ಬಿಜೆಪಿಯಲ್ಲಿ ಟಿಕೆಟ್‌ಗಾಗಿ ನಡೆದಿದೆ ಭಾರೀ ಕಸರತ್ತು

KannadaprabhaNewsNetwork | Published : Feb 23, 2024 1:52 AM

ಸಾರಾಂಶ

ತಾವು ಅಭ್ಯರ್ಥಿಯಾಗುವುದಕ್ಕಿಂತ ಮತ್ತೊಬ್ಬರಿಗೆ ಟಿಕೆಟ್‌ ತಪ್ಪಿಸುವ ಕೆಲಸದಲ್ಲಿಯೇ ನಾಯಕರು ಕಸರತ್ತು ನಡೆಸುತ್ತಿದ್ದಾರೆ.

ಸಿ.ಎ.ಇಟ್ನಾಳಮಠ

ಕನ್ನಡಪ್ರಭ ವಾರ್ತೆ ಅಥಣಿ

ಮತ್ತೊಂದು ಮಹಾ ಚುನಾವಣೆ ಶೀಘ್ರ ಎದುರಾಗಲಿದೆ. ಈ ನಿಟ್ಟಿನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರ ಗರಿಗೆದರಿವೆ. ಲೋಕಸಭಾ ಮಹಾಕದನವೇ ನಡೆಯುವುದರಿಂದ ರಾಷ್ಟ್ರೀಯ ಪಕ್ಷಗಳ ನಡುವೆಯೇ ಇಲ್ಲಿ ಹೆಚ್ಚು ಪೈಪೋಟಿ ನಡೆಯುತ್ತದೆ. ಹೀಗಾಗಿ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ನಡುವೆ ಅಭ್ಯರ್ಥಿತನಕ್ಕಾಗಿ ಹೋರಾಟ ಕೂಡ ತೆರೆಮರೆಯಲ್ಲಿ ತೀವ್ರಗೊಂಡಿದೆ.ತಾವು ಅಭ್ಯರ್ಥಿಯಾಗುವುದಕ್ಕಿಂತ ಮತ್ತೊಬ್ಬರಿಗೆ ಟಿಕೆಟ್‌ ತಪ್ಪಿಸುವ ಕೆಲಸದಲ್ಲಿಯೇ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಅದರಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿಯೂ ಇಂತಹದ್ದೇ ಸನ್ನಿವೇಶ ಕಂಡುಬರುತ್ತಿದೆ. ಕಾರಣ ಉಭಯ ಪಕ್ಷಗಳಲ್ಲಿ ಟಿಕೆಟ್‌ ಪಡೆಯುವವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ತಮಗೇ ಟಿಕೆಟ್‌ ಪಡೆದುಕೊಳ್ಳಲು ಹೈಕಮಾಂಡ್‌ನತ್ತ ಚಿತ್ತ ಹರಿಸಿರುವ ನಾಯಕರು, ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ.ಕ್ಷೇತ್ರದ ಚಿತ್ರಣ ಬದಲು:

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಅಥಣಿ, ಕಾಗವಾಡ, ಕುಡಚಿ, ಚಿಕ್ಕೋಡಿ ಹಾಗೂ ಯಮಕನಮರಡಿಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದರೆ, ಹುಕ್ಕೇರಿ, ರಾಯಬಾಗ ಹಾಗೂ ನಿಪ್ಪಾಣಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. 2019ರ ಚುನಾವಣೆ ವೇಳೆ 6 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಾಗಿದ್ದರು. ಈಗ ಕೇವಲ ಮೂವರು ಶಾಸಕರಿದ್ದಾರೆ. ಹೀಗಾಗಿ ಇಲ್ಲಿ ಬಿಜೆಪಿಗೆ ಕಠಿಣದ ಹಾದಿ ಇದೆ. ಕಳೆದ ಬಾರಿ ಬಿಜೆಪಿಗೆ ಹೆಚ್ಚು ವರವಾಗುವ ಅಂಶಗಳು ಇದ್ದುದ್ದರಿಂದ ಹಾಲಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಅವರ ಗೆಲವು ನಿರಾಯಾಸವಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ.

2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಹಾಲಿ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಅಂದು ಬಿಜೆಪಿಯಲ್ಲಿದ್ದರು. ಅವರು ಈಗ ಕಾಂಗ್ರೆಸ್ ಶಾಸಕರು. ಈ ಉಭಯ ನಾಯಕರು ಅಣ್ಣಾಸಾಬೇಬ ಜೊಲ್ಲೆ ಅವರ ಗೆಲುವಿಗೆ ಮೆಟ್ಟಿಲಾಗಿದ್ದು ಮಾತ್ರ ಸುಳ್ಳಲ್ಲ. ಆದರೆ, ಈ ಬಾರಿ ಸವದಿ ಮತ್ತು ಕಾಗೆ ಅವರು ಕಾಂಗ್ರೆಸ್‌ನಲ್ಲಿ ಇರುವುದರಿಂದ ಸಹಜವಾಗಿ ಅವರ ಪ್ರಭಾವ ಬೀರದೆ ಇರದು. ಹೀಗಾಗಿ ಬಿಜೆಪಿ ಅಭ್ಯರ್ಥಿ ಯಾರೇ ಇದ್ದರೂ ಕಳೆದ ಬಾರಿಯಷ್ಟು ಸುಲಭವಾಗಿಲ್ಲ ಹಾದಿ. ಇದು ಬಿಜೆಪಿ ಹೈಕಮಾಂಡ್‌ಗೂ ತಿಳಿದ ವಿಚಾರವೇ ಸರಿ.

ಟಿಕೆಟ್‌ಗಾಗಿ ತ್ರಿಕೋನ ಸ್ಪರ್ಧೆ:

ಚಿಕ್ಕೋಡಿ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಟಿಕೆಟ್ ನೀಡದಂತೆ ಹೈಕಮಾಂಡ್‌ ಮೇಲೆ ಕೆಲವು ನಾಯಕರು ಒತ್ತಡ ಹಾಕುತ್ತಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಆದರೆ, ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ಸಂಸದ ಜೊಲ್ಲೆ ಅವರು ಅತಿಯಾದ ಆತ್ಮ ವಿಶ್ವಾಸದಿಂದ ಕಳೆದ ನಾಲ್ಕು ತಿಂಗಳಿಂದ ಚಿಕ್ಕೋಡಿ ಕ್ಷೇತ್ರದಲ್ಲಿ ಅನೇಕ ಸಾಂಸ್ಕೃತಿಕ, ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದಾರೆ. ಇದರ ನಡುವೆ ಕಳೆದ ಬಾರಿ ಟಿಕೆಟ್‌ವಂಚಿತ ಮಾಜಿ ಸಂಸದ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ಶತಾಯ ಗತಾಯ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಜತೆಗೆ ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕೂಡ ಕಂಡುಬಂದು ತಮಗೇ ಟಿಕೆಟ್‌ ನೀಡುವಂತೆ ಒತ್ತಡ ಕೂಡ ಹಾಕಿದ್ದಾರೆ. ಅಲ್ಲದೆ, ಕ್ಷೇತ್ರದಲ್ಲಿ ಸಂಚರಿಸಿ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಅವರ ಆಪ್ತರು ಮಾತನಾಡಿಕೊಳ್ಳುತ್ತಿದ್ದಾರೆ.ಕೋರೆ ಪುತ್ರ ಕೂಡ ಮುಂಚೂಣಿಗೆ:

ವೀರಶೈವ ಲಿಂಗಾಯತ ಸಮಾಜದ ಪ್ರಬಲ ನಾಯಕ ಡಾ. ಪ್ರಭಾಕರ ಕೋರೆ ಅವರ ಪುತ್ರ ಅಮಿತ ಕೋರೆಗೆ ಟಿಕೆಟ್‌ ನೀಡುವಂತೆ ಅವರ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ.ಕೋರೆ ಅವರು ಕೂಡ ಈಗಾಗಲೇ ಪುತ್ರನಿಗೆ ಟಿಕೆಟ್‌ ಕೊಡಿಸುವ ಸಂಬಂಧ ರಾಷ್ಟ್ರೀಯ ನಾಯಕರನ್ನು ಕೂಡ ಕಂಡುಬಂದಿದ್ದಾರೆ ಎನ್ನಲಾಗಿದೆ. ಇದರ ನಡುವೆ ಬಿಜೆಪಿ ರಾಷ್ಟ್ರೀಯ ನಾಯಕರು ಗುಪ್ತ ಸರ್ವೆ ನಡೆಸಿದ್ದು, ಯಾರಿಗೆ ಟಿಕೆಟ್‌ ನೀಡಿದರೆ ಸೂಕ್ತ ಎಂಬ ಅಂಶವನ್ನು ಕೂಡ ಈಗಾಗಲೇ ಕಂಡುಕೊಂಡಿದ್ದಾರೆ. ಅವರಿಗೆ ಟಿಕೆಟ್‌ ನೀಡಲಿದ್ದು, ಯಾರಿಗೆ ಈ ಟಿಕೆಟ್‌ ಸಿಗುತ್ತದೆ ಎಂಬುವುದೇ ಈಗ ತೀವ್ರ ಕುತೂಹಲ ಮೂಡಿಸಿದೆ. ಕೈ ಟಿಕೆಟ್ ಯಾರಿಗೆ? :

ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ಟಿಕೆಟ್‌ಗಾಗಿ ಪೈಪೋಟಿ ಕಂಡುಬಂದಿಲ್ಲ. ಇದರ ನಡುವೆ ಲೋಕಸಭಾ ಸ್ಥಾನಕ್ಕೆ ಸಿಎಂ, ಹೈಕಮಾಂಡ್‌ ಹೇಳಿದರೂ ಸ್ಪರ್ಧೆ ಮಾಡುವುದಿಲ್ಲ ಎಂದು ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದ್ದರು. ಆದರೆ, ಈಗ ಹೈಕಮಾಂಡ್‌ ಗೆಲ್ಲುವ ಕುದುರೆಯಲ್ಲಿ ಪ್ರಕಾಶ ಹುಕ್ಕೇರಿ ಇರುವುದೇ ವಿಶೇಷ. ಹೀಗಾಗಿ ಅವರಿಗೇ ಟಿಕೆಟ್‌ ಸಿಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಅವರಿಗೆ ಟಿಕೆಟ್‌ ಕೊಡಿಸುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕಸರತ್ತು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.----------ಕೋಟ್..2024ರ ಲೋಕಸಭೆ ಚುನಾವಣೆಗೆ ಚಿಕ್ಕೋಡಿ ಕ್ಷೇತ್ರದಿಂದ ನಾನು ಬಿಜೆಪಿ ಟಕೆಟ್‌ ಆಕಾಂಕ್ಷಿ. ನನಗೆ ಟಿಕೆಟ್‌ ಸಿಗುತ್ತದೆ ಎಂಬ ವಿಶ್ವಾಸ ಇದೆ. ಒಂದು ವೇಳೆ ಸಿಗದಿದ್ದರೆ ನಮ್ಮ ರಾಜಕೀಯ ಹಿರಿಯರ ಮತ್ತು ಅಭಿಮಾನಿ ಬಳಗದ ಅಭಿಪ್ರಾಯ ಕೇಳಿ ಮುಂದಿನ ನಿರ್ಣಯ ಮಾಡುತ್ತೇನೆ.

- ರಮೇಶ್ ಕತ್ತಿ, ಮಾಜಿ ಸಂಸದ

Share this article