ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರೇ ಕಂಟಿನ್ಯೂ : ಛಲವಾದಿ ನಾರಾಯಣಸ್ವಾಮಿ

KannadaprabhaNewsNetwork | Published : Jun 27, 2025 12:48 AM

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಇಲ್ಲ, ಹಾಲಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರೇ ಮುಂದುವರೆಯುತ್ತಾರೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಇಲ್ಲ, ಹಾಲಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರೇ ಮುಂದುವರೆಯುತ್ತಾರೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಗುರುವಾರ, ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಇರಬೇಕು, ಅವರು ಯುವ ನಾಯಕರಿದ್ದಾರೆ. ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಪರ ಛಲವಾದಿ ಬ್ಯಾಟಿಂಗ್ ಮಾಡಿದರು. ಈಗ ಸದ್ಯಕ್ಕೆ ನಮ್ಮಲ್ಲಿ ಯಾವುದೇ ಬದಲಾವಣೆ ಇಲ್ಲ, ನಮ್ಮಲ್ಲಿ ಕೋಳಿ ಕೇಳಿ ಮಸಾಲೆ ಅರಿಯುವುದಿಲ್ಲ, ಆ ಪದ್ಧತಿ ಕಾಂಗ್ರೆಸ್ಸಿನಲ್ಲಿದೆ, ಕಾಂಗ್ರೆಸ್‌ಗೆ ಅಸ್ತಿತ್ವವೇ ಇಲ್ಲ ಎಂದು ವ್ಯಂಗ್ಯವಾಡಿದರು.

ಇನ್ನು, ವಿಪಕ್ಷ ನಾಯಕ ಆರ್. ಅಶೋಕ್‌ ಬದಲಾವಣೆ ವಿಚಾರವಾಗಿನ ಚರ್ಚೆಗಳ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಇಲ್ಲ, ಯಾವುದೇ ಬದಲಾವಣೆ ಇಲ್ಲ, ಯಾವುದೇ ಮನಸ್ತಾಪವೂ ಇಲ್ಲ. ರಾಜ್ಯಾಧ್ಯಕ್ಷರಿಗೆ ಬಿಜೆಪಿ ನಾಯಕರು ದೆಹಲಿಗೆ ಕರೆಸಿ ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆ ಮಾಡುತ್ತಾರೆ. ಬದಲಾವಣೆ ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟಿದ್ದು ಎಂದರು.

ಬದಲಾವಣೆ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಛಲವಾದಿ, ಬದಲಾವಣೆ ಇದೆ ಅಂದರೆ ಈ ಭ್ರಷ್ಟ ಸರ್ಕಾರ ಹಾಳಾಗಿ ಹೋಗುತ್ತದೆ ಎಂದರ್ಥ, ಈ ಸರ್ಕಾರ ಉಳಿಯುವುದಿಲ್ಲ ಎಂಬಂತಹ ಅರ್ಥ ಇರಬಹುದು ಎಂದು ಟಾಂಗ್‌ ನೀಡಿದರು. ರಾಜಣ್ಣ ಜಾಸ್ತಿ ಬದಲಾವಣೆ ಅಂದಿದ್ದಾರೆ, ಸತೀಶ ಜಾರಕಿಹೊಳಿ ಅವರು ಸ್ವಲ್ಪ ಬದಲಾವಣೆ ಅಂದಿದ್ದಾರೆ. ಇನ್ನೂ ಮುಂದೆ ಯಾರ್ಯಾರು ಮಾತನಾಡುತ್ತಾರೆ ನೊಡೋಣ ಎಂದ ಅವರು, ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟಾಚಾರ ತುಂಬಿದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳಿದ್ದಾರೆ. ನಿಮ್ಮದೇ ಶಾಸಕರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಅವರನ್ನು ಕರೆಯಿಸಿ ಮಾತನಾಡುತ್ತೇನೆ ಎನ್ನುತ್ತೀರಲ್ಲಾ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ನಾರಾಯಣಸ್ವಾಮಿ ಗರಂ ಆದರು. ಸಿಎಂ ರಾಜೀನಾಮೆಗೆ ಛಲವಾದಿ ಆಗ್ರಹಿಸಿದರು.

ಬಿಜೆಪಿ ಆಪರೇಷನ್ ಕಮಲ ಮಾಡುತ್ತದೆಯೇ ಎಂಬ ಪ್ರಶ್ನೆಗೆ ನಾರಾಯಣಸ್ವಾಮಿ ಉತ್ತರಿಸಿದ ಅವರು, ಆಪರೇಷನ್ ಮಾಡಲು ಈಗ ಕತ್ತರಿಯೂ ಇಲ್ಲ, ಚಾಕು- ಚೂರಿಯೂ ನಮ್ಮ ಹತ್ತಿರ ಇಲ್ಲ. ಈ ಭ್ರಷ್ಟ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಕಿರಾಣಿ ಅಂಗಡಿ ಇಟ್ಟುಕೊಂಡ ಈ ಸರ್ಕಾರದಲ್ಲಿ ದುಡ್ಡು ಕೊಟ್ಟರೆ ವ್ಯಾಪಾರ, ಇಲ್ಲಾಂದ್ರೆ ವ್ಯಾಪಾರ ಇಲ್ಲ. ನಾವು ಹೇಳಿದ್ದು ಸಾಕಾಯಿತು, ಈಗ ಕಾಂಗ್ರೆಸ್ ಶಾಸಕರೇ ಸರಕಾರದ ಮೇಲೆ ಬಿದ್ದು ಬಿಟ್ಟಿದ್ದಾರೆ. ಆ ಕಡೆ ಕಾಗೇನು ಮೇಲೆ ಬಿದ್ದಿದೆ, ಈಕಡೆ ಬಿ.ಆರ್.ಪಾಟೀಲರು ಮೇಲೆ ಬಿದ್ದಿದ್ದಾರೆ, ಆಕಡೆ ಬೇಳೂರು ಗೋಪಾಲಕೃಷ್ಣ, ಎನ್.ವೈ.ಗೋಪಾಲಕೃಷ್ಣ ಮೇಲೆ ಬಿದ್ದಿದ್ದಾರೆ. ಸರ್ಕಾರದಲ್ಲಿ ದುಡ್ಡಿಲ್ಲ ಅಂತ ಹೋಂ ಮಿನಿಸ್ಟರ್ ಹೇಳ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.