ಕನ್ನಡಪ್ರಭ ವಾರ್ತೆ ಬೆಂಗಳೂರು
ಆಯುಷ್ ಇಲಾಖೆಯಿಂದ ವಿಧಾನಸೌಧ ಎದುರು ಏರ್ಪಡಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ನಾಡಿನ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯ ತಿಳಿಸಿ ಭಾಷಣ ಆರಂಭಿಸಿದ ರಾಜ್ಯಪಾಲರು, ಯೋಗ ಸಾವಿರಾರು ವರ್ಷಗಳಷ್ಟು ಪುರಾತನವಾದದ್ದು, ಮಾನಸಿಕ ಮತ್ತು ಶಾರೀರಿಕ ಏಕತೆಗೆ ಯೋಗ ಅಗತ್ಯ. ಯೋಗ ಫಾರ್ ಹೆಲ್ದೀ ಹೆಲ್ತ್ ಅನ್ನೋ ಘೋಷಣೆ ಅನ್ವಯ ಯೋಗದಿನ ಆಚರಿಸಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಯೋಗದ ಕುರಿತು ಪ್ರಚಾರ ನಡೆಸಿ ಜಾಗೃತಿ ಮೂಡಿಸುತ್ತಿದೆ ಎಂದರು. ಆರೋಗ್ಯ ಸಚಿವ ಯು.ಟಿ.ಖಾದರ್ ಪಾಲ್ಗೊಂಡಿದ್ದರು.
‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಘೋಷವಾಕ್ಯದಡಿ ಆರಂಭವಾದ ಯೋಗಾಭ್ಯಾಸ ಬೆಳಿಗ್ಗೆ 7ರಿಂದ ಆರಂಭವಾಗಿ 40 ನಿಮಿಷ ನಡೆಯಿತು. ಸಿನಿಮಾ ನಟಿಯರಾದ ಸುಧಾರಾಣಿ, ಹರಿಪ್ರಿಯಾ, ನಟ ವಶಿಷ್ಠ ಸಿಂಹ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಯೋಗ ಶಿಕ್ಷಕರು ಸೇರಿದಂತೆ 2 ಸಾವಿರಕ್ಕೂ ಅಧಿಕ ಯೋಗ ಪಟುಗಳು ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಧಾರವಾಡದ ಮಲ್ಲಗಂಭ ಅಕಾಡೆಮಿಯಿಂದ ಮಲ್ಲಗಂಭ ಪ್ರದರ್ಶನ ನಡೆಯಿತು. ಏಳು ಬಾರಿ ವಿಶ್ವದಾಖಲೆ ಮಾಡಿರುವ ಮಲ್ಲಗಂಭ ಸಾಹಸ ಕಲಾವಿದರು ನಡೆಸಿಕೊಟ್ಟ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು.ಪರಪ್ಪನ ಅಗ್ರಹಾರದ ಜೈಲಿನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಗೌಡ ಭಾಗಿಯಾಗಿದ್ದರು.
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕುಂಭಕೋಣಂನಲ್ಲಿರುವ ಪೇಜಾವರ ಮಠದ ಶಾಖೆಯಲ್ಲಿ ಯೋಗ, ಪ್ರಾಣಾಯಾಮಾದಿಗಳನ್ನು ನಡೆಸಿದರು. ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗ ನಡೆದ ಯೋಗ ದಿನಾಚರಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗಿದ್ದರು. ಕಲಬುರಗಿಯ ಶರಣ ಬಸವೇಶ್ವರ ಪಬ್ಲಿಕ್ ಶಾಲೆಯಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ 1,500 ಮಕ್ಕಳು ಸಾಮೂಹಿಕ ಯೋಗ ಮಾಡಿ, ಗಮನ ಸೆಳೆದರು. ಇದೇ ವೇಳೆ, ಕಲಬುರಗಿ ಜಿಲ್ಲೆ ನಂದಿಕೂರ ಗ್ರಾಪಂ ಮಾಜಿ ಅಧ್ಯಕ್ಷ ಪವನಕುಮಾರ್ ವಳಕೇರಿಯವರು ತಮ್ಮೂರು ನಂದಿಕೂರಿನ ಬಾವಿಯಲ್ಲಿ ಬೆಳಗ್ಗೆ 7ರಿಂದ 9 ಗಂಟೆಯವರೆಗೆ 2 ಗಂಟೆ ಜಲಯೋಗ ಮಾಡಿದರು. ವಿವಿಧ ಆಸನದ ಭಂಗಿಗಳನ್ನು ನೀರಲ್ಲೇ ಮಾಡುವ ಮೂಲಕ ಗಮನ ಸೆಳೆದರು.