ಕನ್ನಡಪ್ರಭ ವಾರ್ತೆ ಉಡುಪಿ ಇಲ್ಲಿನ ಶಿರೂರು ಮಠದ ಪೀಠಾಧಿಪತಿ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ 18ನೇ ಜನ್ಮನಕ್ಷತ್ರ ಆಚರಣೆಯು ಅ.11ರಂದು ಸಂಜೆ 6 ಗಂಟೆಗೆ ಶಿರೂರು ಮಠದ ಮುಂಭಾಗದಲ್ಲಿ ಶ್ರೀ ಅನ್ನವಿಠಲ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಶಿರೂರು ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಯಶ್ಪಾಲ್ ಸುವರ್ಣ, ಸುನಿಲ್ ಕುಮಾರ್, ಗುರುರಾಜ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಠದ ದಿವಾಣರಾದ ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ. ಶುಕ್ರವಾರ ಈ ಕಾರ್ಯಕ್ರಮದ ವೇದಿಕೆ ಮತ್ತು ಚಪ್ಪರ ನಿರ್ಮಾಣಕ್ಕೆ ಶಿರೂರು ಶ್ರೀಗಳು ಮುಹೂರ್ತ ನಡೆಸಿದರು. ಮಠದ ದಿವಾಣರು, ಚಪ್ಪರದ ನಿರ್ವಾಹಕರಾದ ಎಂ.ರಾಜೇಶ್ ರಾವ್, ಯಾದವ ಆಚಾರ್ಯ ಮುಂತಾದವರಿದ್ದರು.