಗಾಗಲೇ ಪ್ರತಿಪಕ್ಷಗಳು ಆಡಳಿತವಿರುವ ರಾಜ್ಯಗಳಾದ ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಸಾಕ್ಷಿಯಾಗಿವೆ. ರಾಜ್ಯಪಾಲರು ಕುಲಾಧಿಪತಿಗಳಾಗಿ ಈಗಾಗಲೇ ವಿವಿಗಳಲ್ಲಿ ರಾಜಕೀಯವಾಗಿ ಒಳನುಸುಳಿದ್ದಾರೆ. ಈ ಕರಡು ನಿಯಮಾವಳಿಯಿಂದಾಗಿ ಆ ಮಧ್ಯಪ್ರವೇಶ ಮತ್ತಷ್ಟು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು, ತೆಲಂಗಾಣದ ಡಿಸಿಎಂ ಮಲ್ಲು ಭಟ್ಟಿ ವಿಕ್ಕಮಾರ್ಕ ಮತ್ತಿತರರು ಹಾಜರಿದ್ದರು.