ಕನ್ನಡಪ್ರಭ ವಾರ್ತೆ ಮಡಿಕೇರಿ
ಜು.1 ರಂದು ಮಂಗಳವಾರ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಪಂಡ ಮುತ್ತಪ್ಪ ಅವರ ತಾಯಿ ನಾಪಂಡ ಬೋಜಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ರಾಜಕೀಯ ವರದಿಗೆ ಕನ್ನಡಪ್ರಭದಲ್ಲಿ ಪ್ರಕಟಗೊಂಡ ವಿಘ್ನೇಶ್ ಭೂತನಕಾಡು ಅವರ, ಒಡೆಯರ್ ಗೆ ಕೊಡಗಿನಿಂದ 73 ಸಾವಿರ ಮತಗಳ ಲೀಡ್ ವರದಿ ಆಯ್ಕೆಯಾಗಿದೆ.ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮತ್ತು ಪುತ್ರ ಬಿ.ಎನ್. ಅಂಜನ್ ಅವರು ದಿವಂಗತ ಬಿ.ಆರ್.ಶಶಿರಮ್ಮ ಮತ್ತು ದಿವಂಗತ ಬಿ.ಟಿ. ರಾಮದಾಸ ಶೆಟ್ಟಿ ಅವರ ಜ್ಞಾಪಕಾರ್ಥ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡ ಮೋಹನ್ ರಾಜ್ ಅವರ, ರಸ್ತೆಗಳಿಗೆ ಟಿಂಬರ್ ಲೋಡ್ ಕಂಟಕ ಸೇರಿದಂತೆ ಎರಡು ವರದಿಗಳು ಆಯ್ಕೆಯಾಗಿದೆ.
ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಗಿರೀಶ್ ಪಗಡಿಗತ್ತಲ ಅವರ ಕಾಡಿಗಿಂತ ನಾಡಿನಲ್ಲೇ ಆನೆ ಹೆಚ್ಚಳ ಗ್ರಾಮೀಣ ವರದಿ ಆಯ್ಕೆಯಾಗಿದೆ.
ಕೊಡಗು ಪತ್ರಕರ್ತರ ಸಂಘದ ಹಿರಿಯ ಸಲಹೆಗಾರರಾದ ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ.ಅನಂತಶಯನ ಅವರು ತಮ್ಮ ತಾಯಿ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುನಿಲ್ ಪೂಜಾರಿ ಅವರ ಬರೆ ಬಂಡೆ ಕುಸಿಯುವ ಭೀತಿ ವರದಿ ಆಯ್ಕೆಯಾಗಿದೆ. ಶ್ರೀ ಮಂಡಿಬೆಲೆ ರಾಜಣ್ಣ ಅವರು ತಮ್ಮ ಪೋಷಕರಾದ ಮಂಡಿಬೆಲೆ ದ್ಯಾವಮ್ಮ - ಶಾಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಕೊಡಗಿನ ಆದಿವಾಸಿ ಜನಾಂಗದ ಜೀವನ ಕುರಿತ ಮಾನವೀಯ ವರದಿಗಾಗಿ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಡಿ.ಪಿ. ಲೋಕೇಶ್ ಅವರ ಇವರಿಗೆ ಆಧಾರವಿಲ್ಲ ಸೂರು ಇಲ್ಲ ವರದಿ ಆಯ್ಕೆಯಾಗಿದೆ.
ಕೊಡಗು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರು ದಿ.ಮೀರಾ ಕಾಮತ್ ಮತ್ತು ಎಂ.ಜಿ. ಪದ್ಮನಾಭ ಕಾಮತ್ ಸ್ಮರಣಾರ್ಥ ಸ್ಥಾಪಿಸಿರುವ ದೃಶ್ಯ ವಾಹಿನಿಯಲ್ಲಿ ಪ್ರಸಾರವಾದ ಮಾನವೀಯ ವರದಿಗೆ ಟಿವಿ ಒನ್ ವಾಹಿನಿಯಲ್ಲಿ ಪ್ರಸಾರಗೊಂಡ ಮನೆ ಬೀಳುವ ಆತಂಕದಲ್ಲಿ ವೃದ್ಧ ದಂಪತಿಗಳ ಬವಣೆ ವರದಿ ಆಯ್ಕೆಗೊಂಡಿದೆ.
ಪತ್ರಿಕಾದಿನಾಚರಣೆಯಲ್ಲಿ ಪ್ರದಾನ -ಜುಲೈ 1 ರಂದು ಮಂಗಳವಾರ ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿತ ಪತ್ರಿಕಾದಿನಾಚರಣೆಯಲ್ಲಿ ಸಮಾಜಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ವಿವಿಧ ದತ್ತಿ ದಾನಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಹೊಸದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರ ಕೆ. ತಿಮ್ಮಪ್ಪ, ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್, ಕ್ಷೇಮನಿಧಿ ಸಮಿತಿ ಅಧ್ಯಕ್ಷ ಜಿ.ವಿ. ರವಿಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.