ಮತ ಹಾಕಲು ತವರಿಗೆ ವಲಸೆ ಕಾರ್ಮಿಕರು

KannadaprabhaNewsNetwork |  
Published : Apr 05, 2026, 01:30 AM IST
4ಎಚ್ಎಸ್ಎನ್9 : ಚುನಾವಣೆ ಹಿನ್ನಲೆಯಲ್ಲಿ   ಅಸ್ಸಾಮಿನಿಂದ ವಲಸೆ ಬಂದಿದ್ದ ಕಾರ್ಮಿಕರು    ತಮ್ಮ ತವರೂರಿಗೆ ಹಿಂದಿರುಗುತ್ತಿರುವುದು. | Kannada Prabha

ಸಾರಾಂಶ

ಕಳೆದ ಹತ್ತಾರು ವರ್ಷಗಳ ಹಿಂದೆ ಮಲೆನಾಡಿನ ಬೇಲೂರು ಸಕಲೇಶಪುರ ಭಾಗಗಳಲ್ಲಿರುವ ಕಾಫಿ ತೋಟ ಹಾಗೂ ಇತರೆ ಕೂಲಿ ಕೆಲಸಗಳಿಗಾಗಿ ಅಸ್ಸಾಂ, ಇತರೆ ಹೊರರಾಜ್ಯದಿಂದ ಸಾವಿರಾರು ಮಂದಿ ಕಾರ್ಮಿಕರು ವಲಸೆ ಬಂದಿದ್ದರು. ಸ್ಥಳೀಯ ಹಾಗೂ ಕಾಫಿ ಬೆಳೆಗಾರರು ಹೆಚ್ಚು ಅವಲಂಬಿತರಾದರು. ಇದರ ಜೊತೆಗೆ ತಮ್ಮ ಪರಿಶ್ರಮ ಕೆಲಸದ ಮೂಲಕ ಅತಿ ಬೇಗನೆ ಬೆಳಕಿಗೆ ಬಂದರು. ಸ್ಥಳೀಯ ಕಾರ್ಮಿಕರು ತೋಟ ಹಾಗೂ ಇತರೆ ಕೆಲಸ ಮಾಡಲು ಹಿಂದೆಮುಂದೆ ನೋಡುತ್ತಿದ್ದ ಸಂದರ್ಭದಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರ ಆಗಮನದಿಂದ ರೈತರು ಹಾಗೂ ಬೆಳಗಾರರ ಚಿತ್ರಣ ಸಂಪೂರ್ಣ ಬದಲಾವಣೆಯಾಯಿತು.

ಕನ್ನಡಪ್ರಭ ವಾರ್ತೆ ಬೇಲೂರು

ಅಸ್ಸಾಂನಿಂದ ವಲಸೆ ಬಂದಿದ್ದ ಕಾರ್ಮಿಕರು ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ತವರೂರಿಗೆ ಹಿಂದಿರುಗಿದ್ದು ಇದರಿಂದ ಕಾಫಿ ತೋಟ, ಕಟ್ಟಡ ನಿರ್ಮಾಣ, ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರು ಸಿಗದೇ ಬೆಳೆಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಹೊರ ರಾಜ್ಯದ ಕಾರ್ಮಿಕರ ಅವಲಂಬನೆ.

ಕಳೆದ ಹತ್ತಾರು ವರ್ಷಗಳ ಹಿಂದೆ ಮಲೆನಾಡಿನ ಬೇಲೂರು ಸಕಲೇಶಪುರ ಭಾಗಗಳಲ್ಲಿರುವ ಕಾಫಿ ತೋಟ ಹಾಗೂ ಇತರೆ ಕೂಲಿ ಕೆಲಸಗಳಿಗಾಗಿ ಅಸ್ಸಾಂ, ಇತರೆ ಹೊರರಾಜ್ಯದಿಂದ ಸಾವಿರಾರು ಮಂದಿ ಕಾರ್ಮಿಕರು ವಲಸೆ ಬಂದಿದ್ದರು. ಸ್ಥಳೀಯ ಹಾಗೂ ಕಾಫಿ ಬೆಳೆಗಾರರು ಹೆಚ್ಚು ಅವಲಂಬಿತರಾದರು. ಇದರ ಜೊತೆಗೆ ತಮ್ಮ ಪರಿಶ್ರಮ ಕೆಲಸದ ಮೂಲಕ ಅತಿ ಬೇಗನೆ ಬೆಳಕಿಗೆ ಬಂದರು. ಸ್ಥಳೀಯ ಕಾರ್ಮಿಕರು ತೋಟ ಹಾಗೂ ಇತರೆ ಕೆಲಸ ಮಾಡಲು ಹಿಂದೆಮುಂದೆ ನೋಡುತ್ತಿದ್ದ ಸಂದರ್ಭದಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರ ಆಗಮನದಿಂದ ರೈತರು ಹಾಗೂ ಬೆಳಗಾರರ ಚಿತ್ರಣ ಸಂಪೂರ್ಣ ಬದಲಾವಣೆಯಾಯಿತು.ವಲಸೆ ಕಾರ್ಮಿಕರ ರಾಜ್ಯಭಾರ :

ಅಸ್ಸಾಂ ಹಾಗೂ ಇತರೆ ಹೊರರಾಜ್ಯಗಳಿಂದ ಕೆಲಸ ಬಂದ ಕಾರ್ಮಿಕರು ಸ್ಥಳೀಯರಿಗಿಂತ ಹೆಚ್ಚಾಗಿ ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಂಡರು. ಕಾಫಿ ತೋಟಗಳಲ್ಲಿ 20 ಮಂದಿ ಮಾಡುವ ಕೆಲಸವನ್ನು 10 ಜನ ಮಾಡತೊಡಗಿದರು. ತೋಟದ ಕಾಫಿ ಹಣ್ಣು ಕುಯ್ಲುವಿನಿಂದ ಹಿಡಿದು ಮರಗಸಿ, ಸ್ಪಿಂಕ್ಲರ್, ಔಷಧಿ ಸಿಂಪಡಣೆ, ಗೊಬ್ಬರ ಹಾಕುವುದು, ಗಿಡಕಸಿ ಸೇರಿದಂತೆ ಇತರೆ ಎಲ್ಲಾ ತೋಟ, ಗದ್ದೆಗಳ ಕೆಲಸ ಕಾರ್ಯಗಳು ಸಕಾಲದಲ್ಲಿ ಸ್ಥಳೀಯ ಕಾರ್ಮಿಕರ ಸಹಕಾರ ಇಲ್ಲದೆ ನಡೆಯುತ್ತಿತ್ತು. 6,000ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಈ ಭಾಗದಲ್ಲಿ ಇದ್ದಾರೆ ಎಂಬ ಮಾಹಿತಿ ಇದ್ದು ಇನ್ನು ಕೆಲವೇ ವರ್ಷಗಳಲ್ಲಿ ಅವರದೇ ಆದ ವಲಸೆ ಕಾರ್ಮಿಕರ ಬಡಾವಣೆ ನಿರ್ಮಾಣ ಆಗಲಿದೆ ಎಂದು ಜಿಪಂ ಮಾಜಿ ಸದಸ್ಯ ಅಮಿತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸುತ್ತಾರೆ.ಅಸ್ಸಾಂ ಚುನಾವಣೆ ಎಫೆಕ್ಟ್ :

ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಬೇಲೂರು ತಾಲೂಕಿನ ಮಲೆನಾಡು ಭಾಗದ ಕಾಫಿ ಬೆಳೆಗಾರರಿಗೆ ಬಿಸಿ ಮುಟ್ಟಿಸುತ್ತಿದೆ. ಅಸ್ಸಾಂ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು ಕೂಲಿ ಕಾರ್ಮಿಕರು ಇಲ್ಲದೆ ಬೆಳೆಗಾರರು ಪರದಾಡುತ್ತಿದ್ದಾರೆ. ವಲಸಿಗ ಕಾರ್ಮಿಕರು ಚುನಾವಣೆ ಹಿನ್ನಲೆ ತವರೂರಿಗೆ ವಾಪಸ್ಸಾಗುತ್ತಿರುವ ಪರಿಣಾಮ ಸಕಾಲದಲ್ಲಿ ಆಗಬೇಕಾದ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಹೊರರಾಜ್ಯ ಅಸ್ಸಾಂನಲ್ಲಿ ಇದೆ ತಿಂಗಳು ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆದಿದ್ದು ಪಟ್ಟಣದಲ್ಲಿ ನೆಲೆಸಿರುವ ಸಾವಿರಾರು ವಲಸೆ ಕಾರ್ಮಿಕರು ಪ್ರಯಾಣ ಬೆಳೆಸಿದ್ದಾರೆ. ವ್ಯಾಪಾರ ವಹಿವಾಟು ಕುಸಿತ :

ಅಸ್ಸಾಂ ಕಾರ್ಮಿಕರು ಹಿಂತಿರುಗಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವಾರದ ಸಂತೆ, ಬೇಕರಿ, ದಿನಸಿ ಮತ್ತಿತರ ವಹಿವಾಟು ಕುಂಠಿತಗೊಂಡಿದೆ. ಪಟ್ಟಣದಲ್ಲಿ ಮುಂಜಾನೆ ಹಾಗೂ ಸಂಜೆಯಾಗುತ್ತಿದ್ದಂತೆ ಅಂಗಡಿ ಮುಂಗಟ್ಟು ಹಾಗೂ ರಸ್ತೆಯುದ್ದಕ್ಕೂ ಕಾಣಸಿಗುತ್ತಿದ್ದ ವಲಸಿಗ ಕಾರ್ಮಿಕರು ಇಲ್ಲದೆ ರಸ್ತೆ ಬಿಕೋ ಎನ್ನುತ್ತಿದೆ. ಇದರಿಂದ ಸಂತೆ ವ್ಯಾಪಾರ, ದಿನಸಿ, ಹಾರ್ಡ್‌ವೇರ್‌, ಬೇಕರಿ ಸೇರಿದಂತೆ ಇತರೆ ವ್ಯಾಪಾರ ದಿನನಿತ್ಯದ ವ್ಯವಹಾರದಲ್ಲಿ ಏರುಪೇರು ಉಂಟಾಗಿದೆ.

=====*ಹೇಳಿಕೆ 1

ಹಲವಾರು ವರ್ಷಗಳಿಂದ ತೋಟದ ಕಾಫಿ ಹಣ್ಣು ಕುಯ್ಲುವಿನಿಂದ ಹಿಡಿದು ಮರಗಸಿ, ಸ್ಪಿಂಕ್ಲರ್, ಔಷಧಿ ಸಿಂಪಡಣೆ, ಗೊಬ್ಬರ ಹಾಕುವುದು, ಗಿಡಕಸಿ ಸೇರಿದಂತೆ ಇತರೆ ಎಲ್ಲಾ ತೋಟ, ಗದ್ದೆಗಳ ಕೆಲಸ ಕಾರ್ಯಗಳು ಸಕಾಲದಲ್ಲಿ ಕಾರ್ಮಿಕರ ಕೊರತೆ ಇಲ್ಲದೆ ನಡೆಯುತ್ತಿತ್ತು. ಆದರೆ ಇದೀಗ ವಲಸಿಗ ಕಾರ್ಮಿಕರು ಚುನಾವಣೆ ಹಿನ್ನಲೆ ತನ್ನೂರಿಗೆ ವಾಪಸ್ಸಾಗುತ್ತಿರುವ ಪರಿಣಾಮ ಸಕಾಲದಲ್ಲಿ ಆಗಬೇಕಾದ ಕೆಲಸ ಕಾರ್ಯಗಳು ವಿಳಂಬವಾಗುತ್ತದೆ, ಅಲ್ಲದೆ ಪಟ್ಟಣದಲ್ಲಿ ಸ್ಥಳೀಯ ಕೂಲಿ ಕಾರ್ಮಿಕರ ಕೊರತೆ ಕೆಲ ವರ್ಷಗಳ ಹಿಂದೆಯೇ ಉಂಟಾಗಿತ್ತು.

ಶಾರಿಭ್ ಫರ್ಹಾನ್, ಅಧ್ಯಕ್ಷರು, ಕರ್ನಾಟಕ ಕಾಫಿ ಬೆಳೆಗಾರರ ಸಂಘ ಅರೇಹಳ್ಳಿ

* ಹೇಳಿಕೆ2

ಅಸ್ಸಾಂ ಚುನಾವಣೆ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಮತ ಹಾಕಲು ತಮ್ಮ ರಾಜ್ಯಕ್ಕೆ ಹಿಂತಿರುಗಿದ್ದಾರೆ. ಈಗ ಕಾಫಿ ಹೂ ಬಿಡುವ ಸಮಯ, ಹಾಗೂ ಮಳೆಯ ಅಭಾವದಿಂದ ಸ್ಪಿಂಕ್ಲರ್ ಮೂಲಕ ನೀರು ಹಾಯಿಸಲು ಕಾರ್ಮಿಕರ ಅವಶ್ಯಕತೆ ಇದೆ. ಈಗಾಗಲೇ ಶೇ. 80ರಷ್ಟು ವಲಸೆ ಕಾರ್ಮಿಕರು ತೆರಳಿರುವುದರಿಂದ ತೋಟದ ಕೆಲಸಗಳಿಗೆ ಅನಾನುಕೂಲವಾಗುತ್ತಿದೆ. - ಲೋಕೇಶ್ವರ್‌, ಕಾಫಿ ಬೆಳೆಗಾರರು ತೊಳಲು ಎಸ್ಟೇಟ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯನಾಥಪುರ ನಾಲಾ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ
ಬೇಲೂರಲ್ಲಿ ಹನ್ನೆರಡನೇ ದಿನದ ಸಿಂಹಾರೋಹಣೋತ್ಸವ