138 ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತ!

KannadaprabhaNewsNetwork |  
Published : Jul 25, 2026, 02:15 AM IST
ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ಸ್ಥಗಿತಗೊಂಡಿರುವುದು. | Kannada Prabha

ಸಾರಾಂಶ

ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯ ಕೊಳವೆಬಾವಿಗಳಲ್ಲಿ ಅಪಾಯಕಾರಿ ಮಟ್ಟದ ಪ್ಲೋರೈಡ್ ಅಂಶವಿದ್ದು, ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಸರ್ಕಾರವೇ ಅಧಿಕೃತವಾಗಿ ಘೋಷಿಸಿದೆ. ಪ್ಲೋರೈಡ್‌ ಯುಕ್ತ ನೀರು ಕುಡಿದು ಹಳ್ಳಿಗಳ ಎಷ್ಟೋ ಜನರು ಮೂಳೆ ಕಾಯಿಲೆ, ಹಲ್ಲಿನ ಸಮಸ್ಯೆ ಹಾಗೂ ಅರ್ಧ ವಯಸ್ಸಿನಲ್ಲೇ ಅಂಗವಿಕಲತೆಗೆ ಈಡಾಗುತ್ತಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ಬರಗಾಲದ ಕರಾಳ ಛಾಯೆಗೆ ಜಿಲ್ಲೆಯ ರೈತರು, ಶ್ರಮಿಕರು ಹಾಗೂ ಸಾಮಾನ್ಯ ಜನರ ಜೀವನ ತತ್ತರಿಸುವಂತೆ ಮಾಡಿದೆ. ಮಳೆಗಾಲದಲ್ಲಿಯೇ ಜಾನುವಾರುಗಳಿಗೆ ಮೇವಿನ ಕೊರತೆ, ಗ್ರಾಮೀಣ ಜನರ ಒಣಗಿದ ಗಂಟಲನ್ನು ತಣಿಸಬೇಕಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು(ಆರ್‌ಒ ಪ್ಲಾಂಟ್‌) ನಿರ್ವಹಣೆಯಿಲ್ಲದೇ ಧೂಳು ಹಿಡಿಯುತ್ತಿರುವುದು ಜಿಲ್ಲಾಡಳಿತದ ನಿಷ್ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.

ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯ ಕೊಳವೆಬಾವಿಗಳಲ್ಲಿ ಅಪಾಯಕಾರಿ ಮಟ್ಟದ ಪ್ಲೋರೈಡ್ ಅಂಶವಿದ್ದು, ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಸರ್ಕಾರವೇ ಅಧಿಕೃತವಾಗಿ ಘೋಷಿಸಿದೆ. ಪ್ಲೋರೈಡ್‌ ಯುಕ್ತ ನೀರು ಕುಡಿದು ಹಳ್ಳಿಗಳ ಎಷ್ಟೋ ಜನರು ಮೂಳೆ ಕಾಯಿಲೆ, ಹಲ್ಲಿನ ಸಮಸ್ಯೆ ಹಾಗೂ ಅರ್ಧ ವಯಸ್ಸಿನಲ್ಲೇ ಅಂಗವಿಕಲತೆಗೆ ಈಡಾಗುತ್ತಿದ್ದಾರೆ. ಇದಕ್ಕಾಗಿಯೇ ಸರ್ಕಾರ ಹಳ್ಳಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿತ್ತು. ಆದರೆ, ಜಿಲ್ಲೆಯಲ್ಲಿರುವ ಒಟ್ಟು 439 ಘಟಕಗಳ ಪೈಕಿ ಬರೋಬ್ಬರಿ 138 ಘಟಕಗಳು ಸಂಪೂರ್ಣ ಸ್ಥಗಿತಗೊಂಡಿವೆ ಎನ್ನುವುದನ್ನು ಗ್ರಾಮೀಣ ಕುಡಿವ ನೀರು ಇಲಾಖೆಯ ಕಡತಗಳೇ ಹೇಳುತ್ತಿವೆ.

ನಿರ್ವಹಣೆಯೇ ಇಲ್ಲ: ಗ್ರಾಮ ಪಂಚಾಯಿತಿಗಳ ಉಸ್ತುವಾರಿಗೆ ಹಸ್ತಾಂತರಿಸಲಾದ 25 ಘಟಕಗಳು ಸೂಕ್ತ ನಿರ್ವಹಣೆಯಿಲ್ಲದೇ ಕೆಟ್ಟು ನಿಂತಿವೆ. ಇನ್ನುಳಿದ 414 ಘಟಕಗಳ ಸ್ಥಿತಿಯೂ ಭಿನ್ನವಾಗಿಲ್ಲ. ಸಣ್ಣಪುಟ್ಟ ತಾಂತ್ರಿಕ ದೋಷ, ಫಿಲ್ಟರ್‌ಗಳ ಬದಲಾವಣೆ ಅಥವಾ ವಿದ್ಯುತ್ ಸಮಸ್ಯೆ ಬಂದರೂ ತಿಂಗಳುಗಟ್ಟಲೆ ದುರಸ್ತಿ ಭಾಗ್ಯ ಕಾಣುತ್ತಿಲ್ಲ. ದಾಖಲೆಗಳಲ್ಲಿ ಮಾತ್ರ ಇವುಗಳ ನಿರ್ವಹಣೆಗೆ ಪ್ರತಿವರ್ಷ ಲಕ್ಷಾಂತರ ರುಪಾಯಿ ಹಣ ವೆಚ್ಚವಾಗುತ್ತಿದೆಯಾದರೂ, ವಾಸ್ತವದಲ್ಲಿ ಹಳ್ಳಿಗರಿಗೆ ಶುದ್ಧ ಕುಡಿಯುವ ನೀರು ಮಾತ್ರ ಸಿಗುತ್ತಿಲ್ಲ.

ತಪ್ಪದ ಕಾಯುವಿಕೆ: ಹನಿ ನೀರಿಗೆ ಪರದಾಡುವ ಪರಿಸ್ಥಿತಿ ನಮ್ಮದು. ಕೆಟ್ಟುನಿಂತ ಘಟಕಗಳ ಮುಂದೆ ಖಾಲಿ ಕೊಡ ಹಿಡಿದು ನಿಲ್ಲುವುದೇ ನಮ್ಮ ನಿತ್ಯದ ಕಾಯಕವಾಗಿದೆ. ಒಂದು ಕಡೆ ಬರಗಾಲ, ಇನ್ನೊಂದೆಡೆ ನದಿಮೂಲದ ನೀರು ಒದಗಿಸುವ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ತಲುಪದಿರುವುದು, ಈ ಎರಡರ ನಡುವೆ ಗ್ರಾಮೀಣ ಜನತೆ ಅತ್ತ ಫ್ಲೋರೈಡ್ ನೀರನ್ನೂ ಕುಡಿಯಲಾಗದೇ, ಇತ್ತ ಶುದ್ಧ ನೀರೂ ಸಿಗದೇ ನಾವೆಲ್ಲಾ ಶುದ್ಧ ಕುಡಿಯುವ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ ಎನ್ನುತ್ತಾರೆ ಜಿಲ್ಲೆಯ ಗ್ರಾಮೀಣ ಭಾಗದ ಜನರು.

ನೈತಿಕ ಕರ್ತವ್ಯ: ನೀರು ಕೇವಲ ಮೂಲ ಸೌಕರ್ಯ ಮಾತ್ರವಲ್ಲ, ಅದು ಮನುಷ್ಯನ ಜೀವಜಲ. ದಾಖಲೆಗಳ ಲೆಕ್ಕಾಚಾರ ಬದಿಗಿಟ್ಟು, ಸ್ಥಗಿತಗೊಂಡಿರುವ 138 ಘಟಕಗಳಿಗೆ ತಕ್ಷಣವೇ ಜೀವ ನೀಡಬೇಕಿದೆ. ಬರಗಾಲದ ಈ ಸನ್ನಿವೇಶದಲ್ಲಿ ಜನರಿಗೆ ಶುದ್ಧ ನೀರು ತಲುಪಿಸುವುದು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನೈತಿಕ ಕರ್ತವ್ಯ. ಈ ಕುರಿತು ಜಿಲ್ಲಾಡಳಿತ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್‌ ವಂಚಿತ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಸಮಾಜಘಾತುಕ ಶಕ್ತಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು-ಮಾಜಿ ಸಚಿವ ಪಾಟೀಲ