ಶಿವಾನಂದ.ಪಿ.ಮಹಾಬಲಶಟ್ಟಿ
ರಸ್ತೆ ಪಕ್ಕದಲ್ಲೇ ಇರುವ ಸೇತುವೆ, ಕಾಲುವೆ, ಹಳ್ಳಗಳಿಗೆ ತಡೆಗೋಡೆಗಳು ಇಲ್ಲದೇ ಇರುವ ಕಾರಣಕ್ಕೆ ವಾಹನಗಳು ಬಿದ್ದು ಅಪಾರ ಸಾವು ನೋವುಗಳು ಸಂಭವಿಸಿದ ನಿದರ್ಶನಗಳು ನಮ್ಮ ಕಣ್ಮುಂದಿವೆ. ಇಷ್ಟಾಗಿಯೂ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಬಸ್ ನಿಲ್ದಾಣದ ಪಕ್ಕವಿರುವ ಮುಧೋಳ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಹಳ್ಳದ ಸೇತುವೆಗೆ ತಡೆಗೋಡೆ ಇಲ್ಲದಿರುವ ಕಾರಣಕ್ಕೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಹೌದು, ಕಳೆದ ನಾಲ್ಕು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯ ಹತ್ತಿರದ ಕಾಲುವೆ ತಡೆಗೋಡೆ ಇಲ್ಲದ ಕಾರಣಕ್ಕೆ ಬಸ್ವೊಂದು ಕಾಲುವೆಗೆ ಉರುಳಿ ಬಿದ್ದು 30ಕ್ಕೂ ಅಧಿಕ ಜನರು ಜಲಸಮಾಧಿಯಾಗಿರುವ ನಿದರ್ಶನಗಳು ಅದೇಷ್ಟೋ ಇವೆ. ಇಂತಹ ಘಟನೆಗಳು ನಡೆದಾಗೊಮ್ಮೆ ರಾಜ್ಯ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡು ಪರಿಹಾರ ನೀಡಿ ಸುಮ್ಮನಾಗಿ ಬಿಡುತ್ತದೆ.ಆದರೆ, ಇಲ್ಲಿವರೆಗೂ ಅದೇ ಸೇತುವೆ, ಕಾಲವೆಗಳಿಗೆ ತಡೆಗೋಡೆಗಳೇ ಇಲ್ಲ. ಇದರಿಂದ ವಾಹನ ಚಾಲಕರು, ಸವಾರರು ನಿತ್ಯ ಭಯದ ಆತಂಕದಲ್ಲೇ ಪ್ರಯಾಣ ಮಾಡುವಂತಾಗಿದೆ. ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಬಸ್ ನಿಲ್ದಾಣದ ಪಕ್ಕವಿರುವ ಮುಧೋಳ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಹಳ್ಳದ ಸೇತುವೆಗೆ ತಡೆಗೋಡೆ ಇಲ್ಲದಿರುವ ಕಾರಣಕ್ಕೆ ಇಲ್ಲಿಯೂ ಪ್ರಯಾಣಿಕರು ನಿತ್ಯ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ.
ಜಗದಾಳ, ನಾವಲಗಿ, ಕುಳಲಿ, ಮುಧೋಳ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಬೈಕ್ ಸವಾರರು ವೇಗವಾಗಿ ಹೋಗುವ ವೇಳೆ ಒಂದು ವೇಳೆ ಏನಾದರೂ ಆಯ ತಪ್ಪಿದರೆ ನೇರವಾಗಿ ಹಳ್ಳದೊಳಗೆ ಬೀಳಬೇಕಾಗುತ್ತದೆ. ಸಾಕಷ್ಟು ಸಣ್ಣ ಪುಟ್ಟ ಅನಾಹುತಗಳು ನಡೆದರೂ ಇಲಾಖೆ ಇದರ ಸುಧಾರಣೆಗೆ ಗಮನ ಹರಿಸಿಲ್ಲ. ಮುಂದೊಂದು ದಿನ ಅಪಾಯವಾಗದ ರೀತಿಯಲ್ಲಿ ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳುವ ಅವಕಾಶಯವಿದೆ.
---
ಬನಹಟ್ಟಿ-ಮುಧೋಳ ರಸ್ತೆಗೆ ಹೊಂದಿರುವ ಕಿರುಸೇತುವೆಗೆ ತಡೆಗೋಡೆ ಇಲ್ಲದಿರುವುದು ನಮ್ಮ ಗಮನದಲ್ಲಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಸದರಿ ವಿಷಯವನ್ನು ತರಲಾಗಿದೆ. ಆದರೂ ವಿಳಂವಾದಲ್ಲಿ ನಾವೇ ತಡೆಗೋಡೆ ನಿರ್ಮಾಣಕ್ಕೆ ಮುಂದಾಗುತ್ತೇವೆ.