- 4 ಜನರ ಮೇಲೆ ಅರಣ್ಯ ಇಲಾಖೆಯಿಂದ ಪ್ರಕರಣ ದಾಖಲು
ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕೊರಲಕೊಪ್ಪ ರಬ್ಬರ್ ತೋಟದಲ್ಲಿ 2 ಜಿಂಕೆಗಳ ಹತ್ಯೆ ಸಂಬಂಧ ಅರಣ್ಯ ಇಲಾಖೆಯವರು ಒಬ್ಬ ಆರೋಪಿಯನ್ನು ಬಂಧಿಸಿದ್ದು, 4 ಜನ ಆರೋಪಿಗಳ ಮೇಲೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಕೊರಲಕೊಪ್ಪ ಕೆ.ನಾಗೇಂದ್ರ ಎಂಬುವರ ರಬ್ಬರ್ ತೋಟದಲ್ಲಿ ಸೆ. 3 ರ ರಾತ್ರಿ 2 ಜಿಂಕೆಗಳನ್ನು ಹತ್ಯೆ ಮಾಡಿ ಜಿಂಕೆ ತಲೆ, ಚರ್ಮ ಹಾಗೂ ದೇಹದ ಕೆಲವು ತುಣುಕುಗಳನ್ನು ರಬ್ಬರ್ ಚೀಲದಲ್ಲಿ ಕಟ್ಟಿ ಅವರ ಪಕ್ಕದ ತೋಟದ ರಿಂಗ್ ಬಾವಿಗೆ ಹಾಕಲಾಗಿತ್ತು. ಪಕ್ಕದ ತೋಟದ ಬಾವಿಯಲ್ಲಿ ಸೆ.6 ರ ಹೊತ್ತಿಗೆ ವಾಸನೆ ಬಂದಿದ್ದರಿಂದ ಪಕ್ಕದ ತೋಟದ ಮಾಲೀಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಬಾವಿಯಿಂದ ಚೀಲ ತೆಗೆದು ನೋಡಿದಾಗ ಜಿಂಕೆ ತಲೆ, ಚರ್ಮ,ಇತರ ವಸ್ತುಗಳು ಸಿಕ್ಕಿವೆ. ನಂತರ ಅರಣ್ಯ ಇಲಾಖೆ ತನಿಖೆಯಿಂದ 4 ಆರೋಪಿಗಳು ಜಿಂಕೆಯನ್ನು ಬಂದೂಕಿನಿಂದ ಹತ್ಯೆ ಮಾಡಿರುವುದು ಖಚಿತವಾಗಿದೆ.ಅರಣ್ಯ ಇಲಾಖೆಯವರು ಒಬ್ಬ ಆರೋಪಿ ಮುಂಡುಗೋಡು ಸತ್ಯನಾರಾಯಣ ಎಂಬುವರನ್ನು ಸೆ.6 ರಂದು ಬಂಧಿಸಿ ತನಿಖೆ ನಡೆಸಿದಾಗ ಉಳಿದ 3 ಆರೋಪಿಗಳು ಜಿಂಕೆ ಹತ್ಯೆಯಲ್ಲಿ ಬಾಗಿಯಾಗಿರುವುದಾಗಿ ತಿಳಿಸಿದ್ದಾನೆ. ಸೆರೆ ಸಿಕ್ಕಿದ ಆರೋಪಿ ಮುಂಡುಗೋಡು ಸತ್ಯನಾರಾಯಣ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಆರೋಪಿಗಳಾದ ಕೆ.ಕಣಬೂರು ಗ್ರಾಮದ ಕೆ.ನಾಗೇಂದ್ರ, ರಾಜೇಂದ್ರ, ಸಾತ್ವೀಕ್ ಎಂಬುವರ ಮೇಲೆ ವನ್ಯ ಜೀವಿ ಪ್ರಕರಣ ದಾಖಲಾಗಿದೆ.