ಕೊರಲಕೊಪ್ಪ ರಬ್ಬರ್‌ ತೋಟದಲ್ಲಿ 2 ಜಿಂಕೆಗಳ ಹತ್ಯೆ: ಒಬ್ಬನ ಬಂಧನ

KannadaprabhaNewsNetwork |  
Published : Sep 09, 2024, 01:36 AM IST
ನರಸಿಂಹರಾಜಪುರ ತಾಲೂಕು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕೊರಲಕೊಪ್ಪದ ರಬ್ಬರ್‌ ತೋಟದಲ್ಲಿ 2 ಜಿಂಕೆ ಹತ್ಯೆ ಮಾಡಿದ ಆರೋಪಿ ಮುಂಡುಗೋಡು ಸತ್ಯನಾರಾಯಣ ಅವರನ್ನು ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ. | Kannada Prabha

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕೊರಲಕೊಪ್ಪ ರಬ್ಬರ್‌ ತೋಟದಲ್ಲಿ 2 ಜಿಂಕೆಗಳ ಹತ್ಯೆ ಸಂಬಂಧ ಅರಣ್ಯ ಇಲಾಖೆಯವರು ಒಬ್ಬ ಆರೋಪಿಯನ್ನು ಬಂಧಿಸಿದ್ದು, 4 ಜನ ಆರೋಪಿಗಳ ಮೇಲೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿ ಪ್ರಕರಣ ದಾಖಲಿಸಿದ್ದಾರೆ.

- 4 ಜನರ ಮೇಲೆ ಅರಣ್ಯ ಇಲಾಖೆಯಿಂದ ಪ್ರಕರಣ ದಾಖಲು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕೊರಲಕೊಪ್ಪ ರಬ್ಬರ್‌ ತೋಟದಲ್ಲಿ 2 ಜಿಂಕೆಗಳ ಹತ್ಯೆ ಸಂಬಂಧ ಅರಣ್ಯ ಇಲಾಖೆಯವರು ಒಬ್ಬ ಆರೋಪಿಯನ್ನು ಬಂಧಿಸಿದ್ದು, 4 ಜನ ಆರೋಪಿಗಳ ಮೇಲೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿ ಪ್ರಕರಣ ದಾಖಲಿಸಿದ್ದಾರೆ.

ಕೊರಲಕೊಪ್ಪ ಕೆ.ನಾಗೇಂದ್ರ ಎಂಬುವರ ರಬ್ಬರ್‌ ತೋಟದಲ್ಲಿ ಸೆ. 3 ರ ರಾತ್ರಿ 2 ಜಿಂಕೆಗಳನ್ನು ಹತ್ಯೆ ಮಾಡಿ ಜಿಂಕೆ ತಲೆ, ಚರ್ಮ ಹಾಗೂ ದೇಹದ ಕೆಲವು ತುಣುಕುಗಳನ್ನು ರಬ್ಬರ್‌ ಚೀಲದಲ್ಲಿ ಕಟ್ಟಿ ಅವರ ಪಕ್ಕದ ತೋಟದ ರಿಂಗ್‌ ಬಾವಿಗೆ ಹಾಕಲಾಗಿತ್ತು. ಪಕ್ಕದ ತೋಟದ ಬಾವಿಯಲ್ಲಿ ಸೆ.6 ರ ಹೊತ್ತಿಗೆ ವಾಸನೆ ಬಂದಿದ್ದರಿಂದ ಪಕ್ಕದ ತೋಟದ ಮಾಲೀಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಬಾವಿಯಿಂದ ಚೀಲ ತೆಗೆದು ನೋಡಿದಾಗ ಜಿಂಕೆ ತಲೆ, ಚರ್ಮ,ಇತರ ವಸ್ತುಗಳು ಸಿಕ್ಕಿವೆ. ನಂತರ ಅರಣ್ಯ ಇಲಾಖೆ ತನಿಖೆಯಿಂದ 4 ಆರೋಪಿಗಳು ಜಿಂಕೆಯನ್ನು ಬಂದೂಕಿನಿಂದ ಹತ್ಯೆ ಮಾಡಿರುವುದು ಖಚಿತವಾಗಿದೆ.

ಅರಣ್ಯ ಇಲಾಖೆಯವರು ಒಬ್ಬ ಆರೋಪಿ ಮುಂಡುಗೋಡು ಸತ್ಯನಾರಾಯಣ ಎಂಬುವರನ್ನು ಸೆ.6 ರಂದು ಬಂಧಿಸಿ ತನಿಖೆ ನಡೆಸಿದಾಗ ಉಳಿದ 3 ಆರೋಪಿಗಳು ಜಿಂಕೆ ಹತ್ಯೆಯಲ್ಲಿ ಬಾಗಿಯಾಗಿರುವುದಾಗಿ ತಿಳಿಸಿದ್ದಾನೆ. ಸೆರೆ ಸಿಕ್ಕಿದ ಆರೋಪಿ ಮುಂಡುಗೋಡು ಸತ್ಯನಾರಾಯಣ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಆರೋಪಿಗಳಾದ ಕೆ.ಕಣಬೂರು ಗ್ರಾಮದ ಕೆ.ನಾಗೇಂದ್ರ, ರಾಜೇಂದ್ರ, ಸಾತ್ವೀಕ್ ಎಂಬುವರ ಮೇಲೆ ವನ್ಯ ಜೀವಿ ಪ್ರಕರಣ ದಾಖಲಾಗಿದೆ.

ಕೊಪ್ಪ ಡಿಎಫ್‌ ಒ ಎಲ್‌.ನಂದೀಶ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್‌ ನೇತೃತ್ವದಲ್ಲಿ ಮುತ್ತಿನಕೊಪ್ಪ ಶಾಖೆ ಉಪ ವಲಯ ಅರಣ್ಯಾಧಿಕಾರಿ ಮಾರುತಿ ಮಾಳಿ, ವಿವಿಧ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಅರುಣಕುಮಾರ ಬಾರಂಗಿ, ಅಕ್ಷತ, ಕೆ.ಕಣಬೂರು ಗಸ್ತು ಅರಣ್ಯ ಪಾಲಕರಾದ ಸತೀಶ್‌,ಜಯಣ್ಣ, ಶ್ರೀಶೈಲ ನಾವಿ,ಬಲರಾಂ ಗೌಡ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ