ಮುಳುತಜ್ಞ ಈಶ್ವರ ಮಲ್ಪೆಗೆ ಪುತ್ತಿಲ ಪರಿವಾರ ಟ್ರಸ್ಟ್ ನೆರವು

KannadaprabhaNewsNetwork | Published : Oct 2, 2024 1:04 AM

ಮಾಧ್ಯಮಗಳ ವರದಿಗಳನ್ನು ವೀಕ್ಷಿಸಿ ಈಶ್ವರ್ ಮಲ್ಪೆಗೆ ಕೈಲಾದ ಕೊಡುಗೆ ನೀಡಬೇಕೆಂದು ನಿರ್ಧರಿಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪ್ರಮುಖರು ‘ಪುತ್ತಿಲ ಬ್ರಿಗೇಡ್’ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿದ ಒಂದು ಸಂದೇಶಕ್ಕೆ ಕೇವಲ ೭ ಗಂಟೆಯಲ್ಲಿ ಒಂದು ಲಕ್ಷ ರು. ಸಂಗ್ರಹವಾಗಿದೆ. ಇದು ಈಶ್ವರ್ ಮಲ್ಪೆಯ ಮೇಲೆ ಜನರಿಗಿರುವ ಅಭಿಮಾನವನ್ನು ತೋರಿಸುತ್ತದೆ ಎಂದು ಸೇವಾ ಟ್ರಸ್ಟ್‌ ಪ್ರಮುಖರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ನೂರಾರು ಜೀವಗಳನ್ನು ರಕ್ಷಿಸಿದ , ಹಲವು ಕ್ಲಿಷ್ಟಕರ ಸಂದರ್ಭದಲ್ಲಿ ಜಲ ಅವಘಡದಲ್ಲಿ ಮೃತಪಟ್ಟ ಮೃತದೇಹಗಳನ್ನು ನೀರಿನಿಂದ ಮೇಲೆತ್ತಿದ ಆಪದ್ಬಾಂಧವ, ಖ್ಯಾತ ಮುಳುಗುತಜ್ಞ ಈಶ್ವರ್ ಮಲ್ಪೆ ಅವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಧನ ಸಹಾಯ ಮಾಡಲಾಯಿತು. ರು.೧ ಲಕ್ಷದ ಚೆಕ್‌ನ್ನು ಈಶ್ವರ್ ಮಲ್ಪೆ-ಗೀತಾ ದಂಪತಿಗೆ ಅವರ ಮಲ್ಪೆಯ ಮನೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು ತನ್ನ ಮಕ್ಕಳು ವಿಶೇಷ ಚೇತನರಾಗಿ ತೀವ್ರ ಅನಾರೋಗ್ಯದಿಂದಿದ್ದರೂ ಮನೆಯ ಪರಿಸ್ಥಿತಿಯನ್ನು ಲೆಕ್ಕಿಸದೆ ಪ್ರಾಕೃತಿಕ ವಿಕೋಪದ ಕಠಿಣ ಸಂದರ್ಭದಲ್ಲಿ ಜೀವದ ಹಂಗು ತೊರೆದು ಉಚಿತವಾಗಿ ರಕ್ಷಣೆಗೆ ಧಾವಿಸುವ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಉತ್ತರ ಕನ್ನಡ ಜಿಲ್ಲೆಯ ಶೀರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ಮನವಿಯ ಮೇರೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದ ಚಾಲಕ ಅರ್ಜುನ್ ಲಾರಿಯನ್ನು ಗುರುತಿಸುವಲ್ಲಿಯೂ ಈಶ್ವರ್ ಮಲ್ಪೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕೊನೆಗೆ ಅವರನ್ನು ಅಧಿಕಾರಿಗಳು ಮತ್ತು ಸರ್ಕಾರ ಕಡೆಗಣನೆ ಮಾಡಿರುವುದು ಸಮಾಜದಲ್ಲಿ ತೀವ್ರ ಬೇಸರವನ್ನು ಉಂಟು ಮಾಡಿದೆ. ಮನೆಯಲ್ಲಿ ಬಡತನವಿದ್ದರೂ ಮಾನವೀಯತೆಯಲ್ಲಿ ಅಗರ್ಭ ಶ್ರೀಮಂತರಾಗಿರುವ ಈಶ್ವರ್ ಮಲ್ಪೆ ಸೇವೆ ಇನ್ನಷ್ಟು ಬೇಕೆಂಬ ಹಂಬಲದಿಂದ ಪ್ರತಿಯೊಬ್ಬನೂ ಈಶ್ವರ್ ಮಲ್ಪೆಗೆ ಬೆಂಬಲವಾಗಿ ನಿಲ್ಲಬೇಕು ಎಂದರು.

ಸುಮಾರು ೨೦೦ ರಷ್ಟು ಜೀವಗಳನ್ನು ನೀರಿನಿಂದ ಮೇಲೆತ್ತಿದ ಈ ಸಾಧಕನ ಹೆಸರಲ್ಲಿ ಸರ್ಕಾರ ‘ಆಪದ್ಬಾಂಧವ ಈಶ್ವರ್ ಮಲ್ಪೆ ತುರ್ತು ಸೇವಾ ಘಟಕ’ ಸ್ಥಾಪಿಸಿ ಅದರ ಮೂಲಕ ರಾಜ್ಯದೆಲ್ಲೆಡೆ ತರಬೇತಿ ಪಡೆದ ಒಂದು ತುರ್ತು ಸೇವಾ ತಂಡ ರಚನೆಯಾಗುವಂತೆ ಸರ್ಕಾರ ಇವರಿಗೆ ಸವಲತ್ತು ನೀಡಬೇಕು ಮತ್ತು ಈಶ್ವರ್ ಮಲ್ಪೆಯ ಸೇವೆ ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಡುವಂತೆ ಅರುಣ್ ಕುಮಾರ್ ಪುತ್ತಿಲ ಒತ್ತಾಯಿಸಿದರು.ವಾಟ್ಸಾಪ್ ಗ್ರೂಪ್‌ನಲ್ಲಿ ಸಂಗ್ರಹ :

ಮಾಧ್ಯಮಗಳ ವರದಿಗಳನ್ನು ವೀಕ್ಷಿಸಿ ಈಶ್ವರ್ ಮಲ್ಪೆಗೆ ಕೈಲಾದ ಕೊಡುಗೆ ನೀಡಬೇಕೆಂದು ನಿರ್ಧರಿಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪ್ರಮುಖರು ‘ಪುತ್ತಿಲ ಬ್ರಿಗೇಡ್’ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿದ ಒಂದು ಸಂದೇಶಕ್ಕೆ ಕೇವಲ ೭ ಗಂಟೆಯಲ್ಲಿ ಒಂದು ಲಕ್ಷ ರು. ಸಂಗ್ರಹವಾಗಿದೆ. ಇದು ಈಶ್ವರ್ ಮಲ್ಪೆಯ ಮೇಲೆ ಜನರಿಗಿರುವ ಅಭಿಮಾನವನ್ನು ತೋರಿಸುತ್ತದೆ ಎಂದು ಸೇವಾ ಟ್ರಸ್ಟ್‌ ಪ್ರಮುಖರು ತಿಳಿಸಿದರು.

ಉಡುಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕರಾದ ಮಂಜು ಕೊಳ ಮಲ್ಪೆ, ಉಡುಪಿ ಹಿಂದೂ ಯುವಸೇನೆ ನಗರ ಅಧ್ಯಕ್ಷ ಸುನೀಲ್ ನೇಜಾರು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಂದಾರು, ಯುವ ಮೋರ್ಚಾ ಉಪಾಧ್ಯಕ್ಷ ಧನುಶ್ ಮತ್ತಿತರರಿದ್ದರು.