ಗ್ಯಾಸ್ ಟ್ರಬಲ್‌ನಿಂದಾಗಿ ಹೋಟೆಲ್‌ಗಳ ಮೆನುವಿನಲ್ಲಿ ಆಹಾರ ಸಂಖ್ಯೆ ಕಡಿತ । ಚಹಾ ಅಂಗಡಿಗಳು ಬಂದ್‌

ತರಹೇವಾರಿ ತಿಂಡಿಗಳ ಬದಲಿಗೆ ಅನ್ನ-ಸಾಂಬರ್‌ಗೆ ಮಾಲೀಕರು ಶರಣು । ವ್ಯಾಪಾರಿಗಳು ಸ್ಥಿತಿ ಅತಂತ್ರಕ್ಕೆ

---

ಗ್ಯಾಸ್‌ ಟ್ರಬಲ್‌

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕಳೆದ 3 ದಿನಗಳಿಂದ ಗ್ಯಾಸ್‌ ಟ್ರಬಲ್‌


ಗುಂಡ್ಲುಪೇಟೆಯಲ್ಲಿ 10ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳಿಗೆ ಬೀಗ

ಕೊಳ್ಳೇಗಾಲ ಪಟ್ಟಣದಲ್ಲಿ 3-4 ಹೋಟೆಲ್‌ಗಳು ಸಂಪೂರ್ಣ ಬಂದ್‌

ವಾಣಿಜ್ಯ ಸಿಲಿಂಡರ್‌ ಸಿಗದೆ ಕೇಟರಿಂಗ್‌, ಪಾರ್ಸೆಲ್‌ ವ್ಯವಸ್ಥೆ ಸ್ಥಗಿತ

ಫೈನಾನ್ಸ್‌ಗಳಿಂದ ಸಾಲ ಮಾಡಿದ್ದವರ ಕಷ್ಟ ಹೇಳತೀರದಂತಾಗಿದೆ.

---

ಆಟೋಚಾಲಕರಿಗೂ ಸಮಸ್ಯೆ

ಮಧ್ಯಪ್ರಾಚ್ಯ ಯುದ್ಧದ ತರುವಾಯ ಹೊರ್ಮುಜ್‌ ಜಲಸಂಧಿ ದಿಗ್ಭಂದನದಿಂದಾಗಿ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಎರಡು ಎಲ್‌ಪಿಜಿ ಕೇಂದ್ರಗಳು ಸಂಪೂರ್ಣ ಸ್ಥಗಿತಗೊಂಡಿವೆ. ಪರಿಣಾಮ ಆಟೋ ಚಾಲಕರು ತಮ್ಮ ರಿಕ್ಷಾಗಳಿಗೆ ಗ್ಯಾಸ್‌ ತುಂಬಿಸಲಾಗದ ಸ್ಥಿತಿ ಎದುರಾಗಿದೆ. ಆಟೋಗಳನ್ನು ನಂಬಿಕೊಂಡಿದ್ದವರ ಬಾಳು ಅತಂತ್ರಕ್ಕೆ ಸಿಲುಕಿದೆ.

---ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಈಗ ಚಾಮರಾಜನಗರಕ್ಕೂ ವ್ಯಾಪಿಸಿದೆ‌. ಇಷ್ಟು ದಿನ ಚಾಮರಾಜನಗರದಲ್ಲಿ ಕಾಣಿಸಿಕೊಳ್ಳದ ವಾಣಿಜ್ಯ ಸಿಲಿಂಡರ್‌ ಸಮಸ್ಯೆ ಶುಕ್ರವಾರದಿಂದ ಪಾದಾರ್ಪಣೆ ಮಾಡಿದೆ. ಹಲವೆಡೆ ಹೋಟೆಲ್, ಚಹಾ ಅಂಗಡಿ ಬಂದ್ದಾಗಿವೆ. ಕೆಲವು ಮೆಸ್‌ಗಳಲ್ಲಿ ಮೆನು ಬದಲಾಗಿದ್ದು, ಅನ್ನ- ಸಾಂಬಾರ್‌ಗಷ್ಟೇ ಸೀಮಿತವಾಗಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಊಟಿ-ಮೈಸೂರು ರಸ್ತೆಯಲ್ಲಿ ದಿನನಿತ್ಯ ಪ್ರವಾಸಿಗರಿಂದ ಗಿಜುಗುಡುತ್ತಿದ್ದ ಕೆಫೆ ಹಾಗೂ ಹೋಟೇಲ್‌ಗಳು ಬಂದಾಗಿವೆ. ವಾಣಿಜ್ಯ ಸಿಲಿಂಡರ್‌ ಸಿಗದ ಕಾರಣ ಅನಿವಾರ್ಯವಾಗಿ 10ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳಿಗೆ ಬೀಗ ಹಾಕಲಾಗಿದೆ. ಮದ್ಯಪ್ರಾಚ್ಯದ ಯುದ್ಧದಿಂದಾಗಿ ಗಡಿನಾಡು ಚಾಮರಾಜನಗರ ಜಿಲ್ಲೆಯ ವ್ಯಾಪಾರಿಗಳು ಬೀದಿಗೆ ಬರುವಂತೆ ಮಾಡಿದೆ.

ಪ್ರವಾಸಿಗರ ಕೇಂದ್ರ ಗುಂಡ್ಲುಪೇಟೆಗೆ ಟ್ರಬಲ್‌:ಇನ್ನು ಬಂಡೀಪುರ, ಊಟಿ ಹಾಗೂ ಕೇರಳದ ವಯನಾಡಿಗೆ ಸಂಪರ್ಕ ಕಲ್ಪಿಸುವ ಕೊಂಡಿ ಈ ಗುಂಡ್ಲುಪೇಟೆ. ಇದೇ ಮಾರ್ಗವಾಗಿ ಕೇರಳ ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಈ ಮಾರ್ಗವಾಗಿ ಸಂಚಾರಿಸುತ್ತಾರೆ. ಹೀಗೆ ಬರುವಂತ ಪ್ರವಾಸಿಗರಿಂದ ಸಾವಿರಾರು ಮಂದಿ ವ್ಯಾಪಾರಿಗಳು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ ಕಳೆದ 3 ದಿನಗಳಿಂದ ವಾಣಿಜ್ಯ ಗ್ಯಾಸ್‌ ಸಿಗುತ್ತಿಲ್ಲ. ಈ ಕಾರಣದಿಂದ ಚಹಾ, ಕಾಫಿ ಮಾರಾಟ ಮಾಡುವ ಕೆಫೆಗಳು ಹೋಟೆಲ್‌ಗಳಿಗೆ ಬೀಗ ಹಾಕಲಾಗಿದೆ. ಸಾಲ ತೆಗೆದುಕೊಂಡು ಜೀವನ ಸಾಗಿಸುತ್ತಿದ್ದ ವ್ಯಾಪಾರಿಗಳ ಗೋಳು ಕೇಳುವವರಿಲ್ಲದಂತಾಗಿದೆ.ಕೋವಿಡ್ ಹೊಡೆತದ ಬಳಿಕ ಸುಧಾರಿಸಿಕೊಂಡಿದ್ದ ವ್ಯಾಪಾರಿಗಳು ಈಗ ಮತ್ತೆ ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ. ಕೊಳ್ಳೇಗಾಲ ಪಟ್ಟಣದಲ್ಲೂ ಕೂಡ ಗ್ಯಾಸ್ ಸಿಲಿಂಡರ್‌ ಸಮಸ್ಯೆ ತಲೆದೂರಿದ್ದು 3-4 ಹೋಟೆಲ್ ಬಂದಾಗಿದೆ. ಮೆಸ್‌ಗಳಲ್ಲಿ ಗ್ಯಾಸ್‌ ಟ್ರಬಲ್‌ನಿಂದಾಗಿ ಪಲ್ಯ, ಮುದ್ದೆ ಚಪಾತಿಗೆ ಬ್ರೇಕ್ ಹಾಕಿ, ಅನ್ನ-ಸಾಂಬಾರ್‌ಗಷ್ಟೇ ಮೆಸ್‌ಗಳ ಮೆನು ಸೀಮಿತವಾಗಿದೆ. ಇನ್ನು, ಹಲವು ಮೆಸ್‌ಗಳು ಕೇಟರಿಂಗ್, ಪಾರ್ಸಲ್‌ ಅನ್ನೂ ಕಡಿತಗೊಳಿಸಿದೆ.ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೂ ಗ್ಯಾಸ್‌ ಸಮಸ್ಯೆ ತಲೆದೂರಿದ್ದು, ಎರಡು ಆಟೋ ಎಲ್‌ಪಿಜಿ ಬಂಕ್‌ ಸ್ಥಗಿತಗೊಂಡಿದೆ. ಎಲ್‌ಪಿಜಿ ಗ್ಯಾಸ್ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಆಟೋ ಚಾಲಕರ ಕಷ್ಟ ಹೇಳತೀರದಾಗಿದೆ.

---13ಸಿಎಚ್ಎನ್‌18---