- ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ
ರಾಷ್ಟ್ರ ಕವಿ ಕುವೆಂಪು ಅವರು ಪ್ರಕೃತಿಯಲ್ಲೇ ದೇವರನ್ನು ಕಂಡಿದ್ದರು ಎಂದು ಸೀಗುವಾನಿ ಶಾಲೆ ಶಿಕ್ಷಕಿ ಸವಿನಾ ಕಾಂತರಾಜ್ ಹೇಳಿದರು.
ಸೋಮವಾರ ಸಂಜೆ ರೋಟರಿ ಹಾಲ್ನಲ್ಲಿ ಶ್ರೀಮತಿ ರಾಮಕ್ಕಮ್ಮ ಆರ್.ಪೆರುಮಯ್ಯ ಬಾಗೂರು ಇವರ ನೆನಪಿಗಾಗಿ ಎಂ.ಪಿ. ಚಕ್ರಪಾಣಿ ಕುವೆಂಪು ಅವರ ಸಾಹಿತ್ಯದಲ್ಲಿ ಮಲೆನಾಡಿನ ನೈಜ ಚಿತ್ರಣ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ಕುವೆಂಪು ಅವರು ಈ ದೇಶಕ್ಕೆ ನಾಡಗೀತೆ, ರೈತಗೀತೆ ನೀಡಿದ ಶ್ರೇಷ್ಠ ಕವಿಯಾಗಿದ್ದಾರೆ. ಮಲೆಗಳಲ್ಲಿ ಮಲೆ ಮಗಳು, ಕಾನೂರು ಹೆಗ್ಗಡತಿ ಎಂಬ ಪುಸ್ತಕದಲ್ಲಿ ಮಲೆನಾಡಿನ ಸಂಪೂರ್ಣ ಚಿತ್ರಣವನ್ನು ಬಿತ್ತರಿಸಿದ್ದಾರೆ. ಹೆಚ್ಚು ಜ್ಞಾನನ್ನು ಪಡೆಯಬೇಕಾದರೆ ಅವರ ಎಲ್ಲಾ ಕೃತಿಗಳನ್ನು ಓದಬೇಕು. ಅವರ ನೆನಪಿನ ದೋಣಿ ಅವರ ಜೀವನ ಚಿತ್ರಣವನ್ನು ತೋರಿಸುತ್ತದೆ. ಕುವೆಂಪು ಸಾಹಿತ್ಯ ರಚನೆ ಮಾಡುವ ಮತ್ತೊಬ್ಬ ಮಲೆನಾಡ ಕವಿ ಯಾರೂ ಇಲ್ಲ. ನಮ್ಮ ಮಲೆನಾಡಿನ ಕವಿಯಾಗಿ ರಾಷ್ಟ್ರಕವಿಯಾಗಿ ಬೆಳೆದವರು. ಇವರಿಗೆ ಮಲೆನಾಡಿನ ಬಗ್ಗೆ ಅಪಾರ ಪ್ರೇಮ. ಮಲೆಗಳಲ್ಲಿ ಮದುಮಗಳು ಪುಸ್ತಕದಲ್ಲಿ ಒಕ್ಕಲಿಗ ಸಮುದಾಯದ ಚಿತ್ರಣವನ್ನು ಅತ್ಯಂತ ಅರ್ಥರ್ಪೂಣವಾಗಿ ಬರೆದಿದ್ದಾರೆ ಎಂದರು.ಕಸಾಪ ಜಿಲ್ಲಾ ಸಾಂಸ್ಕೃತಿಕ ರಾಯಭಾರಿ ಕಣಿವೆ ವಿನಯ್ ಮಾತನಾಡಿ, ಕುವೆಂಪು ಈಗಿನ ರಾಜಕೀಯ ವ್ಯವಸ್ಥೆ ಬಗ್ಗೆ ಅಂದೇ ಬರೆದಿದ್ದಾರೆ. ಕಾನೂರು ಹೆಗ್ಗಡತಿ ಕಾದಂಬರಿ ಸಿನಿಮಾವಾಗಿದೆ. ವಿಶ್ವ ಮಾನವ ಸಂದೇಶವನ್ನು ವಿಶ್ವಕ್ಕೇ ನೀಡಿದ ಮೇರು ಕವಿಯಾಗಿದ್ದಾರೆ. ಆಡಂಬರ ಮದುವೆ, ಸಮಾರಂಭಗಳನ್ನು ವಿರೋಧಿಸಿದವರು. ತಮ್ಮ ಮಗನ ಮದುವೆಯನ್ನು ಅತ್ಯಂತ ಅರಳವಾಗಿ ಮಂತ್ರ ಮಾಂಗಲ್ಯ ಮೂಲಕ ಮಾಡಿದವರು. ಮಂತ್ರ ಮಾಂಗಲ್ಯಕ್ಕೆ ಆದ್ಯತೆ ನೀಡಿದವರು ಎಂದರು.
ದತ್ತಿ ಉಪನ್ಯಾಸದ ದಾನಿಗಳಾದ ಎಂ.ಪಿ.ಚಕ್ರಪಾಣಿ ಮಾತನಾಡಿ, 2004 ರಲ್ಲಿ ನಾನು ವೃತ್ತಿಯಿಂದ ನಿವೃತ್ತಿ ಹೊಂದಿದ್ದು 2005 ರಿಂದ ಕಸಾಪದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ನನ್ನ ತಂದೆ ತಾಯಿಯ ನೆನಪಿಗಾಗಿ ಪ್ರತೀ ವರ್ಷ ದತ್ತಿ ಉಪನ್ಯಾಸ ನೀಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ, ಕಸಬಾ ಹೋಬಳಿ ಘಟಕದ ಅಧ್ಯಕ್ಷೆ ಜುಬೇದಾ, ಕಸಾಪ ಪ್ರಧಾನ ಕಾರ್ಯದರ್ಶಿ ಮಂಜಪ್ಪ, ವರ್ತಕರ ಸಂಘದ ಅಧ್ಯಕ್ಷ ಎಸ್.ಎಸ್.ಜಗದೀಶ್, ಪಿ.ಪ್ರಭಾಕರ್, ಪ್ರಕೃತಿ, ನಾಗರಾಜ್, ಅಮಿತಾ ಇದ್ದರು.